ಸಾರಾಂಶ
ಚಾಮರಾಜನಗರದಲ್ಲಿ ಬಸವ ಜಯಂತಿ ಅಂಗವಾಗಿ ಮೆರವಣಿಗೆಯಲ್ಲಿ ಗಮನ ಸೆಳೆದ ಕಲಾ ತಂಡ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಡಳಿತದಿಂದ ಬಸವ ಜಯತಿ ಅಂಗವಾಗಿ ನಡೆದ ಬಸವಣ್ಣನ ಭಾವಚಿತ್ರದ ಮೆರವಣಿಗೆಯು ನಗರದಲ್ಲಿ ಅದ್ಧೂರಿಯಿಂದ ನಡೆಯಿತು.ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಅಶ್ವಾರೂಢ ಬಸವಣ್ಣನ ಪುತ್ಥಳಿಗ ಗಣ್ಯರು ಪುಷ್ಪಾರ್ಚನೆ ಮಾಡಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಬಸವಣ್ಣನ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡುತ್ತಿದ್ದಂತೆಯೇ, ಮೆರವಣಿಗೆಯು ಜಿಲ್ಲಾಡಳಿತ ಭವನದಿಂದ ಹೊರಟು, ಬಿ.ರಾಚಯ್ಯ ಜೋಡಿ ರಸ್ತೆ, ಶ್ರೀ ಭುವನೇಶ್ವರಿ ವೃತ್ತ, ಡಿವಿಯೇಷನ್ ರಸ್ತೆ, ಸುಲ್ತಾನ್ ಷರೀಫ್ ಸರ್ಕಲ್, ಫಾರೆಸ್ಟ್ ಕಚೇರಿ ಮುಂಭಾಗದಿಂದ ಅನ್ವರ್ ಪಾ ಸರ್ಕಲ್, ದೊಡ್ಡ ಅಂಗಡಿ ಬೀದಿ, ನಾಗಪ್ಪಶೆಟ್ಟರ ಚೌಕ, ಶ್ರೀ ಮಹಾವೀರ ಸರ್ಕಲ್, ನೃಪತುಂಗ ಸರ್ಕಲ್, ಚಿಕ್ಕಅಂಗಡಿ ಬೀದಿ, ಸಂತೇಮರಹಳ್ಳಿ ಸರ್ಕಲ್ ಡಿವಿಯೇಷನ್ ರಸ್ತೆಯ ಮುಖಾಂತರ ಶ್ರೀ ಭುವನೇಶ್ವರಿ ವೃತ್ತದ ಬಳಿ ಇರುವ ಪೇಟೆ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಮಾಪ್ತಗೊಂಡಿತು.
ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳಾದ ನಂದಿಧ್ಬಜ, ವೀರಗಾಸೆ, ಕಂಸಳೆ, ಹುಲಿಕುಣಿತ, ಗೊರವರ ಕುಣಿತ, ಡೊಳ್ಳುಕುಣಿತ, ಮಹಿಳೆಯರ ಚಂಡೆ ಮೇಳ, ಬ್ಯಾಂಡ್ಸೆಟ್, ನಗಾರಿ, ನಾದಸ್ವರ ಹಾಗೂ ಜೋಡಿ ಎತ್ತುಗಳು, ಬಿದಿರುಗೊಂಬೆ ತಂಡ, ನಗಾರಿ ಮೇಳ, ವಿವಿಧ ಗ್ರಾಮಗಳಿಂದ ಅಲಂಕೃತವಾಗಿ ಬಂದಿದ್ದ ಬಸವಣ್ಣನ ಭಾವಚಿತ್ರಗಳು ಮೆರವಣಿಗೆಗೆ ಮೆರಗು ತಂದವು. ಮೆರವಣಿಗೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ನಗರಸಭಾ ಅಧ್ಯಕ್ಷ ಸುರೇಶ್, ಉ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಬಿ.ಟಿ.ಕವಿತಾ, ಮುಖಂಡರಾದ ಮೂಡ್ಲುಪುರ ನಂದೀಶ್ ಇತರರು ಭಾಗವಹಿಸಿದ್ದರು.