ಇಂತಹ ಅನಿಷ್ಟ ಆಚರಣೆಗಳು, ನಡವಳಿಕೆಗಳು ಇರುವ ಕಾರಣದಿಂದಲೇ ಅನೇಕ ಮಂದಿ ಸನಾತನ ಧರ್ಮವನ್ನು ವಿರೋಧಿಸುತ್ತಿದ್ದಾರೆ. ನಾಯಿಯನ್ನು ನಾರಾಯಣ ಎನ್ನುವ, ಕೋತಿಯನ್ನು ಆಂಜನೇಯ ಎನ್ನುವ, ನರಿ ಅದೃಷ್ಟದ ಸಂಕೇತ ಎನ್ನುವ, ಗೋವನ್ನು ತಾಯಿ ಎನ್ನುವ ಮಂದಿ ಮನುಷ್ಯನನ್ನು ಮನುಷ್ಯರಂತೆ ಕಾಣದೆ ಅಪಮಾನಿಸುವ ಇವರ ಮನಸ್ಥಿತಿ ಅದೆಷ್ಟು ಕೊಳಕು ಎಂಬುದನ್ನು ತೋರಿಸುತ್ತದೆ .
ಕನ್ನಡಪ್ರಭ ವಾರ್ತೆ ಮದ್ದೂರು
ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಂದ ಮೈದಾನ ಅಪವಿತ್ರವಾಗಿದೆ ಎಂದು ಗಂಗಾಜಲ ಹಾಕಿ ಸ್ವಚ್ಛಗೊಳಿಸಿ ಹೋಮ ಮಾಡಿದ ಮನುವಾದಿಗಳ ನಡವಳಿಕೆಯನ್ನು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಎಂ.ಸಿ.ಬಸವರಾಜು ಖಂಡಿಸಿದರು.ನಗರದಲ್ಲಿ ಆಯೋಜಿಸಿದ್ದ ಪರಿಷತ್ತಿನ ಸಭೆಯಲ್ಲಿ ಮಾತನಾಡಿ, ಇಂತಹ ಅನಿಷ್ಟ ಆಚರಣೆಗಳು, ನಡವಳಿಕೆಗಳು ಇರುವ ಕಾರಣದಿಂದಲೇ ಅನೇಕ ಮಂದಿ ಸನಾತನ ಧರ್ಮವನ್ನು ವಿರೋಧಿಸುತ್ತಿದ್ದಾರೆ. ನಾಯಿಯನ್ನು ನಾರಾಯಣ ಎನ್ನುವ, ಕೋತಿಯನ್ನು ಆಂಜನೇಯ ಎನ್ನುವ, ನರಿ ಅದೃಷ್ಟದ ಸಂಕೇತ ಎನ್ನುವ, ಗೋವನ್ನು ತಾಯಿ ಎನ್ನುವ ಮಂದಿ ಮನುಷ್ಯನನ್ನು ಮನುಷ್ಯರಂತೆ ಕಾಣದೆ ಅಪಮಾನಿಸುವ ಇವರ ಮನಸ್ಥಿತಿ ಅದೆಷ್ಟು ಕೊಳಕು ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ಮಾತನಾಡಿ, ದಲಿತ ನಾಯಕನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಹೇಸಿಗೆ ಮನಸ್ಥಿತಿಯುಳ್ಳ ಜನರು ಈ ರೀತಿ ಅಪಮಾನಿಸಿರುವುದು ಖಂಡನೀಯ. ಈ ಕೃತ್ಯ ಎಸಗಿದವರ ವಿರುದ್ಧ ಸರ್ಕಾರ ಜಾತಿ ನಿಂದನೆ ದೂರು ದಾಖಲಿಸಿಕೊಂಡು, ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಘಟಕದ ಉಪಾಧ್ಯಕ್ಷ ಡಿ.ದೇವರಾಜ್ ಕೊಪ್ಪ ಮಾತನಾಡಿ, ಶುದ್ಧವಾಗಬೇಕಾಗಿರುವುದು ಮೈದಾನವಲ್ಲ, ಅವರ ಮನಸ್ಸು. ಅದನ್ನು ತೊಳೆದುಕೊಳ್ಳಲಿ. ಬಹು ಸಂಖ್ಯಾತರಾಗಿರುವ ಶೂದ್ರ ದಲಿತ ಸಮುದಾಯವನ್ನು ಪದೇಪದೇ ಹೀಗೆ ಧರ್ಮ, ಸಂಸ್ಕೃತಿ, ಪರಂಪರೆ ಹೆಸರಿನಲ್ಲಿ ಅಪಮಾನಿಸುವುದು ಸರಿಯಲ್ಲ. ಇಂತಹ ಕೆಟ್ಟ ಆಚರಣೆಗಳನ್ನು ನಿಲ್ಲಿಸಿ, ದಲಿತರನ್ನು ಮನುಷ್ಯರಂತೆ ಕಾಣಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಪರಿಷತ್ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಬಿ.ಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಡಿ.ಸಿ.ಮಹೇಂದ್ರ, ಉಪಾಧ್ಯಕ್ಷ ಶಿವರಾಜು ಮರಳಿಗ, ಪ್ರಧಾನ ಕಾರ್ಯದರ್ಶಿ ಕೆ.ಟಿ. ಶಿವಕುಮಾರ್, ವಿಜೇಂದ್ರ ಕುಮಾರ್ ಇದ್ದರು.