ಸಾರಾಂಶ
ರಾಜ್ಯದ ಜನತೆಗೆ ಆರ್ಥಿಕ ಶಕ್ತಿ ತುಂಬಿರುವ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ದೃಢ ನಿಲುವು ತಳೆದಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಹಾನಗಲ್ಲ: ರಾಜ್ಯದ ಜನತೆಗೆ ಆರ್ಥಿಕ ಶಕ್ತಿ ತುಂಬಿರುವ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ದೃಢ ನಿಲುವು ತಳೆದಿದ್ದಾರೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಮಂಗಳವಾರ ಇಲ್ಲಿ ತಾಪಂ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಇಷ್ಟೊಂದು ದೊಡ್ಡ ಪ್ರಮಾಣದ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿರುವುದು ಇಡೀ ದೇಶದಲ್ಲಿಯೇ ನಮ್ಮ ರಾಜ್ಯದಲ್ಲಿ ಮಾತ್ರ. ಪ್ರತಿ ಕುಟುಂಬಗಳಿಗೆ ತಿಂಗಳಿಗೆ ೫ರಿಂದ ೬ ಸಾವಿರ ರು.ವರೆಗೆ ಆರ್ಥಿಕ ನೆರವು ಸಿಗುತ್ತಿದೆ. ಹಾನಗಲ್ ತಾಲೂಕಿನಲ್ಲಿ ೬೧ ಸಾವಿರಕ್ಕಿಂತ ಅಧಿಕ ಕುಟುಂಬಗಳು ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿವೆ. ಮಹಿಳಾ ಸಮೂಹ ಸಬಲೀಕರಣ ಸಾಧ್ಯವಾಗುತ್ತಿದ್ದು, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಹ ಸಾಧನೆ ತೋರಲು ಸಾಧ್ಯವಾಗಿದೆ. ಇಂಥ ಮಹತ್ವಾಕಾಂಕ್ಷೆಯ ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ಕಾರಣ ಬೇರೆ ಕೆಲ ಕಾರ್ಯಕ್ರಮಗಳಿಗೆ ಸ್ವಲ್ಪ ಹಿನ್ನಡೆ ಉಂಟಾಗುವುದು ಸಹಜ. ಹಾಗಾಗಿ ಸಮುದಾಯದ ಸಹಕಾರ ನಮಗೆ ಬೇಕಿದೆ ಎಂದು ಹೇಳಿದ ಶ್ರೀನಿವಾಸ ಮಾನೆ, ಹಾನಗಲ್ ತಾಲೂಕಿನ ಪುರಸಭೆ ಮತ್ತು ಗ್ರಾಪಂಗಳು ೧೫ ಕೋಟಿ ಟ್ಯಾಕ್ಸ್ ಬಾಕಿ ಉಳಿಸಿಕೊಂಡಿವೆ. ಇದರಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕಷ್ಟಸಾಧ್ಯವಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿ ಸಿಗುವ ಒಂದು ಕಂತು ಟ್ಯಾಕ್ಸ್ ಬಾಕಿ ಮೊತ್ತಕ್ಕೆ ಭರಿಸಿದರೆ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕ ಸಂಕಷ್ಟದಿಂದ ಹೊರತರಬಹುದಾಗಿದೆ ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ಜನರ ಬದುಕು ಬದಲಿಸಿವೆ. ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಸಮಿತಿ ಸದಸ್ಯರೊಂದಿಗೆ ಕಾಳಜಿ ವಹಿಸಲಾಗುವುದು. ವಿಶೇಷ ಅಭಿಯಾನ ನಡೆಸಿ, ಅರ್ಹರಿಗೆ ಯೋಜನೆಗಳ ನೆರವು ದೊರಕಿಸಲಾಗುವುದು ಎಂದು ಹೇಳಿದರು. ತಹಸೀಲ್ದಾರ್ ರೇಣುಕಾ ಎಸ್., ತಾಪಂ ಇಒ ಪರಶುರಾಮ, ಸಿಡಿಪಿಒ ನಂದಕುಮಾರ, ಕೆಪಿಸಿಸಿ ಸದಸ್ಯರಾದ ಟಾಕನಗೌಡ ಪಾಟೀಲ, ಖ್ವಾಜಾಮೊಹಿದ್ದೀನ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ, ಉಮೇಶ ತಳವಾರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಲಿಂಗರಾಜ ಮಡಿವಾಳರ, ರಾಮಚಂದ್ರ ಕಲ್ಲೇರ ಮಾತನಾಡಿದರು. ಶಿವಾನಂದ ಕ್ಯಾಲಕೊಂಡ ನಿರೂಪಿಸಿದರು.