ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಸಿಎಂ ಸಿದ್ಧರಾಮಯ್ಯ ಚುನಾವಣೆಗೋಸ್ಕರವೇ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಇಲ್ಲವಾದರೆ ಚುನಾವಣೆ ಮುಂಚೆ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಬೇಕಿತ್ತು ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆಕ್ರೋಶ ಹೊರಹಾಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಅವರು, ಚುನಾವಣೆ ಬಂದಾಗ ಏಕೆ ಮಾಡಬೇಕು?, ಇಂಥಹ ಹೇಯ ಕೃತ್ಯಗಳನ್ನು ಬಿಟ್ಟು ಬಿಡಿ. ಕಳೆದ ಒಂದೂವರೆ ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳಿಲ್ಲ. ರಾಜ್ಯದ ಜನರು ಇವರ ಬಗ್ಗೆ ತೀರ್ಮಾನ ಮಾಡುತ್ತಾರೆಂದು ವಾಗ್ದಾಳಿ ನಡೆಸಿದರು.ಎಸ್ಸಿ ಸಮಾಜದ ಅನುದಾನವನ್ನು ಬೇರೆಡೆ ಬಳಕೆ ಮಾಡಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಂಸದ ರಮೇಶ ಜಿಗಜಿಣಗಿ, ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಮಾಜಿ ಸಚಿವ ನಾಗೇಂದ್ರ ವಿರುದ್ದ ಹಾಗೂ ಸರ್ಕಾರದ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗೆ ಅತ್ಯಂತ ಖೇದವಾಗಿದೆ. ನಾನು ಹಿಂದೆ ಸಮಾಜ ಕಲ್ಯಾಣ ಮಂತ್ರಿಯಾಗಿದ್ದಾಗ ಈ ರಾಜ್ಯದ ದಲಿತ ಬಂಧುಗಳಿಗೆ ಗಂಗಾ ಕಲ್ಯಾಣ ಯೋಜನೆ ಮಾಡಿದ್ಧೆ. ನೀರಾವರಿ ಆಗಬೇಕು, ಯಾರಿಗೆ ಜಮೀನು ಇಲ್ಲ ಅವರಿಗೆ ಜಮೀನು ಕೊಡಿಸಬೇಕು ಅಂತ ಗಂಗಾ ಕಲ್ಯಾಣ ಯೋಜನೆ ಹುಟ್ಟು ಹಾಕಿದೆ ಎಂದರು.ಮಾಜಿ ಸಚಿವ ನಾಗೇಂದ್ರ ಅವರು ₹ 43.33 ಕೋಟಿ ಹಣವನ್ನ ಎಸ್ಸಿ, ಎಸ್ಟಿ ಕಾರ್ಪೋರೇಷನ್ನಿಂದ ತಗೆದು ವಾಲ್ಮೀಕಿ ಸಮುದಾಯದ ಖಾತೆಗೆ ವರ್ಗಾಯಿಸಿ ಅವ್ಯವಹಾರ ಮಾಡಿದ್ದಾರೆ. ಇದು ಕೇವಲ ನಾಗೇಂದ್ರ ಒಬ್ಬರ ನಾಚಿಗೇಡಿನ ಕೆಲಸ ಅಲ್ಲ. ಸರ್ಕಾರಕ್ಕೆ ಇದು ಅತ್ಯಂತ ನಾಚಿಗೇಡಿನ ಕೆಲಸ. ಕಾಂಗ್ರೆಸ್ನವರು ಚುನಾವಣೆ ಬಂದಾಗ ಮುಸ್ಲಿಂರು, ದಲಿತರು, ಹಿಂದುಳಿದ ವರ್ಗದವರು ಒಟ್ಟಾಗಿ ಇರಬೇಕು ಎಂದು ಹೇಳುತ್ತಾರೆ. ಆದರೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿನೇ ಈ ಎಲ್ಲ ಸಮುದಾಯಗಳಿಗೆ ವಿರುದ್ಧವಾಗಿ ಇದ್ದಾನೆ. ಇಂತಹವೆಲ್ಲ ಮಾಡುವ ಇವರಿಗೆ ನಾಚಿಗೆ ಆಗಲ್ವಾ?. ಈ ಸಮಾಜಗಳನ್ನ ತುಷ್ಟಿಕರಿಸುವಲ್ಲಿ ಮಾತ್ರ ಕಾಂಗ್ರೆಸ್ನವರು ಇದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ಸಮಾಜದವರು ಭಾಗವಹಿಸಿದ್ದರು ಎಂದಿದ್ದಾರೆ.