ಗ್ರಾಮೀಣ ಬದುಕಿನ ಆದರ್ಶ ಉಳಿಸಬೇಕಾಗಿದೆ: ಭಾರತಿ ಮಯ್ಯ

| Published : Jul 29 2024, 12:58 AM IST

ಸಾರಾಂಶ

ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಆ.೧೧ರಂದು ಹಂದಟ್ಟಿನ ಗೆಳೆಯರ ಬಳಗ ಸಭಾಂಗಣದಲ್ಲಿ ನಡೆಯುವ ಆಸಾಡಿ ಒಡ್ರ್ - ಊರ್ ಕೇರಿ ಬದ್ಕ್ ಕಾರ್ಯಕ್ರಮದ ಪೂರ್ವಭಾವಿ ಗ್ರಾಮೀಣ ಕ್ರೀಡಾಕೂಟ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಮರೆಯಾಗುತ್ತಿರುವ ಗ್ರಾಮೀಣ ಭಾಷೆ, ಬದುಕಿನ ಆದರ್ಶಗಳನ್ನು ಉಳಿಸುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಪಂಚವರ್ಣ ಮಹಿಳಾ ಮಂಡಲದ ಅರ್ಥಪೂರ್ಣ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಸಾಂಸ್ಕೃತಿಕ ಚಿಂತಕಿ ಸ್ನೇಹಕೂಟದ ಭಾರತಿ ವಿ.ಮಯ್ಯ ಹೇಳಿದರು.

ಅವರು ಭಾನುವಾರ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಆ.೧೧ರಂದು ಹಂದಟ್ಟಿನ ಗೆಳೆಯರ ಬಳಗ ಸಭಾಂಗಣದಲ್ಲಿ ನಡೆಯುವ ಆಸಾಡಿ ಒಡ್ರ್ - ಊರ್ ಕೇರಿ ಬದ್ಕ್ ಕಾರ್ಯಕ್ರಮದ ಪೂರ್ವಭಾವಿ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಬದುಕಿನ ಅದೆಷ್ಟೋ ಕ್ರೀಡೆಗಳು, ಸಾಂಸ್ಕೃತಿಕ ಚಹರೆಗಳು ಪ್ರಸ್ತುತ ಯುವ ಸಮೂಹಕ್ಕೆ ಪಸರಿಸುವ ಜತೆಗೆ ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು. ಅಭ್ಯಾಗತರಾಗಿ ಕೋಟತಟ್ಟು ಗ್ರಾಪಂ ಕಾರ್ಯದರ್ಶಿ ಸುಮತಿ ಅಂಚನ್, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ರತ್ನಾ ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಉಪಸ್ಥಿತರಿದ್ದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಉಪಾಧ್ಯಕ್ಷೆ ಪುಷ್ಪಾ ಕೆ. ಹಂದಟ್ಟು ಪ್ರಸ್ತಾವಿಕ ಮಾತನಾಡಿದರು. ಸಂಚಾಲಕಿ ಸುಜಾತಾ ಎಂ. ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಕೀಲಾ ಎನ್. ಪೂಜಾರಿ ವಂದಿಸಿದರು.

ಈ ಗ್ರಾಮೀಣ ಕ್ರೀಡಾಕೂಟದ ಅಂಗವಾಗಿ ಹಿಡಿ ಕಡ್ಡಿ ನೇಯುವುದು, ಹಲಸಿನ ಕಡ್ಬು ಕೊಟ್ಟೆ ರಚಿಸುವುದು, ಸಂಗೀತ ಕುರ್ಚಿ, ಮಡಿಕೆ ಒಡೆಯುವ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳು ಗಮನ ಸೆಳೆದವು.