ಸಾರಾಂಶ
ಯಲ್ಲಾಪುರ ತಾಲೂಕಿನ ೧೭ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೮೭ ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿಯಲ್ಲಿ ಅತೀ ಸೂಕ್ಷ್ಮ ಪರಿಸರ ಪ್ರದೇಶವೆಂದು ಗುರುತಿಸಲಾಗಿದೆ.
ಯಲ್ಲಾಪುರ:
ತಾಲೂಕಿನ ೧೭ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೮೭ ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿಯಲ್ಲಿ ಅತೀ ಸೂಕ್ಷ್ಮ ಪರಿಸರ ಪ್ರದೇಶವೆಂದು ಗುರುತಿಸಲಾಗಿದ್ದು, ಈ ಅವೈಜ್ಞಾನಿಕ ವರದಿಯ ಅನುಷ್ಠಾನ ಮಾಡಬಾರದೆಂದು ಜಿಲ್ಲಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ವರದಿಯಲ್ಲಿ ಪ್ರಸ್ತಾಪಿಸಿದ ಅಂಶಗಳು ಮಾರಕವಾಗಿವೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಡಿ. ೨ರಂದು ಶಿರಸಿಯಲ್ಲಿ ನಡೆಯಲಿರುವ ಕಸ್ತೂರಿ ರಂಗನ್ ವರದಿ ವಿರೋಧಿ ಜಾಥಾದ ಪೂರ್ವಭಾವಿ ಸಭೆ ಮತ್ತು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಶೇ. ೬೪ರಷ್ಟು ಭೌಗೋಳಿಕ ಪ್ರದೇಶ ಅತೀ ಸೂಕ್ಷ್ಮ ಪರಿಸರ ವ್ಯಾಪ್ತಿಗೊಳಪಡುವುದರಿಂದ ನೈಜ ಜೀವನ ಮತ್ತು ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಲಿದೆ. ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದರು.ತಾಲೂಕಾಧ್ಯಕ್ಷ ಭೀಮ್ಸಿ ವಾಲ್ಮೀಕಿ, ಸಂಚಾಲಕರಾದ ಅಣ್ಣಪ್ಪ ನಾಯ್ಕ ಕಣ್ಣೀಗೇರಿ, ಸೀತಾರಾಮ ನಾಯ್ಕ ಕುಂದರಗಿ, ಶಂಕರ ದೇವಾಡಿಗ ಭರತನಹಳ್ಳಿ, ಸುಬ್ರಾಯ ಭಟ್ಟ ಮಾಗೋಡ, ರವಿ ಕೈಟಗೇರಿ, ಬಾಳು ಕೊಕರೆ ಜಕ್ಕೊಳ್ಳಿ, ರಾಮಾ ಸಿದ್ಧಿ ಉಚಗೇರಿ, ದೊಂಡು ಕೊಕರೆ, ರವೀಂದ್ರ ಹೆಗಡೆ ದೊಡ್ಡಬೇಣ, ಪ್ರಭಾಕರ ನಾಯ್ಕ ಕುಂದರಗಿ, ಗಣಪತಿ ಭಟ್ಟ, ಬಾಬು ಪೂಜಾರಿ, ದಿವಾಕರ ಮರಾಠಿ ಆನಗೋಡ, ರಾಘವೇಂದ್ರ ನಾಯ್ಕ ಗುಳ್ಳಾಪುರ, ಭಾಸ್ಕರ ಗೌಡ ಹಿತ್ಲಳ್ಳಿ, ಶೇಖರ್ ನಾಯ್ಕ ಹಿತ್ಲಳ್ಳಿ ಮುಂತಾದವರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.