ಸರ್ಕಾರಿ ಆಸ್ಪತ್ರೆ ಕಟ್ಟಡದ ಜಾಗವೂ ವಕ್ಫ್‌ ಪಾಲು!

| Published : Nov 07 2024, 12:01 AM IST

ಸಾರಾಂಶ

ತಾಲೂಕಿನಲ್ಲಿ ಈಗಾಗಲೇ 165 ಎಕರೆಗೂ ಹೆಚ್ಚು ಜಮೀನಿನ ಮೇಲೆ ವಕ್ಫ್‌ ತೂಗು ಗತ್ತಿ ನೇತಾಡ್ತಿದ್ದು. ಕೆಲವು ಗ್ರಾಮಗಳ ಪಹಣಿಯ ಕಾಲಂ ನಂಬರ್‌ 11ರ ಋಣಭಾರದಲ್ಲಿ ವಕ್ಫ್‌ ಆಸ್ತಿ ಎಂದು ಉಲ್ಲೇಖವಾಗ್ತಿದೆ.

ಕನ್ನಡಪ್ರಭ ವಾರ್ತೆ, ಔರಾದ್‌

ವಕ್ಫ್‌ ವಿವಾದ ಬಗೆದಷ್ಟೂ ಬಯಲಾಗುತ್ತಿದೆ. ನೋಡು ನೋಡುತ್ತಲೇ ಜನರ ಕಾಲ ಕೆಳಗಿನ ಜಮೀನು ಮತ್ತೊಬ್ಬರ ಹೆಸರಿನಲ್ಲಿದೆ ಎಂದು ಗೊತ್ತಾಗ್ತಿದೆ. ಇದರಿಂದ ಕಕ್ಕಾಬಿಕ್ಕಿಯಾಗುತ್ತಿರುವ ಜನರು ಸರ್ಕಾರದತ್ತ ಕೆಂಗಣ್ಣು ಬೀರಿ ಹಿಡಿಶಾಪ ಹಾಕುತ್ತಿದ್ದಾರೆ.

ತಾಲೂಕಿನ ಜಮಾಲಪೂರ್ ಗ್ರಾಮದಲ್ಲಿ ನಿರ್ಮಾಣಗೊಂಡ ಕೆಲವು ಮನೆಗಳ ಜಮೀನು ವಕ್ಫ್‌ ಮಂಡಳಿ ಹೆಸರಿಲ್ಲಿ ನಮೂದಾದ್ರೆ, ಕಮಲನಗರ ತಾಲೂಕಿನ ತೋರಣಾ ಗ್ರಾಮದ ಸಮುದಾಯ ಆಸ್ಪತ್ರೆಯ ಕಟ್ಟಡದ ಪಹಣಿಯಲ್ಲೂ ವಕ್ಫ್‌ ಆಸ್ತಿ ಉಲ್ಲೇಖವಾಗಿದೆ. ತಾಲೂಕಿನಲ್ಲಿ ಈಗಾಗಲೇ 165 ಎಕರೆಗೂ ಹೆಚ್ಚು ಜಮೀನಿನ ಮೇಲೆ ವಕ್ಫ್‌ ತೂಗು ಗತ್ತಿ ನೇತಾಡ್ತಿದ್ದು. ಕೆಲವು ಗ್ರಾಮಗಳ ಪಹಣಿಯ ಕಾಲಂ ನಂಬರ್‌ 11ರ ಋಣಭಾರದಲ್ಲಿ ವಕ್ಫ್‌ ಆಸ್ತಿ ಎಂದು ಉಲ್ಲೇಖವಾಗ್ತಿದೆ. ಈಗಾಗಲೆ ತಾಲೂಕಿನಲ್ಲಿ ವಕ್ಫ್‌ ಆಸ್ತಿ ಎಷ್ಟು? ಮತ್ತು ಇನ್ನೂ ಎಷ್ಟು ಆಸ್ತಿಗಳು ವಕ್ಫ್‌ಗೆ ಸೇರ್ತವೆ ಎಂಬ ಮಾಹಿತಿ ಲಭ್ಯವಾಗಿದೆ.

ಪಹಣಿಯಲ್ಲಿರುವ ವಕ್ಫ್‌ ಆಸ್ತಿ:

ಮಹಾಡೋಣಗಾಂವ್‌ ಸರ್ವೆ ನಂಬರ್‌ 96/2 ರಲ್ಲಿ 20-20 ಅಡಿ, ನಾಗನಪಲ್ಲಿ ಗ್ರಾಮದ ಸ.ನಂ 137 ಮತ್ತು 138 ನಲ್ಲಿ 2.26 ಎಕರೆ, ಜಂಬಗಿ ಸ.ನಂ 32 ಎಕರೆ 35 ಗುಂಟೆ, ಸಂತಪೂರ್‌ ಗ್ರಾಮದ ಸ.ನಂ 9 ರಲ್ಲಿ 4 ಎಕರೆ 31 ಗುಂಟೆ, ಔರಾದ್‌ ಪಟ್ಟಣದ ಸ.ನಂ 43 ರಲ್ಲಿ 5.25 ಎಕರೆ, ಮಸ್ಕಲ್‌ ಗ್ರಾಮದ ಸ.ನಂ 5 ಮತ್ತು 86 ರಲ್ಲಿ 6.23 ಎಕರೆ, ಜಮಾಲಪೂರ್‌ ಗ್ರಾಮದ ಸ.ನಂ 23 ರಲ್ಲಿ 2.15 ಎಕರೆ, ಭಂಡಾರ ಕುಮಠಾ ಗ್ರಾಮದ ಸ.ನಂ 181ರಲ್ಲಿ 1.15 ಎಕರೆ, ಗೌಂಡಗಾಂವ್‌ ಗ್ರಾಮದ ಸ,ನಂ 41 ರಲ್ಲಿ 2.16 ಎಕರೆ, ರಾಯಪಲ್ಲಿ ಗ್ರಾಮದ ಸ.ನಂ 39 ಮತ್ತು 78 ರಲ್ಲಿ 3.38 ಎಕರೆ, ಬೇಲ್ದಾಳನಲ್ಲಿ 39 ಗುಂಟೆ ಜಮಿನು ವಕ್ಫ ಆಸ್ತಿ ಎಂದು 2013-14ರಲ್ಲಿ ನಮೂದಿಸಿರುವದು ಉಲ್ಲೇಖವಾಗಿದೆ.

ಪಹಣಿ ಸೇರಬೇಕಾಗಿರುವ ವಕ್ಫ್‌ ಆಸ್ತಿ:

ಬೆಳಕುಣಿ ಚೌಧರಿ ಗ್ರಾಮದ ಸರ್ವೆ ನಂಬರ್‌ 29ರಲ್ಲಿ 8.34 ಎಕರೆ, ಹೆಡಗಾಪೂರ್ ಗ್ರಾಮದ ಸ.ನಂ.130 ರಲ್ಲಿನ 10.20 ಎಕರೆ, ಚಿಕಲಿ (ಜೆ) ಗ್ರಾಮದ ಸ.ನಂ. 84 ರಲ್ಲಿನ 36 ಗುಂಟೆ, ನಿಟ್ಟೂರ್(ಕೆ) ಗ್ರಾಮದ ಸ.ನಂ 33 ರಲ್ಲಿ 2.1 ಎಕರೆ ಕಮಲನಗರ ತಾಲೂಕಿನ ಕುಶನೂರ್‌ ಗ್ರಾಮದ ಸ.ನಂ 31 ಮತ್ತು 35 (ಎ) ರಲ್ಲಿನ 3.4 ಎಕರೆ, ಮಹಾಡೋಣಗಾಂವ್‌ ಗ್ರಾಮದ ಸ.ನಂ 93ರಲ್ಲಿನ 3.26 ಎಕರೆ, ಧುಪತ ಮಹಾಗಾಂವ್‌ ಗ್ರಾಮದ ಸ.ನಂ 2 ರಲ್ಲಿನ 1.16 ಎಕರೆ, ಉಜನಿ ಗ್ರಾಮದ ಸ,ನಂ 146ರಲ್ಲಿನ 3.19ಎಕರೆ, ನಾಗನಪಲ್ಲಿ ಗ್ರಾಮದ ಸ.ನಂ 63 ಮತ್ತು 64 ರಲ್ಲಿನ 5.22 ಎಕರೆ, ಹೋಕ್ರಾಣ ಗ್ರಾಮದ ಸ.ನಂ 61 ರಲ್ಲಿನ 5 ಎಕರೆ, ಜಮಗಿ ಗ್ರಾಮದ ಸ,ನಂ. 23 ರಲ್ಲಿನ 29.12 ಎಕರೆ, ಕೌಠಾ (ಬಿ) ಗ್ರಾಮದ ಸ.ನಂ 55 ರಲ್ಲಿನ 9.3 ಎಕರೆ, ಗೌಂಡಗಾಂವ್‌ ಗ್ರಾಮದ ಸ.ನಂ 1 ರಲ್ಲಿನ 7.6 ಎಕರೆ, ಜಿರ್ಗಾ ಗ್ರಾಮದ ಸ.ನಂ 72 ರಲ್ಲಿನ 8.22 ಎಕರೆ, ಕರಂಜಿ (ಬಿ) ಗ್ರಾಮದ ಸ.ನಂ 33 ರಲ್ಲಿನ 18 ಗುಂಟೆ, ಜೋಜನಾ ಗ್ರಾಮದ ಸ.ನಂ 78 ರಲ್ಲಿನ 1.30 ಎಕರೆ ಹಾಗೂ ನಾರಾಯಣಪೂರ್‌ ಗ್ರಾಮದ ಸ.ನಂ 1ರಲ್ಲಿ 30 ಗುಂಟೆ ಜಮೀನು ಸೇರಿದಂತೆ ಇನ್ನಷ್ಟು ಜಮೀನು ಕೂಡ ಪಹಣಿಯಲ್ಲಿ ಸೇರಬೇಕಾಗಿದೆ ಎಂದು ಮೂಲಗಳು ಹೇಳಿವೆ.

ಇನ್ನು, ವಕ್ಫ್‌ ಬೋರ್ಡ್‌ ಹೆಸರಿನಲ್ಲಿ ಆಸ್ತಿಗಳು ನಮೂದಾಗ್ತಿರುವ ಬೆನ್ನಲ್ಲೆ ತಾಲೂಕಿನಲ್ಲೂ ಸಾರ್ವಜನಿಕ ವಲಯದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ ಎನ್ನುವ ಕುತೂಹಲ ಹೆಚ್ಚಾಗ್ತಿವೆ. ವಕ್ಫ್‌ ಮಂಡಳಿ ಹೀಗೆ ಹಿಂದೆ ಮುಂದೆ ನೋಡದೆ ಜಮಿನಿನ ಮೇಲೆ ಕಬ್ಜಾ ಹಾಕ್ತಿರುವುದು ಸರಿಯಲ್ಲ. ತಕ್ಷಣ ಇದೆಲ್ಲವನ್ನೂ ನಿಲ್ಲಿಸಬೇಕು ಅನಗತ್ಯವಾಗಿ ಪಹಣಿಯಲ್ಲಿ ಸೇರಿಸಿ ಗೊಂದಲ ಹುಟ್ಟಿಸುತ್ತಿರುವ ಸರ್ಕಾರದ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. ಆಗಿರುವ ಗೊಂದಲ ಸರಿಪಡಿಸಿ ಸಾರ್ವಜನಿಕರಿಗೆ ನೆಮ್ಮದಿ ನೀಡಬೇಕು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಿವರಾಜ ಅಲ್ಮಾಜೆ ಆಗ್ರಹಿಸಿದರು.

2012 ಮತ್ತು 2014ರ ಪಹಣಿಗಳಲ್ಲಿ ವಕ್ಪ್‌ ಮಂಡಳಿ ಹೆಸರು ನಮೂದಾಗಿವೆ. ಇತ್ತೀಚೆಗೆ ಯಾವುದೇ ಪಹಣಿಯಲ್ಲಿ ವಕ್ಫ ಆಸ್ತಿ ಎಂದು ನಮೂದಾಗಿಲ್ಲ. ಇವೆಲ್ಲವೂ ದಶಕದ ಹಿಂದೆಯಾಗಿರುವುದು ಎನ್ನುತ್ತಾರೆ ತಹಸೀಲ್ದಾರ್‌ ಮಲ್ಲಶೆಟ್ಟಿ ಚಿದ್ರೆ.