ವಚನಕಾರರ ಬದುಕು ಎಲ್ಲ ಕಾಲಕ್ಕೂ ಸಲ್ಲುವ ಸತ್ಫಲ-ಅರಮನಿಮಠ

| Published : Nov 12 2025, 02:15 AM IST

ವಚನಕಾರರ ಬದುಕು ಎಲ್ಲ ಕಾಲಕ್ಕೂ ಸಲ್ಲುವ ಸತ್ಫಲ-ಅರಮನಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಸುಜ್ಞಾನದ ಸಂಪತ್ತು, ಕಾಯಕ ದಾಸೋಹದ ದಿವ್ಯತೆಯನ್ನು ಸಮಾಜಕ್ಕೆ ನೀಡಿದ ವಚನಕಾರರ ಬದುಕು ಎಲ್ಲ ಕಾಲಕ್ಕೂ ಸಲ್ಲುವ ಸತ್ಫಲ ಎಂದು ಉಪನ್ಯಾಸಕ ಸಿ.ಎಸ್. ಅರಮನಿಮಠ ತಿಳಿಸಿದರು.

ಹಾನಗಲ್ಲ: ಸುಜ್ಞಾನದ ಸಂಪತ್ತು, ಕಾಯಕ ದಾಸೋಹದ ದಿವ್ಯತೆಯನ್ನು ಸಮಾಜಕ್ಕೆ ನೀಡಿದ ವಚನಕಾರರ ಬದುಕು ಎಲ್ಲ ಕಾಲಕ್ಕೂ ಸಲ್ಲುವ ಸತ್ಫಲ ಎಂದು ಉಪನ್ಯಾಸಕ ಸಿ.ಎಸ್. ಅರಮನಿಮಠ ತಿಳಿಸಿದರು. ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಯೋಜಿಸಿದ ಶರಣ ಸಂಗಮ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಎಲ್ಲ ಶರಣರು ಈ ಸಮಾಜಕ್ಕೆ ಸಲ್ಲುವ ಉನ್ನತ ಕಾಯಕ ಧರ್ಮವನ್ನು ಸಾರಿದ್ದಾರೆ. ಅವರ ನಡೆ ನುಡಿಗಳು ಒಂದಾಗಿ ಅನುಭವದ ಅಪಾರ ಸಂಪತ್ತನ್ನು ನಮಗೆ ಕೊಟ್ಟಿದ್ದಾರೆ. ಅವಗುಣಗಳ ತೊಡೆದು ಸುಗುಣ ಸಮಾಜದ ನಿರ್ಮಾಣ ಅವರ ಧ್ಯೇಯವಾಗಿತ್ತು. ಮನಸ್ಸು ಮಾಡಿ ಮಾಡಿಕೊಳ್ಳುವ ಉನ್ನತ ವಿಚಾರ ಧಾರೆ ಅವರದಾಗಿತ್ತು. ಸಮರ್ಪಣಾ ಭಾವದಿಂದ ಸಮಾಜಕ್ಕೆ ಹಿತ ಚಿಂತನೆಗಳನ್ನು ನೀಡಿದ ವಚನಕಾರರ ಸಂದೇಶಗಳು ಸಾರ್ವಕಾಲಿಕ ಸತ್ಯಗಳು. ಶರಣ ದಾಸೋಹದ ಸಂಗಣ್ಣನ ದಾಸೋಹದ ದಾರಿ ಎಲ್ಲರಿಗೂ ಮಾದರಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪುರಸಭೆ ಮಾಜಿ ಉಪಾಧ್ಯಕ್ಷೆ ವೀಣಾ ಗುಡಿ, ಅನುಭಾವದ ಅತ್ಯುನ್ನತ ವಚನ ಸಂದೇಶಗಳು ಜಾತಿ ರಹಿತ ಸಮಾಜದ ಕನಸು ಹಾಗೂ ಸಾಮರಸ್ಯದ ಶಕ್ತಿಯಾಗಿವೆ. ಶರಣರು ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸಿ ಒಳ್ಳೆಯದನ್ನೇ ಸಮಾಜಕ್ಕೆ ನೀಡಿದರು. ವಚನಗಳು ಅತ್ಯಂತ ಸರಳ. ಅಷ್ಟೇ ಸರಳವಾಗಿ ನಮ್ಮ ಒಳಗೆ ಒಳಿತನ್ನು ಬಿತ್ತುವ ದಿವ್ಯ ಗಂಗೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಬಸವಕ್ರಾಂತಿ ಇಡೀ ಜಗತ್ತಿನ ಅವಗುಣಗಳನ್ನು ಹೊರ ಹಾಕಿ ಒಳಿತಾದ ಸಮಾಜದ ಕನಸನ್ನು ನನಸು ಮಾಡುವ ಶಕ್ತಿಯ ಕ್ರಾಂತಿಯಾಗಿತ್ತು. ಈಗ ವಚನಗಳ ಅರಿವಿನ ಅಗತ್ಯ ಹೆಚ್ಚಿದೆ. ಮಕ್ಕಳಿಗೆ ವಚನಗಳ ಬೋಧನೆ ಬೇಕಾಗಿದೆ ಎಂದರು.ಆಶಯ ನುಡಿಗಳನ್ನು ನುಡಿದ ಪರಿಷತ್ತಿನ ಉಪಾಧ್ಯಕ್ಷ ಅಶೋಕ ದಾಸರ, ವಚನ ಸಂಪತ್ತು ಪ್ರತಿ ಮನೆ ಮನಸ್ಸನ್ನು ತಲುಪಬೇಕಾಗಿದೆ. ವಚನ ದೀಪ ನಮ್ಮ ಮನೆಯಲ್ಲಿದ್ದರೆ ನಮ್ಮ ಮನೆ ಮನವೂ ಬೆಳಗುತ್ತದೆ. ಅಂತಹ ಸತ್ಕಾರ್ಯ ಈ ಸಮಾಜದಿಂದಾಗಬೇಕಾಗಿದೆ ಎಂದರು.ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ಜಿಲ್ಲಾ ಅಧ್ಯಕ್ಷ ಮಾರುತಿ ಶಿಡ್ಲಾಪೂರ, ತಾಲೂಕು ಅಧ್ಯಕ್ಷ ಎಸ್.ಸಿ.ಕಲ್ಲನಗೌಡರ, ಕಾರ್ಯದರ್ಶಿ ಎಸ್.ವಿ.ಹೊಸಮನಿ, ಸುಜಾತಾ ನಂದೀಶೆಟ್ಟರ, ರೇಖಾ ಶೆಟ್ಟರ, ಅಕ್ಕಮ್ಮ ಶೆಟ್ಟರ, ಎಸ್.ಪಿ. ಮಠದ, ಶ್ರೀದೇವಿ ಕೋಟಿ, ದೀಪಾ ಸಾಲವಟಗಿ, ಸಂತೋಷ ಮಾಳಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸೌಖ್ಯಾ ಮಠದ ವಚನಗಳನ್ನು ಹಾಡಿದರು.ಸನ್ಮಾನ: ಇದೇ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ವಿ. ಹೊಸಮನಿ ಅವರನ್ನು ಗೌರವಿಸಲಾಯಿತು.