ಸಾರಾಂಶ
ನರಗುಂದ:ಡಾ. ತೋಂಟದ ಸಿದ್ಧಲಿಂಗ ಶ್ರೀಗಳವರು ತಮ್ಮ ಜೀವನದುದ್ದಕ್ಕೂ ಬಸವಣ್ಣನವರ ಸಮಸಮಾಜದ ಕನಸನ್ನು ನನಸು ಮಾಡಲು ಅವಿರತವಾಗಿ ಶ್ರಮಿಸಿದ್ದಾರೆ. ಅವರ ಜೀವನವೇ ನಮಗೆಲ್ಲ ಆದರ್ಶ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಮಣ್ಣೂರಮಠ ಹೇಳಿದರು. ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೋಮುಸೌಹಾರ್ದತೆ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ 76 ನೇ ಜಯಂತ್ಯುತ್ಸವ ಹಾಗೂ ವಿಶ್ವ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾವೈಕ್ಯತೆಯ ಹರಿಕಾರರಾದ ಪೂಜ್ಯರು ಯಾವುದಕ್ಕೂ ರಾಜಿಯಾಗದೆ ಇದ್ದುದನ್ನು ಇದ್ದ ಹಾಗೆ ಹೇಳುತ್ತಿದ್ದ ನೇರ ನಿಷ್ಠುರವಾದಿಗಳಾಗಿದ್ದರು. ಈ ದೇಶದ ಇತಿಹಾಸದಲ್ಲಿ ಭಾವೈಕ್ಯತೆಗೆ ಹೊಸ ಭಾಷೆ ಬರೆದ ಪೂಜ್ಯರು. ಸರ್ವರೂ ನಮ್ಮವರೆಂದು ಎಲ್ಲರನ್ನೂ ಒಪ್ಪಿ ಅಪ್ಪಿಕೊಂಡಿದ್ದರು ಎಂದರು.ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಬಿ.ಸಿ. ಹನಮಂತಗೌಡ್ರ ಮಾತನಾಡಿ, ಜಗತ್ತಿನಲ್ಲಿ ಶ್ರೇಷ್ಠವಾದ ಭಾಷೆ ಕನ್ನಡ. ಅದಕ್ಕೆ ತನ್ನದೇಯಾದ ಇತಿಹಾಸವಿದೆ. ಜಗತ್ತಿನಾದ್ಯಾಂತ ಸುಮಾರು 7100ಕ್ಕಿಂತ ಹೆಚ್ಚು ಭಾಷೆಗಳಿವೆ. ಅದರಲ್ಲಿ ಕನ್ನಡ ಭಾಷೆಯ ಅಕ್ಷರ ಅತ್ಯಂತ ಸುಂದರ ಹಾಗೂ ಸುಲಲಿತವಾಗಿದೆ. ಎಲ್ಲರೂ ಮಾತೃಭಾಷೆಯ ಬಗ್ಗೆ ಅಭಿಮಾನ ಹೊಂದಬೇಕು ಮತ್ತು ಅದನ್ನು ಉಳಿಸಿ-ಬೆಳೆಸಬೇಕಾಗಿದೆ ಎಂದು ಹೇಳಿದರು. ಶಾಂತಲಿಂಗ ಶ್ರೀಗಳು ಮಾತನಾಡಿ, ಬೆಳಗಾವಿಯಲ್ಲಿ ಕನ್ನಡ ಮಾತನಾಡುವಂತೆ ಹೇಳಿದ ಕರ್ನಾಟಕ ಸಾರಿಗೆಯ ನಿರ್ವಾಹಕರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ ವಿಕೃತಿ ಮರೆದ ಮರಾಠಿ ಯುವಕರ ನಡೆ ಖಂಡನೀಯವಾದುದು. ಪದೇ ಪದೇ ಕನ್ನಡಿಗರ ಶಾಂತಿ ಹಾಗೂ ಸ್ವಾಭಿಮಾನವನ್ನು ಕೆಣಕುತ್ತಿರುವ ಮರಾಠಿಗರ ಅಟ್ಟಹಾಸಕ್ಕೆ ಮುಖ್ಯಮಂತ್ರಿಗಳು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕನ್ನಡ ನಾಡಿನ ಗಾಳಿ-ಬೆಳಕು-ನೀರನ್ನು ಸೇವಿಸಿ ಕನ್ನಡಿಗರ ಮೇಲೆ ಹಲ್ಲೆ ಮಾಡುತ್ತಿರುವುದು ಹೆತ್ತ ತಾಯಿಗೆ ಅಪಚಾರವೆಸಗದಂತೆ, ಅಂತವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ಉಪನ್ಯಾಸಕ ಆರ್. ಕೆ. ಐನಾಪೂರ, ವೀರಯ್ಯ ಸಾಲಿಮಠ, ಶಿಕ್ಷಕ ಮಹಾಂತೇಶ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.