ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಬೀಗ ಹಾಕಿದ ದೇವಾಲಯಗಳು ಹಾಗೂ ಮನೆಗಳಿಗೆ ಕನ್ನ ಹಾಕುತ್ತಿದ್ದ ಕಿಡಿಗೇಡಿಯೊಬ್ಬನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ತುಮಕೂರು ನಗರದ ಮಂಡಿಪೇಟೆ ಸಮೀಪ ನಿವಾಸಿ ಸೈಯದ್ ಅಹಮ್ಮದ್ ಅಲಿಯಾಸ್ ಸೈಯದ್ ಬಂಧಿತನಾಗಿದ್ದು, ಆರೋಪಿಯಿಂದ ದೇವರ ಕೊರಳಿನಲ್ಲಿದ್ದ 12 ಗ್ರಾಂ ಚಿನ್ನದ ಸರ ಸೇರಿದಂತೆ ಒಟ್ಟು ₹38 ಲಕ್ಷ ಮೌಲ್ಯದ 632 ಗ್ರಾಂ ಚಿನ್ನ, ₹5 ಲಕ್ಷ ಬೆಲೆಯ ವಜ್ರಾಭರಣ ಹಾಗೂ ₹80 ಸಾವಿರ ಮೌಲ್ಯದ ಒಂದು ಕೇಜಿ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಶಂಕರಮಠ ಜಂಕ್ಷನ್ ಬಳಿ ಶಂಕಾಸ್ಪದವಾಗಿ ಸೈಯದ್ ಅಡ್ಡಾಡುತ್ತಿದ್ದ. ಆಗ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಕೃತ್ಯಗಳು ಪತ್ತೆಯಾಗಿವೆ.
ಸೈಯದ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ತುಮಕೂರು ಸೇರಿದಂತೆ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಿನ್ನಲೆಯಲ್ಲಿ ಈತನ ವಿರುದ್ಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಎಂಓಬಿ ಕಾರ್ಡ್ ಸಹ ತೆರೆಯಲಾಗಿತ್ತು. ಇರುಳು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳು ಹಾಗೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಸೈಯದ್ ಕಳ್ಳತನ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.ಕಳೆದ ವರ್ಷ ಕಮಲಾನಗರದ ದೇವಾಲಯ ಬೀಗ ಮುರಿದು ದೇವರ ವಿಗ್ರಹದ ಕೊರಳಿನಲ್ಲಿದ್ದ 15 ಗ್ರಾಂ ಚಿನ್ನದ ಸರ ಕಳ್ಳತನವಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಬಸವೇಶ್ವರನಗರ ಪೊಲೀಸರು, ಆರೋಪಿ ಸಿಗದ ಕಾರಣಕ್ಕೆ ಪತ್ತೆಯಾಗದ ಪ್ರಕರಣ ಎಂದು ಹೇಳಿ ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದರು. ಇದೇ ಏ.28 ರಂದು ಶಂಕರಮಠದ ಜಂಕ್ಷನ್ ಬಳಿ ಸೈಯದ್ ಪೊಲೀಸರ ಬಲೆಗೆ ಬಿದ್ದಿದ್ದ. ಆಗ ಆತನ ವಿಚಾರಣೆ ವೇಳೆ ಕಮಲಾ ನಗರದ ದೇವಾಲಯ ಮಾತ್ರವಲ್ಲದೆ ಮೈಸೂರಿನ ವಿವಿ ಪುರ ವ್ಯಾಪ್ತಿಯಲ್ಲಿ ನಡೆದಿದ್ದ ಮತ್ತೊಂದು ಕಳ್ಳತನ ಕೃತ್ಯವು ಪತ್ತೆಯಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.