ನಗರಸಭೆ ಬೆಜವಾಬ್ದಾರಿತನಕ್ಕೆ ಸದಸ್ಯರ ತೀವ್ರ ಅಸಮಧಾನ

| Published : Aug 17 2024, 12:46 AM IST

ಸಾರಾಂಶ

ರಾಯಚೂರು ನಗರಸಭೆ ಸಭಾಂಗಣದಲ್ಲಿ ಡಿಸಿ,ಆಡಳಿತಾಧಿಕಾರಿ ನಿತೀಶ್‌ ಕೆ. ಅವರ ಅಧ್ಯಕ್ಷತೆಯಲ್ಲಿ ಸಿಎಂಸಿ ಸಾಮಾನ್ಯ ಸಭೆ ನಡೆಯಿತು,

ಕನ್ನಡಪ್ರಭ ವಾರ್ತೆ ರಾಯಚೂರು

ನಗರಸಭೆ ಅಧಿಕಾರಿ, ಸಿಬ್ಬಂದಿ ವರ್ಗದ ಬೇಜವಾಬ್ದಾರಿತನದಿಂದಾಗಿ ನಗರದ ನಿವಾಸಿಗಳಿಗೆ ಕನಿಷ್ಠ ಸವಲತ್ತು ಕಲ್ಪಿಸಲಾಗುತ್ತಿಲ್ಲ. ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ, ರಸ್ತೆ ಸೇರಿದಂತೆ ಅಗತ್ಯ ಸೇವೆಗಳು ಜನ ಸಾಮಾನ್ಯರಿಗೆ ದೊರೆಯದಂತಾಗಿವೆ ಎಂದು ಸದಸ್ಯರು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಸ್ಥಳೀಯ ನಗರಸಭೆ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ನಿತೀಶ್‌.ಕೆ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಪಕ್ಷಗಳ ಹಿರಿಯ-ಕಿರಿಯ ಸದಸ್ಯರು ನಗರಸಭೆ ಅಧಿಕಾರಿ, ಸಿಬ್ಬಂದಿಗಳ ಕಾರ್ಯವೈಖರಿ ಕುರಿತು ಏಕಧ್ವನಿಯನ್ನು ಅಸಮಧಾನ ವ್ಯಕ್ತಪಡಿಸಿದರು.

ಸಹಕಾರಕ್ಕೆ ಡಿಸಿ ಸೂಚನೆ: ಸಭೆ ಉದ್ದೇಶಿಸಿ ಮಾತನಾಡಿದ ಡಿಸಿ, ಯಾವುದೇ ನಗರ ಅಭಿವೃದ್ಧಿ ಆಗಬೇಕಾದರೆ ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಅಧಿಕಾರಿಗಳಿಂದ ಹಿಡಿದು ಸಿಬ್ಬಂದಿಗಳುವರೆಗೂ ಶ್ರಮಿಸಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ನಗರದ ಸಮಗ್ರ ಅಭಿವೃದ್ಧಿ ಹಾಗೂ ಸ್ವಚ್ಛ ನಗರಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಸೂಚಿಸಿದ ಡಿಸಿ, ನಿಮ್ಮ ಸಂಪೂರ್ಣ ಸಹಕಾರದೊಂದಿಗೆ ಸಮರ್ಪಕ ನಾಗರಿಕ ಸೌಕರ್ಯ ಪೂರೈಕೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.

ವರ್ಷದ 365 ದಿನಗಳ ಕಾಲ ಸೇವೆ ಮಾಡಿ, ಉತ್ತಮ ಕಾರ್ಯನಿರ್ವಹಣೆ ಮಾಡಬೇಕು. ಅದಕ್ಕಾಗಿ ಜನರು ನಮಗೆ ಅವಕಾಶ ನೀಡಿದ್ದು, ಆ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಯಚೂರು ಜಿಲ್ಲೆಯು ಸ್ವಚ್ಛ ಹಾಗೂ ಅಭಿವೃದ್ಧಿ ನಗರಕ್ಕಾಗಿ ಶ್ರಮಿಸಬೇಕು. ಇದಕ್ಕಾಗಿ ನಗರದ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು. ಈ ಕಾರ್ಯದಲ್ಲಿ ನಗರಸಭೆಯ ಸದಸ್ಯರ ಜವಾಬ್ದಾರಿ ಪ್ರಮುಖವಾಗಿದೆ ಎಂದು ಹೇಳಿದರು.

ನಗರಕ್ಕೆ ಕೃಷ್ಣಾ ನದಿ ಹಾಗೂ ರಾಂಪುರ್ ಜಲಾಶಯದಿಂದ ಕುಡಿಯುವ ನೀರು ಸರಾಬರಾಜ ಮಾಡಲಾಗುತ್ತಿದ್ದು, ನೀರು ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ. ನೀರು ಸರಬರಾಜು ಕುರಿತು ಕೆಲ ತಾಂತ್ರಿಕ ಸಮಸ್ಯೆಗಳಿವೆ. ಅವುಗಳನ್ನು ಅತಿ ಶೀಘ್ರದಲ್ಲೇ ಬಗೆಹರಿಸಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಎ.ವಸಂತ ಕುಮಾರ ಮಾತನಾಡಿ, ಕೃಷ್ಣಾ ಹಾಗೂ ತುಂಗಾಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಆದರೂ ನಗರಕ್ಕೆ ನಿರಂತರ ನೀರು ಪೂರೈಕೆ ಮಾಡತ್ತಿಲ್ಲ ಎಂಬ ಆರೋಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಗರಕ್ಕೆ 40 ಎಂಎಲ್‌ಡಿ ನೀರು ಪೂರೈಕೆ ಆಗುತ್ತಿದ್ದರು. ಪ್ರತಿನಿತ್ಯ ನೀರು ಪೂರೈಕೆಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ನಗರಸಭೆಯ ಸದಸ್ಯರು, ಪೌರಾಯುಕ್ತ ಗುರುಸಿದ್ದಯ್ಯ ಸ್ವಾಮಿ ಹಿರೇಮಠ, ತಾಂತ್ರಿಕ ವಿಭಾಗದ ಅಧಿಕಾರಿಗಳಾದ ನವೀನ್ ಕುಮಾರ್, ರಾಹುಲ್, ಮೂರ್ತಿ, ಮಲ್ಲಿಕಾರ್ಜುನ ಸೇರಿದಂತೆ ನಗರಸಭೆಯ ಅಧಿಕಾರಿಗಳು ಇದ್ದರು.

ತಂಡ ರಚಿಸಲು ಸೂಚನೆ

ನಗರದಲ್ಲಿ ಕುಡಿಯುವ ನೀರು ನಿರ್ವಹಣೆ ಕ್ರಮಬದ್ಧತೆ ಮತ್ತು ಕನಿಷ್ಠ 2-3ವಾರ್ಡ್‌ಗಳಿಗೆ ಮುಂದಿನ 10 ದಿನಗಳಲ್ಲಿ ದಿನದ 24ಗಂಟೆಗಳ ಕಾಲ ನಿರಂತರ ಕುಡಿಯುವ ನೀರು ಪೂರೈಕೆ ಪ್ರಯೋಗಕ್ಕಾಗಿ ನಗರಸಭೆಯ ಹಿರಿಯ ಸದಸ್ಯರ ಹಾಗೂ ಎಂಜಿನಿಯರಿಂಗ್ ವಿಭಾಗದ ತಂಡ ರಚಿಸಿ ಪ್ರಾಯೋಗಿಕ ಕಾರ್ಯನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಡಿಸಿ ನಿತೀಶ್‌.ಕೆ ಸೂಚಿಸಿದರು.