ಸಾರಾಂಶ
ಗದಗ: ಯುಗಾದಿ ಎಂದರೆ ಸಂಭ್ರಮ, ಯುಗಾದಿ ಭಾರತೀಯ ಪರಂಪರೆಯಲ್ಲಿ ಹೊಸವರ್ಷ, ಯುಗಾದಿ ಮತ್ತು ರಮ್ಜಾನ್ ಎರಡು ಶಾಂತಿಯ ಸಂಕೇತ, ಸರ್ವಧರ್ಮಗಳ ಭಾವ ಸಂದೇಶ ಒಂದೇ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2739ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಮಜಾನ್ ಡೇ ಆಫ್ ಜಡ್ಜಮೆಂಟ್ ಅದು ನ್ಯಾಯದ ದಿನ. ಒಳ್ಳೆಯದನ್ನೆ ಮಾಡು, ಕೆಟ್ಟದನ್ನು ಮಾಡಬೇಡ ಎಂದು ಸಾರುತ್ತದೆ. ಸಾಮರಸ್ಯದ ಸೇತುವೆ ಕಟ್ಟಿಕೊಡುತ್ತದೆ. ಭಾವೈಕ್ಯತೆಯ ಸಂದೇಶ ಹೊತ್ತು ತರುತ್ತದೆ. ಜಗದ ಜನರೆಲ್ಲರೂ, ಭಾವೈಕ್ಯತೆಯಿಂದ ಬದುಕಬೇಕು. ಆಚರಣೆ ಬೇರೆಯಾದರೂ, ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸುವ ಹಬ್ಬಗಳು ಯುಗಾದಿ ಮತ್ತು ರಮಜಾನ ಎಂದರು. ನೀರಲಗಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಪಿ.ಟಿ.ಬೈಲಪ್ಪನವರ ಮಾತನಾಡಿ, ಯುಗಾದಿ ಹಬ್ಬದ ಆಚರಣೆಯ ಹಿಂದೆ ವೈಜ್ಞಾನಿಕ ದೃಷ್ಟಿಕೋನವಿದೆ. ಮಾವಿನ ತಳಿರಿನಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವಿದೆ. ರೈತರಿಗೆ ಯುಗಾದಿ ಕೃಷಿ ಕಾಯಕ ಕೈಗೊಳ್ಳಲು ಉತ್ತಮ ದಿನ. ಗಿಡಮರಗಳೆಲ್ಲಾ ಹಸಿರು ತೊಟ್ಟರೆ, ಮನೆಮಂದಿಯೆಲ್ಲಾ ಹೊಸ ಬಟ್ಟೆ ತೊಟ್ಟು ಆನಂದಿಸುವ ಯುಗಾದಿ. ಹೊಸತನದ ಸಂಕೇತ ಎಂದು ಆಚರಣೆಯ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿದರು.
ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ, ಸುತಾರ ಸಾಂಸ್ಕೃತಿಕ ಕಲಾ ಸಂಘ ಬೇಟಗೇರಿಯ ಅಶೋಕ್ ಸುತಾರ ಹಾಗೂ ತಂಡದವರಿಂದ ಬಯಲಾಟ ಪ್ರದರ್ಶನ ನಡೆಯಿತು.ಹಿರಿಯ ಕಲಾವಿದರಾದ ಸುಭಾಸ ಮಳಗಿ, ಮಲ್ಲೇಶಗೌಡ ತಿಮ್ಮೇಗೌಡ್ರ ಹಾಗೂ ಬಾಲ ಕಲಾವಿದೆಯಾದ ನಿಖಿತಾ ಅಶೋಕ್ ಸುತಾರ ಅವರನ್ನು ಸನ್ಮಾನಿಸಲಾಯಿತು. ವಚನ ಸಂಗೀತ ಸೇವೆಯನ್ನು, ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಸಂಗೀತ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ರೇವತಿ ಕೆ.ಗೌಡರ ಹಾಗೂ ವಚನ ಚಿಂತನವನ್ನು ಲಾವಣ್ಯ ಕೆ.ಗೌಡರ ನಡೆಸಿಕೊಟ್ಟರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಮಹೇಶ ಗಾಣಿಗೇರ ಸ್ವಾಗತಿಸಿದರು. ಐ.ಬಿ.ಬೆನಕೊಪ್ಪ ಪರಿಚಯಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.