ವೃಥಾ ಮತ್ತೊಬ್ಬರ ಅವಹೇಳನದಲ್ಲಿ ಕಾಲ ಕಳೆಯುವವರ ಬಗ್ಗೆ ತಮ್ಮ ವಚನ ಮತ್ತು ಮಾತಿನ ಮೂಲಕ ಸಮಾಜದಲ್ಲಿ ತಿದ್ದುವ ಕೆಲಸವನ್ನು ಶರಣರು ಮಾಡಿದರು.

ಮುಂಡರಗಿ: ಶರಣರು ಮಾತು ಮತ್ತು ಕೃತಿಯಲ್ಲಿ ವ್ಯತ್ಯಾಸವಾಗದಂತೆ ಸತ್ಯವನ್ನು ನೇರವಾಗಿ ಹೇಳುವ ಮೂಲಕ ಇಂದಿಗೂ ಅವರ ತತ್ವಾದರ್ಶಗಳು ಸಮಾಜಕ್ಕೆ ಪ್ರೇರಣೆ ಮತ್ತು ಮಾರ್ಗದರ್ಶನವಾಗಿವೆ ಎಂದು ಕೊಪ್ಪಳ ಸಾಹಿತಿ, ರಂಗಭೂಮಿ ಕಲಾವಿದ ವೀರಣ್ಣ ಹುರಕಡ್ಲಿ ತಿಳಿಸಿದರು.ಪಟ್ಟಣದ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸಂಜೆ ಕಸಾಪ ಆಶ್ರಯದಲ್ಲಿ ಏರ್ಪಡಿಸಿದ್ದ ಶರಣ ಚಿಂತನ ಮಾಲೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಶರಣರಲ್ಲಿ ಹಲವು ಬಗೆಯ ಶರಣರಿದ್ದರೂ ಅವರೆಲ್ಲರೂ ರಚಿಸಿದ ವಿಭಿನ್ನ ವಚನಗಳಲ್ಲಿ ಸಮಾಜದ ಏಕತೆ ಮತ್ತು ಭಾವೈಕ್ಯತೆ ಕಾಯ್ದುಕೊಳ್ಳುವ ಮತ್ತು ಧ್ವನಿ ಇಲ್ಲದವರಿಗೆ ಧ್ವನಿ ಕೊಡುವ ಹಾಗೂ ಡೋಂಗಿ ಭಕ್ತಿ ತೋರುವವರ ಕುರಿತು ವಚನಗಳ ಮೂಲಕ ಎಚ್ಚರಿಸಿದ್ದರು ಎಂದರು.

ಸಮಾಜದಲ್ಲಿನ ಅನೇಕ ನ್ಯೂನತೆಗಳನ್ನು ತಮ್ಮ ನೇರ ನುಡಿಗಳಲ್ಲಿ ಹೇಳುತ್ತಿದ್ದ ಶರಣ ಶಂಕರ ದಾಸಿಮಯ್ಯ ಅವರ ಬಗ್ಗೆ ಅನೇಕ ಕುತೂಹಲಕರ ಸಂಗತಿಗಳಿವೆ. ಅವುಗಳ ಅಧ್ಯಯನ ಮತ್ತು ಓದುವಿಕೆಯಿಂದ ಅವರ ಜೀವನ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ವೃಥಾ ಮತ್ತೊಬ್ಬರ ಅವಹೇಳನದಲ್ಲಿ ಕಾಲ ಕಳೆಯುವವರ ಬಗ್ಗೆ ತಮ್ಮ ವಚನ ಮತ್ತು ಮಾತಿನ ಮೂಲಕ ಸಮಾಜದಲ್ಲಿ ತಿದ್ದುವ ಕೆಲಸವನ್ನು ಶರಣರು ಮಾಡಿದರು ಎಂದರು. ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನೇಕ ಶರಣರು ತಮ್ಮದೇ ಆದ ರೀತಿಯಲ್ಲಿ ಸಮಾಜದಲ್ಲಿನ ಮೌಢ್ಯ, ಕಂದಾಚಾರಗಳನ್ನು ದೂರ ಮಾಡುವುದು, ಮಹಿಳಾ ಸಮಾನತೆ, ಜಾತೀಯತೆ ಹೋಗಲಾಡಿಸಲು ವಚನ ರಚಿಸುವ ಮೂಲಕ ಜನತೆಗೆ ತಿಳಿವಳಿಕೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಕಸಾಪ ಆಶ್ರಯದಲ್ಲಿ ಮಹಿಳಾ ಸಮಾವೇಶ ಏರ್ಪಡಿಸಿ ಆ ಮೂಲಕ ಸೃಜನಶೀಲ ಬರಹಗಾರರ ಕೃತಿ ಚರ್ಚೆ, ಸಂವಾದ, ಗೋಷ್ಠಿ ನಡೆಸುವ ಉದ್ದೇಶ ಹೊಂದಿದೆ ಎಂದರು.ಕಾರ್ಯಕ್ರಮದಲ್ಲಿ ನಾಗೇಶ ಕುಬಸದ, ವೀಣಾ ಪಾಟೀಲ, ಕೃಷ್ಣಮೂರ್ತಿ ಸಾಹುಕಾರ, ಐ.ಜೆ. ಮುಲ್ಲಾ, ಶರಣಪ್ಪ ಕುಬಸದ ಪ್ರತಿಭಾ ಹೊಸಮನಿ, ಮಹೇಶ ಮೇಟಿ, ಎನ್.ಎಸ್. ಅಲ್ಲಿಪುರ, ಶಶಿಕಲಾ ಕುಕನೂರ, ಪಾರ್ವತಿ ಕುಬಸದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎನ್.ಎನ್. ಕಲಕೇರಿ ಸ್ವಾಗತಿಸಿ, ನಿರೂಪಿಸಿದರು. ಪತ್ರಕರ್ತ ಸಿ.ಕೆ. ಗಣಪ್ಪನವರ ವಂದಿಸಿದರು.