ಗೊಂದಲದ ಗೂಡಾದ ನಗರಸಭೆ ಸಾಮಾನ್ಯ ಸಭೆ

| Published : Aug 09 2025, 12:00 AM IST

ಸಾರಾಂಶ

ಚಿಂತಾಮಣಿಯ ನಗರಸಭೆಯ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಕೆಲವು ಸದಸ್ಯರು ಅಧ್ಯಕ್ಷ ಮತ್ತು ಪೌರಾಯುಕ್ತರ ವಿರುದ್ಧ ಟೀಕೆ ಮಾಡಿ ಹರಿಹಾಯ್ದರು. ಅಧ್ಯಕ್ಷರು ಪೌರಾಯುಕ್ತರ ರಿಮೋಟ್ ಕಂಟ್ರೋಲ್ ಎಂದು ಆರೋಪಿಸಿದು. ಗೊಂದಲ ಹೆಚ್ಚಿರುವುದನ್ನು ಗಮನಿಸಿದ ಅಧ್ಯಕ್ಷರು ಸಭೆಯನ್ನು ಅಂತ್ಯಗೊಳಿಸಿದರು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ನಗರಸಭೆ ಸಾಮಾನ್ಯ ಸಭೆಯಲ್ಲಿ ಸಭೆಯ ನಡಾವಳಿಯನ್ನು ಹರಿದು ಹಾಕಿ ಅಧ್ಯಕ್ಷರಿಗೆ ಅವಮಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದ ಪರಿಣಾಮ ಸಭೆಯಲ್ಲಿ ಉಂಟಾದ ಗೊಂದಲದಿಂದಾಗಿ ಸಭೆಯಲ್ಲಿ ಯಾವುದೇ ಚರ್ಚೆಗಳು ನಡೆಯಲಿಲ್ಲ.

ನಗರಸಭೆ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷ ಜಗನ್ನಾಥ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ವಾರ್ಡ್ ನಂಬರ್ ೧೭ ನಗರ ಸಭೆಯ ಮೊಹಮ್ಮದ್ ಶಫೀಕ್ ಮತ್ತು ವಾರ್ಡ್ ನಂಬರ್ ೧೫ರ ಸದಸ್ಯೆ ರೂಬಿಯಾ ಸುಲ್ತಾನ ಅಧ್ಯಕ್ಷ ಮತ್ತು ಪೌರಾಯುಕ್ತರ ವಿರುದ್ಧ ಟೀಕೆ ಮಾಡಿದರು.

ಸಭೆಯ ನಡಾವಳಿ ಹರಿದ ಸದಸ್ಯನಗರಸಭಾ ಸದಸ್ಯ ಮೊಹಮ್ಮದ್ ಶಫೀಕ್ ಅಧ್ಯಕ್ಷರು ಸ್ವ ಇಚ್ಛೆಯಿಂದ ಸಭೆಯನ್ನು ನಡೆಸುತ್ತಿದ್ದಿರೋ ಅಥವಾ ಪೌರಾಯುಕ್ತರ ರಿಮೋಟ್ ಕಂಟ್ರೋಲ್ (ಕೈಗೊಂಬೆ) ಆಗಿ ಕಾರ್ಯನಿರ್ವಹಿಸುತ್ತಿದ್ದೀರೋ ಎಂದು ಪ್ರಶ್ನಿಸಿದರು. ಅಲ್ಲದೆ ಸಭೆಯಲ್ಲಿ ವಿಷಯ ಕುರಿತು ಮಾತನಾಡಲು ಮೈಕ್ ಕೊಡುವಂತೆ ಕೇಳಿದಾಗ ಮೈಕ್ ನೀಡಲಿಲ್ಲ. ಇದರಿಂದ ಕುಪಿತಗೊಂಡ ಶಫೀಕ್‌ ಅ‍ವರು ಸಭೆಯ ನಡಾವಳಿಯನ್ನು ಹರಿದು ಹಾಕಿದರು. ರೂಬಿಯಾ ಸುಲ್ತಾನ ಅಧ್ಯಕ್ಷರನ್ನು ಜೋಕರ್ ಎಂದು ಕರೆದಾಗ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅಧ್ಯಕ್ಷರು ಸಾಮಾನ್ಯ ಸಭೆಯನ್ನು ಕೆಲವೇ ಗಂಟೆಗಳಲ್ಲಿ ಸಭೆಯನ್ನು ಮೊಟಕುಗೊಳಿಸಿದರು.

ಕ್ಷಮೆ ಕೇಳಲು ಒತ್ತಾಯ

ಸಭೆಯ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಉಪಾಧ್ಯಕ್ಷೆ ರಾಣಿಯಮ್ಮ ಮತ್ತು ಆಡಳಿತ ಪಕ್ಷದ ಸದಸ್ಯರಾದ ಹರೀಶ್, ಜಗದೀಶ್, ರೇಖಾಉಮೇಶ್, ನಾಮ ನಿರ್ದೇಶಕ ಸದಸ್ಯರಾದ ಸಮಿವುಲ್ಲಾ, ಕೆಎಲ್‌ಎನ್ ನಾಗರಾಜ್ ಹಾಗೂ ಇತರೆ ಸದಸ್ಯರು ಮೊಹಮ್ಮದ್ ಶಫೀಕ್ ರವರ ನಡೆಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರಲ್ಲದೆ ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ಬೇರೆಯವರ ಹೆಸರಿಗೆ ಇ ಖಾತೆ

ನಗರಸಭಾ ಸದಸ್ಯ ಅಗ್ರಹಾರ ಮುರಳಿ, ದೇವಳಂ ಶಂಕರ್ ಮಾತನಾಡಿ, ನಗರಸಭೆಯ ಮತ್ತು ಸಾರ್ವಜನಿಕ ಸ್ವತ್ತುಗಳನ್ನು ಬೇರೆ ಬೇರೆಯವರಿಗೆ ಇ ಖಾತೆ ಮಾಡಿಸಿರುವುದು ಹಾಗೂ ಅಧ್ಯಕ್ಷರು ಮತ್ತು ಪೌರಾಯುಕ್ತರು ಕೆಲವು ವ್ಯಕ್ತಿಗಳ ತಾಳಕ್ಕೆ ಕುಣಿಯುತ್ತಿರುವುದು ತಮ್ಮ ಅಧಿಕಾರಕ್ಕೆ ಶೋಭೆ ತರುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭಾ ಸದಸ್ಯ ರೂಬಿಯಾ ಸುಲ್ತಾನ ಮಾತನಾಡಿ ವಾರ್ಡ್ ನಂಬರ್ ೧೫ರಲ್ಲಿ ನೀರಿನ ಸಮಸ್ಯೆ ಯುಜಿಡಿ ಸಮಸ್ಯೆ ಇದೆ ಹಲವು ಬಾರಿ ನಗರಸಭಾ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲವೆಂದು ದೂರಿದಲ್ಲದೆ ಸಾಮಾನ್ಯ ಸಭೆಯಲ್ಲಿ ವಾರ್ಡ್‌ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕೊಡುತ್ತಿಲ್ಲವೆಂದು ನುಡಿದರು.

ಆಂಜನೇಯರೆಡ್ಡಿ ಪುತ್ಥಳಿ ಸ್ಥಾಪಿಸಿ

ನಗರಸಭಾ ಸದಸ್ಯ ಹರೀಶ್ ಮಾತನಾಡಿ ನಗರದ ಯಾವುದೇ ಒಂದು ವೃತ್ತದಲ್ಲಿ ಮಾಜಿ ಶಾಸಕ ಎಂ.ಸಿ.ಆಂಜನೇಯರೆಡ್ಡಿ ಪುತ್ಥಳಿ ನಿರ್ಮಾಣ ಮಾಡಬೇಕು ಈಗಾಗಲೇ ನಗರ ಭಾಗದ ವಿವಿಧ ಪ್ರದೇಶಗಳಲ್ಲಿ ವಾಸವಾಗಿರುವ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗಿದ್ದು ಅವರಿಗೆ ಕೂಡ ಇ-ಖಾತೆಗಳನ್ನು ಮಾಡಿಕೊಡಬೇಕೆಂದರು.