ಮುಂಡಗೋಡ ತಾಲೂಕಿನ ಕೊಳಗಿ ಅರಣ್ಯದಲ್ಲಿ ಮಳಗಿ ಗ್ರಾಮದ ಶಿವಕ್ಕ ಪಾಟೀಲ ಎಂಬ ವೃದ್ಧೆಯ ರುಂಡ ಕತ್ತರಿಸಿ ಹತ್ಯೆ ಮಾಡಿದ ಆರೋಪಿ ಕೃಷ್ಣಪ್ಪ ಎಂಬಾತನ ಮೇಲೆ ಕಠಿಣ ಕ್ರಮ ಜರುಗಿಸಿ, ಆತನನ್ನು ಗಡಿಪಾರು ಮಾಡಬೇಕು ಎಂದು ಮಳಗಿ ಗ್ರಾಮದ ಮೇದಾರ ಸಮಾಜದವರು ಶುಕ್ರವಾರ ಮುಂಡಗೋಡ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಮುಂಡಗೋಡ: ಇತ್ತೀಚೆಗೆ ತಾಲೂಕಿನ ಕೊಳಗಿ ಅರಣ್ಯದಲ್ಲಿ ಮಳಗಿ ಗ್ರಾಮದ ಶಿವಕ್ಕ ಪಾಟೀಲ ಎಂಬ ವೃದ್ಧೆಯ ರುಂಡ ಕತ್ತರಿಸಿ ಹತ್ಯೆ ಮಾಡಿದ ಆರೋಪಿ ಕೃಷ್ಣಪ್ಪ ಎಂಬಾತನ ಮೇಲೆ ಕಠಿಣ ಕ್ರಮ ಜರುಗಿಸಿ, ಆತನನ್ನು ಗಡಿಪಾರು ಮಾಡಬೇಕು ಎಂದು ಮಳಗಿ ಗ್ರಾಮದ ಮೇದಾರ ಸಮಾಜದವರು ಶುಕ್ರವಾರ ಮುಂಡಗೋಡ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಮುಂಡಗೋಡ ಪೊಲೀಸ್ ಠಾಣೆಯ ಸಿಪಿಐ ರಂಗನಾಥ ನೀಲಮ್ಮನವರ್ ಅವರಿಗೆ ಮನವಿ ಸಲ್ಲಿಸಿದರು.
ಕೆಲವು ದಿನಗಳ ಹಿಂದೆ ಮಳಗಿ ಪಂಚಾಯಿತಿ ವ್ಯಾಪ್ತಿಯ ಕೊಳಗಿಯ ಅರಣದಲ್ಲಿ ಶಿವಕ್ಕ ಪಾಟೀಲ ಎಂಬವರ ಕೊಲೆಯಾಗಿದೆ. ಕೊಲೆ ಆರೋಪಿ ಕೃಷ್ಣಪ್ಪ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಮನಮನೆ ಗ್ರಾಮದವನಾಗಿದ್ದು, ಕೆಲವು ವರ್ಷಗಳ ಈಚೆಗೆ ಮಳಗಿ ಗ್ರಾಮದಲ್ಲಿ ಬಂದು ವಾಸವಾದವನಾಗಿದ್ದನು. ಆತ ಮೊದಲೇ ಒಂದು ಕೊಲೆ ಮಾಡಿದ್ದನು ಎನ್ನುವ ವಿಚಾರ ಮೊದಲು ಗ್ರಾಮಸ್ಥರಿಗೆ ಗೊತ್ತಿರಲಿಲ್ಲ. ಇಂತಹ ಭಯಾನಕ ಕೊಲೆ ಮಾಡಿದವನು ಮತ್ತು ಅವನ ಕುಟುಂಬ ನಮ್ಮ ಊರಲ್ಲಿ ಇರಕೂಡದು ಮತ್ತು ಅವನನ್ನು ಗಡಿಪಾರು ಮಾಡಬೇಕು. ಮತ್ತು ಅವನಿಗೆ ಯಾವುದೇ ರೀತಿ ಬೇಲ್ (ಜಾಮೀನು) ಸಿಗದಂತೆ ಸೆಕ್ಷನ್ ಅಡಿ ಕೇಸ್ ದಾಖಲಿಸಿ ಅವನಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.ಮಳಗಿ ಗ್ರಾಮದ ಮೇದಾರ ಸಮಾಜದ ಅಧ್ಯಕ್ಷರಾದ ಪರಮೇಶ್ವರ ಇಡಗೋಡ, ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ ಪಾಟೀಲ, ಸುರೇಶ ಪಾಟೀಲ, ಪರಶುರಾಮ ಮೇದಾರ, ಮಂಜುನಾಥ ಮೇದಾರ, ಚಂದ್ರು ಇಡಗೋಡ, ಘನಶ್ಯಾಮ ಪಾಟೀಲ, ಹನುಮಂತ ಇಡಗೋಡ, ಬಸವರಾಜ ಮೇದಾರ, ರೋಜಾ ಮೇದಾರ, ಜಯಶ್ರೀ ಜಡೆ, ರೇಣುಕಾ ಜಡೆ, ಮಂಜುಳಾ ಮೇದಾರ, ಕಿರಣ ಮೇದಾರ ಮತ್ತಿತರರು ಉಪಸ್ಥಿತರಿದ್ದರು.