ಕನಕಪುರ: ಹಿಂದೂ ಧರ್ಮಿಯರು ಧರ್ಮ ಹಾಗೂ ದೇಶದ ಉಳಿವಿಗಾಗಿ ಎರಡು ಮಕ್ಕಳಿಗೆ ಜನ್ಮ ನೀಡಬೇಕು ಎಂದು ವಿಶ್ವ ಹಿಂದೂ ಪರಿಷದ್ ರಾಷ್ಟ್ರೀಯ ಮಹಾ ಸಂಘಟನಾ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಜೀ ತಿಳಿಸಿದರು
ಕನಕಪುರ: ಹಿಂದೂ ಧರ್ಮಿಯರು ಧರ್ಮ ಹಾಗೂ ದೇಶದ ಉಳಿವಿಗಾಗಿ ಎರಡು ಮಕ್ಕಳಿಗೆ ಜನ್ಮ ನೀಡಬೇಕು ಎಂದು ವಿಶ್ವ ಹಿಂದೂ ಪರಿಷದ್ ರಾಷ್ಟ್ರೀಯ ಮಹಾ ಸಂಘಟನಾ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಜೀ ತಿಳಿಸಿದರು.
ನಗರದ ದೇಗುಲ ಮಠದಲ್ಲಿ ಕಳೆದ ಹತ್ತು ದಿನಗಳಿಂದ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ದಕ್ಷಿಣ ಪ್ರಾಂತ ವತಿಯಿಂದ ನಡೆಯುತ್ತಿದ್ದ ಶೌರ್ಯ ಪ್ರಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಹಿಂದೂಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಆತಂಕದ ವಿಷಯ. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಘೋರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಭಾರತ ದೇಶ ಹಿಂದೂಗಳ ರಾಷ್ಟ್ರವಾಗಿದ್ದು ಭಾರತೀಯರೆಲ್ಲರೂ ಹಿಂದೂಗಳೇ ಎಂಬುದನ್ನು ಮರೆಯದೇ ನಮ್ಮ ನಮ್ಮ ನಡುವಿನ ಜಾತಿ, ಜನಾಂಗದ ವ್ಯವಸ್ಥೆಯನ್ನು ಬದಿಗೊತ್ತಿ ನಾವೆಲ್ಲರೂ ಭಾರತೀಯರು ಎಂದು ಬದುಕಿದಾಗ ಮಾತ್ರ ಧರ್ಮ, ಸಂಸ್ಕೃತಿ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ದೇಶದ ಎಲ್ಲಾ ನಾಗರಿಕರು ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಮೊದಲನೇಯದು ಹಿಂದೂಗಳ ಸಂಖ್ಯೆ ಇಳಿಮುಖದ ಬಗ್ಗೆ ಚಿಂತನೆ ನಡೆಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಸ್ವಂತ ದುಡಿಮೆ ಮೇಲೆ ಬದುಕುವ ಶಕ್ತಿ ನೀಡಿ ಹಿಂದೂ ಧರ್ಮಕ್ಕೆ ಹಾಗೂ ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕಾಗಿದೆ,
ಎರಡನೇದು ಕೇಂದ್ರ ಸರ್ಕಾರ ನಡೆಸುತ್ತಿರುವ ಜನಗಣತಿ ಕಾರ್ಯ ಸಂಪೂರ್ಣವಾಗಿ ಆನ್ಲೈನ್ ಆಗಿರುವುದರಿಂದ ಮನೆಯಲ್ಲೇ ಕುಳಿತು ಈ ಕಾರ್ಯದಲ್ಲಿ ಭಾಗಿಯಾಗಬಹುದಾಗಿದೆ. ಧರ್ಮದ ಕಾಲಂನಲ್ಲಿ ಹಲವು ಆಯ್ಕೆಗಳನ್ನು ನೀಡಿದ್ದರೂ ಸಹ ಇದರಲ್ಲಿ ಹಿಂದೂ ಎಂದು ಮಾತ್ರ ನಮೂದಿಸುವಂತೆ ಮನವಿ ಮಾಡಿದರು.ಮೂರನೇಯದು ದೇಶದಲ್ಲಿ ಮಾದಕವಸ್ತು ಮಾರಾಟ ಮತ್ತು ಸೇವನೆ ಬಹುದೊಡ್ಡ ಪಿಡುಗಾಗಿದೆ. ಇದಕ್ಕೆ ಯುವಕ- ಯುವತಿಯರು ಮಾರುಹೋಗುತ್ತಿರುವುದು ನಮ್ಮ ದುರಂತ. ಇದನ್ನು ಸಂಪೂರ್ಣವಾಗಿ ತೊಡೆದು ಹಾಕಲು ಪೋಷಕರು, ಶಿಕ್ಷಕರು, ಸಂಘ ಸಂಸ್ಥೆಗಳು ಇದರ ಬಗ್ಗೆ ಗಮನ ಹರಿಸಿ ಜಾಗೃತಿ ಮೂಡಿಸಬೇಕು ಎಂದರು.
ವಿಶ್ವ ಹಿಂದೂ ಪರಿಷದ್ ದೇಶಾದ್ಯಂತ ಜನ ಜಾಗೃತಿ ಅಂಗವಾಗಿ ಪ್ರತಿ ವರ್ಷ 18ರಿಂದ 30 ವರ್ಷದೊಳಗಿನ ತರುಣರಿಗೆ ವಿಶೇಷ ಕಾರ್ಯಗಾರ ನಡೆಸುತ್ತಿದೆ. ಅವರಲ್ಲಿ ದೇಶ ಪ್ರೇಮ, ಧರ್ಮ ರಕ್ಷಣೆ ಬಗ್ಗೆ ಜಾಗೃತಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಕನಕಪುರದಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ಉತ್ತಮ ಸ್ಪಂದನೆ ದೊರೆತಿರುವುದು ಸಂತಸ ತಂದಿದೆ ಎಂದರು.ವಿಶ್ವ ಹಿಂದೂ ಪರಿಷದ್ ತಾಲೂಕು ಮುಖಂಡ ಕೆ.ಆರ್.ಸುರೇಶ್, ಬಜರಂಗದಳ ತಾಲೂಕು ಮುಖಂಡ ಕಿರಣ್, ಪ್ರಾಂತ ಕಾರ್ಯದರ್ಶಿ ಸುರೇಶ, ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಇತರರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 01:ಕನಕಪುರದ ದೇಗುಲ ಮಠದಲ್ಲಿ ಆಯೋಜಿಸಿದ್ದ ವಿಶ್ವ ಹಿಂದೂ ಪರಿಷದ್ ಸಮಾರಂಭದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಜಿ ಮಾತನಾಡಿದರು.