ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ರೈತರಿಂದ ನೇರವಾಗಿ ರಾಗಿ ಖರೀದಿಸಲು ತೆರೆಯಲಾದ ನಾಫೆಡ್ ಖರೀದಿ ಕೇಂದ್ರದಲ್ಲಿ ರೈತರ ಸಮಸ್ಯೆಗಳನ್ನು ಕಂಡು ಗಂಭೀರವಾಗಿ ಪ್ರತಿಕ್ರಿಯಿಸಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು, "ರೈತರ ಹಿತದೊಂದಿಗೆ ರಾಜಿ ಆಗುವುದಿಲ್ಲ. ಮಧ್ಯವರ್ತಿಗಳು ಮಾರುಕಟ್ಟೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರೆ, ಅವರ ವಿರುದ್ಧ ಕಠಿಣ ಕ್ರಮವನ್ನು ಸರ್ಕಾರದ ಮಟ್ಟದಲ್ಲಿ ಶಿಫಾರಸು ಮಾಡುತ್ತೇನೆ " ಎಂದು ಎಚ್ಚರಿಕೆ ನೀಡಿದರು.ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸ್ಥಾಪನೆಯಾದ ನ್ಯಾಪೆಡ್ ಖರೀದಿ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದ ಅವರು, ಕೇಂದ್ರದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು. ಈ ವೇಳೆ ನ್ಯಾಪೆಡ್ ಅಧಿಕಾರಿ ಹಾಗೂ ರೈತಗಳೊಂದಿಗೆ ಸಮಾಲೋಚನೆ ನಡೆಸಿದರು.ರೈತರ ಅಳಲು:

ರೈತರು ನ್ಯಾಪೆಡ್ ನೀಡಿದ ದಿನಾಂಕದಂತೆ ತಮ್ಮ ಬೆಳೆ ತಂದುಕೊಡುತ್ತಿದ್ದರೂ, ಅಧಿಕಾರಿಗಳು ವಿಧವಿಧವಾದ ಕಾರಣಗಳನ್ನೊಪ್ಪಿಸಿ ಖರೀದಿಯಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂಬ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, "ನಿಮ್ಮ ಬೆಳೆದ ರಾಗಿ ಖರೀದಿಗೆ ನಾನೇ ಖಾತರಿಯಾದವನು. ನಿಮಗೆ ತೊಂದರೆ ಮಾಡಿದರೆ, ನಾನೇ ಸ್ಥಳಕ್ಕೆ ಬಂದು ಖರೀದಿಸುವಂತೆ ನೋಡಿಕೊಳ್ಳುತ್ತೇನೆ " ಎಂದು ಭರವಸೆ ನೀಡಿದರು.ಹಮಾಲಿಗಳಿಗೆ ಸೂಚನೆ:

ರೈತರಿಂದ ಹೆಚ್ಚು ಹಣ ಪಡೆಯುತ್ತಿರುವ ಹಮಾಲಿಗಳ ಕುರಿತು ಕೂಡ ದೂರುಗಳೂ ಕೇಳಿಬಂದವು. ತಕ್ಷಣವೇ ಹಮಾಲಿಗಳೊಂದಿಗೆ ಮಾತುಕತೆ ನಡೆಸಿದ ಶಾಸಕರು, ಪ್ರತಿ ಕ್ವಿಂಟಲ್‌ಗೆ ರು. 10 ಲೋಡಿಂಗ್ + ರು.10 ಎನ್ಲೋಡಿಂಗ್ ಮಾತ್ರ ಕೇಳಬೇಕು. ಒಟ್ಟಾರೆ ರು. 20ಕ್ಕಿಂತ ಹೆಚ್ಚಿನದನ್ನು ಕಳೆದುಕೊಳ್ಳಲು ರೈತರು ಬಾಧ್ಯರಾಗಬಾರದು ಎಂದು ಸ್ಪಷ್ಟ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಧರ್ಮಶೇಖರ್‌, ಎಪಿಎಂಸಿ ಕಾರ್ಯದರ್ಶಿ ಸಿದ್ಧರಂಗಸ್ವಾಮಿ, ಮಾಜಿ ಅಧ್ಯಕ್ಷ ಜಯರಾಂ, ರೈತ ಸಂಘದ ಮುಖಂಡರು ಬೋರನಕಪ್ಪಲು ಶಿವಲಿಂಗಪ್ಪ, ದಯಾನಂದ್‌ ಸೇರಿದಂತೆ ಹಲವಾರು ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.