ಸಂಘಟನೆಗೆ ಹಿರಿಯರ ಮಾರ್ಗದರ್ಶನ ಅಗತ್ಯ: ವೈಶಾಲಿ ಕುಡ್ವ

| Published : Jan 09 2025, 12:46 AM IST

ಸಾರಾಂಶ

ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಗೆ ಭೇಟಿ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘದ ಶ್ರೀಗಂಧಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಇನ್ನರ್ ವ್ಹೀಲ್ ಕ್ಲಬ್‌ ಜಿಲ್ಲಾಧ್ಯಕ್ಷೆ ವೈಶಾಲಿ ಕುಡ್ವ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸೇವಾ ಸಂಘಗಳ ಚಟುವಟಿಕೆಗಳಲ್ಲಿ ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಇನ್ನರ್ ವ್ಹೀಲ್ ಕ್ಲಬ್‌ ಜಿಲ್ಲಾಧ್ಯಕ್ಷೆ ವೈಶಾಲಿ ಕುಡ್ವ ಹೇಳಿದ್ದಾರೆ.

ಇನ್ನರ್ ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಗೆ ಭೇಟಿ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘದ ಶ್ರೀಗಂಧಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾವು ಸಂಪಾದಿಸಿದ ಹಣದಲ್ಲಿ ಒಂದಷ್ಟು ಭಾಗವನ್ನು ಸಮಾಜಸೇವೆಗೆ ಬಳಸಬೇಕು. ಸಮಾಜಸೇವೆಯಿಂದ ಸಿಗುವ ಸಂತೃಪ್ತಿ ಬೇರೆ ಯಾವುದೇ ವೃತ್ತಿಯಲ್ಲಿ ಸಿಗುವುದಿಲ್ಲ ಎಂದರು.

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ, ಪುರುಷರ ಮನೋವೈಕಲ್ಯಗಳು ಕಾರಣವಾಗಿರುತ್ತವೆ. ತಾಯಿಯಂದಿರು ಗಂಡು ಮಕ್ಕಳಿಗೆ ಸಭ್ಯತೆ ಹಾಗು ಮೌಲ್ಯಧಾರಿತ ಬದುಕು ಕಟ್ಟಿಕೊಳ್ಳುವ ಪಾಠ ಹೇಳಿಕೊಡಬೇಕು ಎಂದು ಮನವಿ ಮಾಡಿದ ಅವರು, ಹೆಣ್ಣು ಮಕ್ಕಳು ತಮ್ಮ ರಕ್ಷಣೆಗೆ ಬೇಕಾದ ವಿದ್ಯೆ ಕಲಿತುಕೊಳ್ಳಬೇಕು. ಪೋಷಕರು ಅಂತಹ ವಿದ್ಯೆ ಕಲಿಯಲು ಪ್ರೋತ್ಸಾಹ ನೀಡಬೇಕು. ಅತ್ಯಾಚಾರದಂತಹ ಘಟನೆಗಳು ನಡೆದಾಗ ಪ್ರತಿಭಟನೆ ಮಾಡಿ ಪ್ರಯೋಜನವಿಲ್ಲ. ಹೀನ ಮನಃಸ್ಥಿತಿಯ ಸಂತಾನವನ್ನು ನಾಶ ಮಾಡುವಂತಹ ಬಲಿಷ್ಠ ಕಾನೂನು ಅವಶ್ಯಕ ಎಂದರು.

ಬೆಳಗ್ಗೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿದ್ದ ಡಿಜಿಟಲ್ ಗಡಿಯಾರ ಹಾಗೂ ಫೋಕಸ್ ಲೈಟ್‌ಗೆ ಚಾಲನೆ ನೀಡಲಾಯಿತು. ಕ್ಲಬ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಕ್ಲಬ್ ಅಧ್ಯಕ್ಷೆ ಸಂಗೀತಾ ದಿನೇಶ್, ಉಪಾಧ್ಯಕ್ಷೆ ತನ್ಮಯಿ ಪ್ರವೀಣ್, ಕಾರ್ಯದರ್ಶಿ ಸುಮಲತಾ ಪುರುಷೋತ್ತಮ, ಖಜಾಂಚಿ ಸೌಮ್ಯ ಸತೀಶ್, ಐಎಸ್‌ಒ ಅಮೃತ ಕಿರಣ್ ಇದ್ದರು.