ಕನ್ನಡಪ್ರಭ ವಾರ್ತೆ ಶಿರಾ
ಪೊಲೀಸರೆಂದರೆ ಕೇವಲ ಭಯವಲ್ಲ ಅದೊಂದು ರಕ್ಷಣೆ ಆತ್ಮವಿಶ್ವಾಸ ಹಾಗೂ ಬಲ ಜನಸಾಮಾನ್ಯರಿಗೆ ಯಾವುದೇ ಕಷ್ಟ ಬಂದರೂ ಸಹ ಪೊಲೀಸರು ನಮ್ಮ ಜೊತೆಯಲ್ಲಿ ನಿಲ್ಲುತ್ತಾರೆ ಎಂದು ಸಬ್ ಇನ್ಸಪೆಕ್ಟರ್ ಆನಂದ್ ಕುಮಾರ್ ಹೇಳಿದರು.ಬುಕ್ಕಾಪಟ್ಟಣ ಹೋಬಳಿಯ ಕಮಲಾ ನಾಯ್ಕ ತಾಂಡಾ ಗ್ರಾಮದಲ್ಲಿ ಶಿರಾ ನಗರ ಪೊಲೀಸ್ ಠಾಣೆಯ ವತಿಯಿಂದ ಶಿರಾ ಡಿವೈಎಸ್ಪಿ ಬಿ ಕೆ ಶೇಖರ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ಮನೆ ಮನೆಗೆ ಪೊಲೀಸ್ ಪರಿಕಲ್ಪನೆ ಅಡಿಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಮಹಿಳೆಯರ ಮಕ್ಕಳ ಸುರಕ್ಷತೆ ಹಾಗೂ ತುರ್ತು ಸಹಾಯವಾಣಿಗಳ ಬಗ್ಗೆ ಮನೆ ಮನೆ ಪೊಲೀಸ್ ಕಾರ್ಯಕ್ರಮದ ಉದ್ದೇಶದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಮಾತನಾಡಿದರು.
ಜನಸಾಮಾನ್ಯರಿಗೆ ಧೈರ್ಯ ತುಂಬಲು ಅರಿವು ಮೂಡಿಸಲು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ. ನಿಮ್ಮ ನಡುವೆ ಕಂಡುಬರುವ ಯಾವುದೇ ರೀತಿಯ ಅನುಮಾನಾಸ್ಪದ ಅನೈತಿಕ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಹಂಚಿಕೊಂಡು ನಮ್ಮ ಜೊತೆ ನೀವು ಸಹ ಸಹಕರಿಸಬೇಕು. ಇದರಿಂದ ತಮಗೆ ಯಾವುದೇ ತೊಂದರೆಯಾಗದಂತೆ ಇಲಾಖೆ ನಿಮಗೆ ಬೆಂಬಲವಾಗಿ ನಿಲ್ಲುತ್ತದೆ. ಮಕ್ಕಳಲ್ಲಿ ಹೆಚ್ಚಿನ ಮೊಬೈಲ್ ಬಳಕೆಯನ್ನು ತಪ್ಪಿಸಬೇಕು ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್ ಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳ ಮುಖಾಂತರ ಅಪರಿಚಿತರ ಪರಿಚಯ ಮಾಡಿಕೊಂಡು ಅವರಿಂದ ಮೋಸಗೊಳಗಾಗುವ ಸಂಭವ ಹೆಚ್ಚಾಗುತ್ತಿದೆ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಸರಕಾರ ಕಟ್ಟುನಿಟಿನ ಕಾನೂನುಗಳನ್ನು ಹೊರತಂದಿದ್ದು ಕಾನೂನಿನಿಂದ ಎಲ್ಲರೂ ಪ್ರದಕ್ಷಣೆ ಪಡೆಯಬಹುದಾಗಿದೆ ಎಂದು ತಿಳಿಸಿದರು.ಪ್ರೊಬೇಷನರಿ ಪಿ ಎಸ್ ಐ ಕುಮಾರಿ ಸವಿತಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮುಖಾಂತರ ಮೋಸ ಮಾಡುವುದು, ಪೋಕ್ಸೋ ಪ್ರಕರಣಗಳು, ಮಹಿಳೆಯರ ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು ಗ್ರಾಮಸ್ಥರು ಈ ಕುರಿತು ಎಚ್ಚರ ವಹಿಸಬೇಕು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾದಕ ವಸ್ತುಗಳನ್ನು ಬಳಸುವವರು ಹಾಗೂ ಅವುಗಳನ್ನು ಸರಬರಾಜು ಮಾಡುವವರು ಕಂಡು ಬಂದಲ್ಲಿ ತಕ್ಷಣ ೧೧೨ ನಂಬರಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು ಆ ಮೂಲಕ ತಮ್ಮ ಹಾಗೂ ತಮ್ಮ ನೆರೆಹೊರೆಯ ಜನರ ರಕ್ಷಣೆಯನ್ನು ಮಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬುಕ್ಕಾಪಟ್ಟಣ ಪೊಲೀಸ್ ಉಪಠಾಣೆಯ ಹೆಡ್ ಕಾನ್ಸಟೆಬಲ್ ರಂಗನಾಥ್, ಸಿಬ್ಬಂದಿ ಮಾರುತಿ ಸೇರಿದಂತೆ ಗ್ರಾಮಸ್ಥರು ಮಹಿಳೆಯರು ಮಕ್ಕಳು ಹಾಜರಿದ್ದರು.