ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಮತ್ತು ಪರಿಶಿಷ್ಟ ಜಾತಿ/ಪಂಗಡಗಳ ಹಿತರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದ್ದು ಅದನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದೇವೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ನಂಜಪ್ಪ ತಿಳಿಸಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿ, ಸದೃಢ ಹಾಗೂ ಶಾಂತಿಯುತ ಸಮಾಜ ನಿರ್ಮಾಣದ ಪರಿಕಲ್ಪನೆಯ ಗುರಿಯೊಂದಿಗೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಕ್ಷಣೆ ಮಾಡುವ ಗುರುತ್ತರ ಜವಾಬ್ದಾರಿ ಹೊಂದಿದ್ದು ಪೊಲೀಸ್ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಜೂಜು, ಅಕ್ರಮ ಮದ್ಯ ಮಾರಾಟ ತಡೆಈ ಹಿಂದೆ ನಡೆದ ಸಭೆಯಲ್ಲಿ ಬಹುತೇಕ ದಲಿತ ಮುಖಂಡರು ಹಲವು ಮನವಿಗಳನ್ನು ನೀಡಿದ್ದರು, ಅವುಗಳಲ್ಲಿ ಪ್ರಮುಖವಾಗಿ ದಲಿತ ಕೇರಿಗಳಲ್ಲಿ ಸಭೆ ನಡೆಸುವುದು, ಜೂಜು ಅಡ್ಡಗಳನ್ನು ಮತ್ತು ಅಕ್ರಮ ಮಧ್ಯ ಮಾರಾಟ ನಿಯಂತ್ರಿಸುವುದಾಗಿತ್ತು. ಇವುಗಳಿಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿದ್ದು ಪ್ರಾಯಶಃ ನಿಯಂತ್ರಿಸಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಸತತ ೧೦ ವರ್ಷದಿಂದ ಯಾವುದೇ ಅಪರಾಧಿ ಕೃತ್ಯ ಮತ್ತು ಪ್ರಕರಣಗಳಲ್ಲಿ ಬಾಗಿ ಆಗದೆ ಇರುವ ೧೨೩ ರೌಡಿಶೀಟರ್ ಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇವರಲ್ಲಿ ಆರು ಜನ ನಿಧನರಾಗಿದ್ದಾರೆ ಹಾಗೂ ಕೆಲವು ಪ್ರಕರಣಗಳಲ್ಲಿ ಪರಸ್ಪರ ರಾಜಿ ಸಂಧಾನಗಳಿಂದ ನ್ಯಾಯ ದೊರಕಿಸಲಾಗಿದೆ ಎಂದರು.
ಮಹಿಳಾ ರಕ್ಷಣೆಗೆ ಇಲಾಖೆ ಬದ್ಧ ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ ಆ ಮುಖಾಂತರ ರಕ್ಷಣೆ ಒದಗಿಸಲು ಬದ್ಧವಾಗಿದೆ ಎಂದು ತಿಳಿಸಿದರು. ಪೊಲೀಸರಿಗೆ ಅಭಿನಂದನೆಕರ್ನಾಟಕ ದಲಿತ ರೈತ ಸೇನೆ ರಾಜ್ಯ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ಮಾತನಾಡಿ, ಪೊಲೀಸ್ ಇನ್ಸ್ಪೆಕ್ಟರ್ ನಂಜಪ್ಪ ನವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಪ್ರಕರಣಗಳನ್ನು ಅತಿ ಶೀಘ್ರದಲ್ಲಿ ಇತ್ಯರ್ಥಪಡಿಸುತ್ತಿರುವುದು ಅಭಿನಂದನಾರ್ಹ ಎಂದರು. ಸಭೆಯಲ್ಲಿ ದಲಿತ ಮುಖಂಡರಾದ ಸಿ.ಜೆ.ನಾಗರಾಜು, ಚಿಕ್ಕನಾರಾಯಣ, ರಾಮಣ್ಣ, ರಮಣ ಕುಮಾರ್, ಕಲಾವಿದ ಎಲ್ಲಪ್ಪ, ಸಾಕಪ್ಪ ,ರಘು, ಕೆರೆಕೋಡಿ ಮಂಜುಳ, ಹುನಸನಹಳ್ಳಿ ಸತೀಶ್, ಸುಭಾಷ್, ಸಿಂಗರಹಳ್ಳಿ ಕಿರಣ್, ಲಕ್ಷಮ್ಮ, ಲಲಿತಾ, ಹುಲ್ದೇನಹಳ್ಳಿ ವೆಂಕಟೇಶ್ ಇದ್ದರು.