ಸಾರಾಂಶ
ನಿಂಗರಾಜ ಬೇವಿನಕಟ್ಟಿ
ಕನ್ನಡಪ್ರಭ ವಾರ್ತೆ ನರೇಗಲ್ಲತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಇಂದು ನಿಡಗುಂದಿಯ ವೀರಭದ್ರೇಶ್ವರ ದೇವಸ್ಥಾನದ ಪ್ರಾಂಗಣದಿಂದ ಸಾರೋಟಿನಲ್ಲಿ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಗುರುವಾರ ಅತ್ಯಂತ ವೈಭವಪೂರಿತವಾಗಿ ಚಾಲನೆಗೊಂಡಿತು.
ಈ ವೇಳೆ ವಿವಿಧ ಕಲಾತಂಡಗಳು, ಛದ್ಮವೇಷ ಧರಿಸಿದ್ದ ಶಾಲಾ ಮಕ್ಕಳು, ಮಕ್ಕಳ ಕೋಲಾಟ, ಕೈಯಲ್ಲಿ ಸಾಹಿತಿಗಳ ಹಾಗೂ ವಚನಕಾರರ ಭಾವಚಿತ್ರಗಳು, ಹೆಜ್ಜೆಮೇಳ, ಕನ್ನಡಾಂಬೆಯ ಸ್ಲೋಗನ್ ಘೋಷಿಸುತ್ತಾ ಸಾಗಿದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಸಮ್ಮುಖದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು. ರೋಣ ಪುರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಮುಖಂಡ ಮಿಥುನ ಪಾಟೀಲರನ್ನೊಳಗೊಂಡಂತೆ ಹರಗುರು ಚರ ಮೂರ್ತಿಗಳು ಮೆರವಣಿಗೆಗೆ ಚಾಲನೆ ನೀಡಿದರು.ನಿಡಗುಂದಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಗ್ರಾಪಂ ಮುಂಭಾಗಕ್ಕೆ ಆಗಮಿಸಿ ಅಲ್ಲಿಂದ ಮೂರು ಕಿ.ಮೀ. ದೂರದಲ್ಲಿರುವ ನಿಡಗುಂದಿಕೊಪ್ಪ ಗ್ರಾಮದ ಶ್ರೀಮಠದ ಆವರಣದಲ್ಲಿನ ಮುಖ್ಯ ವೇದಿಕೆಗೆ ತಲುಪಿತು. ಗ್ರಾಮದ ವೀರಭದ್ರೇಶ್ವರ ಕರಡಿಮಜಲು, ಡೊಳ್ಳು ಕುಣಿತ, ಹಲಗೆ ಮೇಳ, ಡೊಳ್ಳು ಕುಣಿತ, ನಂದಿಕೋಲು ಕುಣಿತ, ಅಲಂಕೃತಗೊಂಡ ಚಕ್ಕಡಿಗಳು ಭಾಗಿ, ಗೊಂಬೆಗಳ ವೇಷಧಾರಿಗಳು, ಶಾಲಾ ಮಕ್ಕಳ ಕೋಲಾಟದ ತಂಡಗಳು ರಂಗು ತುಂಬಿದರೆ, ಸ್ವಾತಂತ್ರ್ಯ ಹೋರಾಟಗಾರರು, ಬಸವಾದಿ ಶರಣರ ಛದ್ಮವೇಷ ಧರಿಸಿದ್ದ ಶಾಲಾ ಮಕ್ಕಳ ಮೆರವಣಿಗೆಗೆ ಮೆರುಗು ನೀಡಿದರು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಮುಖಂಡರು ಕಲಾತಂಡಗಳ ವಾದ್ಯಗಳನ್ನು ನುಡಿಸುವುದರ ಜತೆಗೆ ನೃತ್ಯ ಮಾಡಿದರು.
ನಿಡಗುಂದಿಕೊಪ್ಪ ಶಾಖಾ ಶಿವಯೋಗಮಂದಿರದ ಅಭಿನವ ಚನ್ನಬಸವ ಶ್ರೀಗಳು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶಿಕರು, ಶಿವಪುರದ ಅಡವಿ ಸಿದ್ದೇಶ್ವರ ಶ್ರೀಗಳು ಸಮ್ಮೇಳನದ ಸ್ವಾಗತ ಸಮೀತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಅಮರೇಶ ಗಾಣಿಗೇರ, ಮಿಥುನ್ ಪಾಟೀಲ, ಸಾಹಿತಿ ಎಂ ಎಸ್ ಧಡೆಸೂರಮಠ, ಹಾಲಕೆರೆ ಗ್ರಾ ಪಂ ಅಧ್ಯಕ್ಷ ಗಿರೀಶಗೌಡ ಮುಲ್ಕಿಪಾಟೀಲ, ಆರ್ ಕೆ ಗಚ್ಚಿನಮಠ, ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಯ ಮುಖಂಡರುಗಳು, ನಿಡಗುಂದಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರನ್ನೊಗೊಂಡಂತೆ ಕನ್ನಡಾಭಿಮಾನಿಗಳು ಇದ್ದರು.