ಸಾರಾಂಶ
ತಾಲೂಕು ಕಚೇರಿ ಆವರಣದಲ್ಲಿ ನಗರಸಭೆ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ. ಚಿಕ್ಕಮಗಳೂರುನಗರದ ನಾಗರೀಕರಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚು ಅರಿವು ಮೂಡಿಸುವ ಉದ್ದೇಶದಿಂದ ಸ್ವಚ್ಛತಾ ರ್ಯಾಲಿ, ಮ್ಯಾರಥಾನ್ ಫ್ಲಾಗಿಂಗ್ ಅಭಿಯಾನ ನಡೆಸಲಾಗುತ್ತಿದೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ತಿಳಿಸಿದರು. ತಾಲೂಕು ಕಚೇರಿ ಆವರಣದಲ್ಲಿ ನಗರಸಭೆ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಸ್ವಚ್ಛತಾ ರ್ಯಾಲಿ, ಮ್ಯಾರಥಾನ್ ಫ್ಲಾಗಿಂಗ್ ಅಭಿಯಾನ, ಸಹಿ ಅಭಿಯಾನ ಜಾಥಕ್ಕೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ನಗರದಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ವಚ್ಛಾ ಟ್ರಸ್ಟ್ ಪ್ರಾರಂಭಿಸಲಾಯಿತು. ಮನೆ-ಮನೆ ಕಸ ಸಂಗ್ರಹದ ಮೂಲಕ ಸ್ವಚ್ಛತೆ ಕಾಪಾಡಬೇಕೆಂದು ನಾಗರಿಕರಲ್ಲಿ ಅರಿವು ಮೂಡಿಸಲಾಗಿತ್ತು. ಸ್ವಚ್ಛತೆ ಕಾಪಾಡುವಲ್ಲಿ ನಗರಸಭೆ ರಾಜ್ಯದಲ್ಲೇ 2ನೇ ಸ್ಥಾನದಲ್ಲಿ ಇದೇ ಎಂದು ಹೇಳಿದರು.ಪ್ರಪಂಚದಲ್ಲಿ ಸ್ವಿಡ್ಜರ್ ಲ್ಯಾಂಡ್ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ಅದೇ ರೀತಿ ಮಿನಿ ಸ್ವಿಡ್ಜರ್ ಲ್ಯಾಂಡಾಗಿ ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ, ಪ್ಲಾಸ್ಟಿಕ್ ಬಾಟಲಿ, ಕಸ ಸಂಪೂರ್ಣವಾಗಿ ನಿಷೇಧಿಸ ಲಾಗದಿದ್ದರೂ ಕಡಿಮೆ ಮಾಡಿ ನಿಯಂತ್ರಿಸಬೇಕೆಂದು ಕರೆ ನೀಡಿದರು.ಪ್ರಕೃತಿ ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರು ಕೈ ಜೊಡಿಸಬೇಕು. ಜೊತೆಗೆ ಜಲಮೂಲಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ಹಾಕಿ ಕಲುಷಿತ ಗೊಳಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪರಿಸರ ಹಾಗೂ ನಗರಸಭೆ ಸಿಬ್ಬಂದಿಗೆ ಸೂಚನೆ ನೀಡಿದರು.ಬಾವಿ ಪ್ರಜೆಗಳಾದ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಬಗ್ಗೆ ಶಾಲೆಗಳಿಗೆ ತೆರಳಿ ಪರಿಸರ, ಪ್ರಕೃತಿ, ಕಸ ವಿಲೇವಾರಿ ಬಗ್ಗೆ ಪ್ರಾಥಮಿಕ ಹಂತದಲ್ಲಿ ಅರಿವು ಮೂಡಿಸಬೇಕಾದ ಅಗತ್ಯ ಇದೆ ಎಂದರು.ಬಸವತತ್ವ ಪೀಠ ತತ್ವದ ಪೀಠಾಧ್ಯಕ್ಷ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ದೇವರನ್ನು ಹೊರತುಪಡಿಸಿ ಸ್ವಚ್ಛತೆ ಅಗತ್ಯವಾಗಿದೆ. ನಗರ ಅತ್ಯಂತ ಸ್ವಚ್ಛ ನಗರ ಎಂದು ಹೆಸರುಗಳಿಸಿದ್ದು, ಪ್ರವಾಸೋದ್ಯಮದ ಮೂಲಕ ಅತಿ ಹೆಚ್ಚು ಹೆಸರು ಮಾಡುವ ಅವಕಾಶ ಜಿಲ್ಲಾ ಕೇಂದ್ರಕ್ಕೆ ಇದೇ ಎಂದು ತಿಳಿಸಿದರು.ನಗರದಲ್ಲಿ ವಾಸಿಸುವ ಎಲ್ಲರೂ ಸ್ವಚ್ಛತೆ ಬಗ್ಗೆ ಅಪಾರ ಕಾಳಜಿ ವಹಿಸುವುದು ಅಗತ್ಯ ಎಂದು ಮನೆಯಲ್ಲಿ ಉತ್ಪತ್ತಿಯಾದ ಕಸ ವನ್ನು ಬೀದಿಗೆ ಹಾಕದೆ ನಗರಸಭೆ ಗಂಟೆ ಗಾಡಿಗೆ ಹಾಕುವುದು ರೂಢಿಗತವಾಗಬೇಕೆಂದು ಕರೆ ನೀಡಿದರು.ಸ್ವಚ್ಛತೆ ಕುರಿತು ಗಂಭೀರ ಆಲೋಚನೆ ಮಾಡಬೇಕು. ಈ ನಿಟ್ಟಿನಲ್ಲಿ ನಗರಸಭೆ ಮನೆ-ಮನೆ ಕಸ ಸಂಗ್ರಹಿಸಲು ಕೈಗೊಂಡ ದೊಡ್ಡ ಉಪಕ್ರಮದಿಂದ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.ಈ ವಿಚಾರದಲ್ಲಿ ಎಲ್ಲರ ಸಹಭಾಗಿತ್ವ ಅಗತ್ಯವಾಗಿದ್ದು ಸಣ್ಣ-ಸಣ್ಣ ಕೊಡುಗೆ ಬಹಳ ದೊಡ್ಡ ಪರಿಣಾಮ ಬೀರುತ್ತದೆ ಎಂದು ಕಿವಿಮಾತು ಹೇಳಿದರು.ನಗರಸಭಾ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ ಬೀದಿ ನಾಟಕ ಮತ್ತು ಗೋಡೆ ಬರಹಗಳ ಮೂಲಕ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದರ ಜೊತೆಗೆ, ನಗರದ ನಾಗರಿಕರ ಮನೆ-ಮನೆ ಕಸ ಸಂಗ್ರಹಣೆಗೆ ಗಂಟೆ ಗಾಡಿಗಳ ಮೂಲಕ ಆದ್ಯತೆ ನೀಡಬೇಕೆಂದು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಕುಮಾರೆ ಗೌಡ, ಪರಮೇಶ್, ಲಕ್ಷ್ಮಣ್, ಸ್ವಚ್ಛ ಟ್ರಸ್ಟ್ನ ಡಾ. ಶುಭ ವಿಜಯ್, ಬ್ರಹ್ಮ ಕುಮಾರೀಸ್ನ ರಾಜಯೋಗಿನಿ ಬಿ.ಕೆ ಭಾಗ್ಯಕ್ಕ, ರೋಟರಿ ಮತ್ತು ಲಯನ್ಸ ಕ್ಲಬ್ ಸದಸ್ಯರು, ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.