ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಭಾರತೀಯ ರೆಡ್ಕ್ರಾಸ್ ಸಂಸ್ಥೆಯು ಸಮಾಜಮುಖಿ ಸೇವೆಯಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿದೆ ಎಂದು ತಾಲೂಕು ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷ ಭರತ್ ಕುಮಾರ್ ತಿಳಿಸಿದರು.ಪಟ್ಟಣದ ಬಿ ಎಂ ರಸ್ತೆಯಲ್ಲಿರುವ ಶ್ರೀಪಾದ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಉದ್ಘಾಟನಾ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ರೆಡ್ಕ್ರಾಸ್ ಸಂಸ್ಥೆಯು ಸಮಾಜಮುಖಿ ಸೇವೆಯಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದೆ. ಅದರಲ್ಲೂ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಘಸಂಸ್ಥೆ ಹೊಂದಿರುವ ತಾಲೂಕು ಎಂದರೆ ಅದು ಚನ್ನರಾಯಪಟ್ಟಣ. ತಾಲೂಕಿನಲ್ಲಿ ಅನೇಕ ಸಂಘಸಂಸ್ಥೆಗಳು ತನ್ನದೇ ಆದ ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಿವೆ, ಅದರಲ್ಲೂ ಇಂತಹ ರೆಡ್ಕ್ರಾಸ್ ಸಂಸ್ಥೆಯನ್ನು ತಾಲೂಕು ಮಟ್ಟದಲ್ಲಿ ಸ್ಥಾಪಿಸಲು ಸೇವಾ ಮನೋಭಾವವನ್ನು ಇಟ್ಟುಕೊಂಡಿರುವ ಸದಸ್ಯರಿಗೆ ಮಾತ್ರ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಅದರಲ್ಲೂ ಈಗಾಗಲೇ ಸುಮಾರು ೨೦ ಜನ ಸದಸ್ಯರನ್ನು ಒಳಗೊಂಡಂತೆ ರೆಡ್ಕ್ರಾಸ್ ಸಂಸ್ಥೆಯು ಸ್ಥಾಪಿಸಲಾಗಿದೆ. ಉತ್ತಮವಾದ ಸೇವಾ ಮನೋಭಾವ ಮತ್ತು ಸಮಾಜಮುಖಿ ಸೇವೆಗೆ ಸಮಯವನ್ನು ನೀಡುವುದೇ ಮೂಲ ಉದ್ದೇಶವಾಗಿದೆ. ಈಗಾಗಲೇ ನಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರು ವಿವಿಧ ಸಂಘಸಂಸ್ಥೆಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಸದಸ್ಯರು ನಮ್ಮೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ರೆಡ್ಕ್ರಾಸ್ ಸಂಸ್ಥೆಯು ಯಾರದೋ ಒಬ್ಬರ ಸಂಸ್ಥೆಯಲ್ಲ. ಈ ಸಂಸ್ಥೆಯು ಸರ್ಕಾರಿ ಸಂಸ್ಥೆಯಾಗಿದ್ದು, ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಕೆಲ ಷರತ್ತುಗಳನ್ನು ಸಹ ಒಳಗೊಂಡಿದೆ. ಅದರಲ್ಲೂ ಕೂಡ ಸಮಾಜಮುಖಿ ಸೇವೆ, ಸೇವಾ ಮನೋಭಾವ ಒಳಗೊಂಡಂತೆ ಈ ಸಂಸ್ಥೆಯು ಸೇವೆಗೆ ಇರುವುದು ಇಡೀ ರಾಷ್ಟ್ರಮಟ್ಟದಲ್ಲೇ ಹೆಸರುವಾಸಿಯಾಗಿದೆ ಎಂದರು.ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ನವೀನ್ ಕುಮಾರ್ ಮಾತನಾಡಿ, ರೆಡ್ಕ್ರಾಸ್ ಯಾವುದೇ ರೀತಿಯ ಪ್ರಾಣಹಾನಿ ಉಂಟಾಗಬಾರದು ಎಂಬ ತತ್ವ ಮತ್ತು ಸಿದ್ಧಾಂತಗಳನ್ನು ಆಧರಿಸಿ ನಡೆಯುತ್ತಿರುವ ಏಕೈಕ ಸಂಸ್ಥೆ ಎನ್ನಬಹುದು. ಏಕೆಂದರೆ ಕೋಟ್ಯಂತರ ಜನರಿಗೆ ರಕ್ತದಾನ ಮಾಡಿ ಮತ್ತು ನೇತ್ರದಾನ ಆರೋಗ್ಯ ತಪಾಸಣೆ ಹಾಗೂ ಇನ್ನಿತರ ಸಮಾಜಮುಖಿ ಸೇವಾ ಮನೋಭಾವದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ. ಅದರಲ್ಲೂ ಈ ಸಂಸ್ಥೆಯವರು ಮಾರಕ ರೋಗಗಳಿಗೆ ಸಹಾಯ ಹಸ್ತ ನೀಡುವುದು ಮತ್ತು ಚಿಕಿತ್ಸೆಗೆ ನೆರವು, ಸಹಕಾರವನ್ನು ನೀಡುತ್ತಾ ಬಂದಿದೆ. ಈಗಾಗಲೇ ನಮ್ಮ ಪರಿಸರವು ಬಹಳ ಹದಗೆಟ್ಟಿದ್ದು, ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ ಪ್ರತಿಯೊಬ್ಬ ಮನುಷ್ಯನು ಕೂಡ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಉತ್ತಮವಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ದೊಡ್ಡ ಮಾರಕ ಕಾಯಿಲೆಗಳಿಗೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಮೋಹನ್ ಕುಮಾರ್. ಜಿಲ್ಲಾ ಉಪ ಸಭಾಪತಿ ವೀರಭದ್ರಪ್ಪ.ಜಿಲಾ ಕಾರ್ಯದರ್ಶಿ ಶಬೀರ್ ಅಹ್ಮಮದ್. ಜಿಲ್ಲಾ ನಿರ್ದೇಶಕ ಡಾಕ್ಟರ್ ಅಬ್ದುಲ್ ಬಷಿರ್, ಹೊಳೆನರಸೀಪುರದ ಸಭಾಪತಿ ಪುಟ್ಟಸ್ವಾಮಿ, ಚನ್ನರಾಯಪಟ್ಟಣ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ರಾಜಪ್ಪ, ಜಬೀಉಲ್ಲಾಬೇಗ್, ಡಾ. ನವೀನ್ ಕುಮಾರ್ ಮುಂತಾದವರು ಹಾಜರಿದ್ದರು.