ಸರ್ವ ಸಮಾಜೋತ್ಸವದ ಪೂರ್ವ ಭಾವಿ ಸಭೆ: : ಸುಧೀರ್ ಕುಮಾರ್ ಮುರೊಳ್ಳಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಒಡೆದು ಆಳುವವರ ಮಧ್ಯೆ ಕೂಡಿ ಬಾಳುತ್ತೇವೆ ಎಂಬ ಸಂದೇಶ ಸಾರುವುದು ಸರ್ವ ಸಮಾಜೋತ್ಸವದ ಮುಖ್ಯ ಉದ್ದೇಶ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸಂಚಾಲ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.ಗುರುವಾರ ಪಟ್ಟಣದ ಅಗ್ರಹಾರದ ಉಮಾ ಮಹೇಶ್ವರ ಸಮುದಾಯ ಭವನದಲ್ಲಿ ನಡೆದ ಮಲೆನಾಡು ಕರಾವಳಿ ಜನಪರ ಒಕ್ಕೂಟ ಮೇ 3 ರಂದು ಕೊಪ್ಪದಲ್ಲಿ ಆಯೋಜಿಸಿರುವ ಸರ್ವ ಸಮಾಜೋತ್ಸವ ಹೀಗೊಂದು ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಭಾರತದ ಭವ್ಯ ಸೌಂದರ್ಯವಿರುವುದು ಕೂಡಿ ಬಾಳುವುದರಲ್ಲಿ. ಎಲ್ಲರನ್ನೂ ಪ್ರೀತಿಸುವುದರಿಂದ ಏನೂ ಲಾಭವಾಗದಿದ್ದರೂ ನಷ್ಟವಂತೂ ಆಗುವುದಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ,ಬೌದ್ಧ ರೆಲ್ಲರೂ ಭಾರತಾಂಬೆ ಪಡೆದ ಮಕ್ಕಳು ಎಂಬ ಸಂದೇಶ ವನ್ನು ಸಮಾಜೋತ್ಸವದಲ್ಲಿ ಸಾರಲಾಗುತ್ತದೆ. ಹೊಡೆದಾಟ, ದ್ವೇಷ, ಹಿಂಸೆಯಿಂದ ನಾವು ಬೆಳೆಯಲು ಸಾಧ್ಯವಿಲ್ಲ. ರಾಜಕೀಯ ಹಿತಾಸಕ್ತಿಗೆ ಧರ್ಮಗಳ ನಡುವಿನ ಯುದ್ಧ ಭಾರತ ಕಟ್ಟಲು ಬಿಡಬಾರದು. ಇತಿಹಾಸದ ತಪ್ಪುಗಳಿಗೆ ವರ್ತ ಮಾನ ಬಲಿಯಾದರೆ ಭವಿಷ್ಯ ಉತ್ತಮವಾಗಿರಲು ಸಾಧ್ಯವಿಲ್ಲ . ಭಾರತದ ಸೌಂದರ್ಯ ಇರುವುದೇ ವೈವಿಧ್ಯತೆಯಲ್ಲಿ. ಕೂಡಿ ಬಾಳುವುದು ಈ ನೆಲದ ಗುಣ. ಬುದ್ಧನ ತ್ಯಾಗದ ಚಿಂತನೆ, ಉಪನಿಷತ್ತಿನ ಸತ್ಯ ಸಂದೇಶಗಳೇ ನಮ್ಮ ಜೀವಾಳ. ಸಾವಿರಾರು ವರ್ಷಗಳ ಸಂತ ಪರಂಪರೆ, ಗಾಂಧಿಯವರ ನಡಿಗೆ ಶಾಶ್ವತ ಸ್ಫೂರ್ತಿ. ಬುದ್ಧ, ಬಸವಣ್ಣ, ನಾರಾಯಣಗುರುಗಳ ಸಂದೇಶವೇ ನಮಗೆ ದಾರಿ ದೀಪ. ಗಾಂಧಿ, ಅಂಬೇಡ್ಕರ್ ಅವರ ಸಮತೆ, ಸಮಾನತೆಯೇ ನಾಡಿನ ಭದ್ರ ಬುನಾದಿ. ಸಹಬಾಳ್ವೆ, ಸಹಿಷ್ಣುತೆ, ಶಾಂತಿಯುತ ಬದುಕು ಅಭಿವೃದ್ಧಿಗೆ ದಾರಿ ಎಂದರು.

ದಕ್ಷಿಣ ಕನ್ನಡದ ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯ ಲಕ್ಷ್ಮೀಶ ಗಬಡ್ಕ ಮಾತನಾಡಿ, ಸತ್ಯ ಮತ್ತು ಧರ್ಮ ಗೆಲ್ಲಬೇಕು. ಸತ್ಯವೂ ಭೂತ, ಭವಿಷ್ಯ, ವರ್ತಮಾನಕಾಲದಲ್ಲಿ ಬದಲಾಗುವುದಿಲ್ಲ. ಅದೇ ಸತ್ಯ, ಅದೇ ಧರ್ಮವಾಗಿದೆ. ಧರ್ಮ ಎಂಬುದು ನಂಬಿಕೆ.ಧರ್ಮವನ್ನೂ ಯಾವುದೇ ಸಂಘಟನೆ ಪ್ರತಿನಿಧಿಸಬಾರದು ಎಂದರು.


ಸರ್ವ ಸಮಾಜೋತ್ಸವದ ಅಧ್ಯಕ್ಷ ಹಸಗೋಡು ನಾಗೇಶ್ ಮಾತನಾಡಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಲವಾರು ಜಾತಿ, ಧರ್ಮ, ಜನಾಂಗದವರು ಒಟ್ಟಾಗಿ ಬದುಕುತ್ತಿದ್ದೇವೆ. ಎಲ್ಲರೂ ಒಂದಾಗಿ ಬಾಳಬೇಕು. ಸರ್ವಧರ್ಮ ಸಮನ್ವತೆಯಿಂದ ಬದುಕ ಬೇಕೆಂಬುದು ಸಮಾಜೋತ್ಸವ ಆಶಯ ಎಂದರು.

ಮಲೆನಾಡು ಕರಾವಳಿ ಜನಪರ ಒಕ್ಕೂಟದ ಮುಖಂಡರಾದ ನವೀನ್ ಕರವಾನೆ, ಎಂ.ಆರ್.ರವಿಶಂಕರ್, ಎಚ್.ಎಂ.ಮನು ಮತ್ತಿತರರಿದ್ದರು.