ಸಾರಾಂಶ
- 15-20 ನಿಮಿಷ ದಪ್ಪಹನಿಗಳ ಮಳೆ, ಚನ್ನಗಿರಿ, ಹರಿಹರದಲ್ಲೂ ಮಳೆ ಸಿಂಚನ- - -
ಕನ್ನಡಪ್ರಭ ವಾರ್ತೆ ದಾವಣಗೆರೆವರ್ಷದ ಮೊದಲ ಮಳೆ ಆಸೆ ಚಿಗುರಿಸಿದ್ದ ಮಳೆರಾಯ ನಗರದಲ್ಲಿ ಸ್ವಲ್ಪ ಹೊತ್ತು ಸಣ್ಣ ಪ್ರಮಾಣದಲ್ಲಿ ಸುರಿದು, ಇದ್ದಕ್ಕಿದ್ದಂತೆ ಮಾಯವಾದನು.ಕಳೆದ ಕೆಲ ವಾರಗಳಿಂದ ಉರಿಬಿಸಿಲಿನಿಂದ ಜಿಲ್ಲೆಯ ಜನರು ತತ್ತರಿಸುತ್ತಿದ್ದಾರೆ. ಮಂಗಳವಾರ ಸಂಜೆ ಇದ್ದಕ್ಕಿದ್ದಂತೆ ದಟ್ಟಮೋಡ ಆವರಿಸಿದ್ದರಿಂದ ಜನರು ಜೋರು ಮಳೆಯ ನಿರೀಕ್ಷೆಯಲ್ಲಿದ್ದರು. ನೋಡ ನೋಡುತ್ತಿದ್ದಂತೆ ಸಣ್ಣದಾಗಿ ಮಳೆ ಶುರುವಾಯಿತು. ಆದರೆ, ಸುಮಾರು 15-20 ನಿಮಿಷಗಳ ಕಾಲ ದಪ್ಪಹನಿಗಳ ಮಳೆಯಾಗಿ, ಎಲ್ಲ ಕಡೆ ಮೊದಲ ಮಳೆಯ ಮಣ್ಣಿನ ಸುವಾಸನೆ ಜನರು ಆಸ್ವಾದಿಸಿದರು.
ಜೋರು ಮಳೆ ನಿರೀಕ್ಷೆಯನ್ನು ಹುಸಿಗೊಳಿಸುವಂತೆ ಮಳೆ ನಿಂತಿತು. ರಾತ್ರಿ ಸಹ ಮಳೆಯ ಮೋಡಗಳು ಮಳೆಯ ಮುನ್ಸೂಚನೆ ಹೆಚ್ಚಿಸಿದ್ದರಿಂದ ಜನರು ಬಾನಿನತ್ತ ಮುಖ ಮಾಡುವಂತಾಗಿತ್ತು.ಹರಿಹರದಲ್ಲಿ ಸಾಧಾರಣ ಮಳೆ:ಹರಿಹರ ನಗರದಲ್ಲಿ ಮಂಗಳವಾರ ಪೂರ್ವ ಮುಂಗಾರು ಮಳೆ ಪ್ರಾರಂಭವಾಗಿದ್ದು, ಬಹುತೇಕ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ಬೆಳಗಿನಿಂದ ಬಿಸಿಲಿನ ಧಗೆ ಇತ್ತು. ಆದರೆ, ಮಧ್ಯಾಹ್ನ 3.20ರ ಸುಮಾರಿಗೆ ಮೊದಲ ಹನಿಗಳು ಭೂಮಿಗೆ ಮುತ್ತಿಡುವ ಮೂಲಕ ನಗರ ವಾಸಿಗಳಿಗೆ ಹರ್ಷ ನೀಡಿದವು. ಸಾಧಾರಣ ಮಳೆ ಸುರಿಯಿತು. ಕಾದ ಹಂಚಿಗೆ ನೀರು ಚುಮುಕಿಸಿದಂತೆ ಭಾರಿ ಗಾಳಿಯೊಂದಿಗೆ ಬಂದಷ್ಟೇ ಬೇಗ ಮಳೆ ಮಾಯವಾಗಿ ನಿರಾಸೆ ಮೂಡಿಸಿತು. ಸಂಜೆ 5.30ರ ಸುಮಾರಿಗೆ ಸಾಧಾರಣ ಮಳೆ ಹಾಗೂ ಸಂಪೂರ್ಣ ಮೋಡ ಕವಿದ ವಾತಾವರಣ ಮೂಡುವ ಮೂಲಕ ರಾತ್ರಿ ಮಳೆಯಾಗುವ ನಿರೀಕ್ಷೆ ಇತ್ತು.ಚನ್ನಗಿರಿಯಲ್ಲಿ ಮಳೆ ಸಿಂಚನ:ಚನ್ನಗಿರಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಲ್ಲಿ ಮಂಗಳವಾರ ಸಂಜೆ 5.30ರ ಸುಮಾರಿಗೆ ಮಳೆಯ ಸಿಂಚನವಾಗಿದೆ. ಬೇಸಿಗೆ ಉರಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪಿನ ಅನುಭವ ತಂದಿದೆ. ಕಳೆದೆರಡು ತಿಂಗಳಿನಿಂದ ಬಿಸಿಲಿನ ಬೇಗೆಯ ತಾಪದಿಂದ ಮಕ್ಕಳು, ವೃದ್ಧರು, ರೋಗಪೀಡಿತರು ಬಳಲಿ ಬೆಂಡಾಗಿದ್ದರು. ಮಂಗಳವಾರ ಬೆಳಗ್ಗೆಯಿಂದ ಕೆಲ ಸಮಯ ಉರಿಬಿಸಿಲು ಇದ್ದರೆ, ಮತ್ತೆ ಕೆಲ ಸಮಯ ಮೋಡ ಕವಿದ ವಾತಾವರಣ ಕಂಡುಬಂತು.- - --25ಕೆಸಿಎನ್ಜಿ2: