ಇದಕ್ಕೂ ಮುನ್ನಾದಿನ ಮಾ.30ರ ಸಂಜೆ ಗಜೇಂದ್ರಮೋಕ್ಷ ಉತ್ಸವ, ಏ.1 ರಂದು ರಾತ್ರಿ ಕಲ್ಯಾಣಿಯಲ್ಲಿ ತೆಪ್ಪೋತ್ಸವ, ಏ.2 ರಂದು ಬೆಳಗ್ಗೆ ತೀರ್ಥಸ್ನಾನ, ಸಂಜೆ ಪಟ್ಟಾಭಿಷೇಕ, ಏ.3 ರಂದು ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ, ಏ.4 ರಂದು ಬೆಟ್ಟದೊಡೆಯ ಯೋಗನರಸಿಂಹಸ್ವಾಮಿ ಮತ್ತು ಮಹಾಲಕ್ಷ್ಮೀ ಯದುಗಿರಿ ನಾಯಕಿಗೆ ಮಹಾಭಿಷೇಕ ನೆರವೇರಲಿದೆ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ವೈರಮುಡಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ಹತ್ತು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಮಾ.23ರಂದು ಅಂಕುರಾರ್ಪಣೆಯೊಂದಿಗೆ ಆರಂಭವಾಗಿ ಏ.4ರವರೆಗೆ ವೈಭವದಿಂದ ನೆರವೇರಲಿವೆ.ವೈರಮುಡಿ ಉತ್ಸವ, ರಥೋತ್ಸವ, ಮಹಾಭಿಷೇಕಗಳಂದು ಸರ್ಕಾರಿ ರಜಾ ಇರುವ ಕಾರಣ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಬ್ರಹ್ಮೋತ್ಸವದ ವೇಳೆ ಇಡೀ ಮೇಲುಕೋಟೆ ದೀಪಾಲಂಕಾರದಿಂದ ಕಂಗೊಳಿಸಲಿದೆ.
ಭಕ್ತರು ಜಿಲ್ಲಾ ಕೇಂದ್ರ ಮಂಡ್ಯ, ಮೈಸೂರು ಸೇರಿದಂತೆ ವಿವಿಧ ನಗರಗಳಿಂದ ಮೇಲುಕೋಟೆ ಉತ್ಸವಗಳಿಗೆ ಬಂದು ಹೋಗಲು ಭಕ್ತರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮ ವಿಶೇಷ ಬಸ್ ಸೌಕರ್ಯ ಕಲ್ಪಿಸಿದೆ.ವೈರಮುಡಿ ಉತ್ಸವವಲ್ಲದೆ ಜಾತ್ರೆಯಲ್ಲಿ ಪ್ರಮುಖ ಮಹೋತ್ಸವಗಳು ನೆರವೇರಲಿವೆ. ಮಾ.24ರ ಸಂಜೆ 5 ರಿಂದ 10 ಗಂಟೆವರೆಗೆ ಕಲ್ಯಾಣೋತ್ಸವ. ಮಾ.25 ರಂದು ಬೆಳಗ್ಗೆ 8 ರಿಂದ 10ರವರೆಗೆ ಗರುಡ ಧ್ವಜಾರೋಹಣ, ಮಾ.26 ರಂದು ಬೆಳಗ್ಗೆ 10 ರಿಂದ 2 ಗಂಟೆವರೆಗೆ ಆರಿದ್ರಾ ಮಾಸ ತಿರುನಕ್ಷತ್ರ ವಿಶೇಷವಾಗಿ ರಾಮಾನುಜಾಚಾರ್ಯರಿಗೆ ಅಭಿಷೇಕ, ಮಾ.27 ರಂದು ಶ್ರೀರಾಮನವಮಿ, ಮಧ್ಯಾಹ್ನ 2 ರಿಂದ 9ರವರೆಗೆ ನಾಗವಲ್ಲಿ ಮಹೋತ್ಸವ ನಡೆಯಲಿದೆ.
ಮಾ.28ರಂದು ವೈರಮುಡಿ ಕಿರೀಟಧಾರಣೆ:ಮಾ.28ರಂದು ಚೆಲುವನಾರಾಯಣಸ್ವಾಮಿ ಅವರ ವಿಶ್ವ ವಿಖ್ಯಾತ ವೈರಮುಡಿ ಕಿರೀಟಧಾರಣ ಮಹೋತ್ಸವ ರಾತ್ರಿ 8 ಗಂಟೆ ವೇಳೆಗೆ ಆರಂಭವಾಗಿ ಬೆಳಗಿನ ಜಾವ 4 ಗಂಟೆಯವರೆಗೆ ಪುಷ್ಯನಕ್ಷತ್ರ ಕೂಡಿದ ಶುಭದಿನ ಮಹಾವಿಷ್ಣುವಿನ ಅನುಗ್ರಹಕ್ಕೆ ಪ್ರಶಸ್ತ ದಿನ ನಡೆಯಲಿದೆ.
ವೈರಮುಡಿ ಉತ್ಸವ ಮುಗಿಯುತ್ತಿದ್ದಂತೆ ಮೈಸೂರು ದೊರೆ ರಾಜ ಒಡೆಯರ್ ಸಮರ್ಪಿಸಿದ ವಜ್ರಖಚಿತ ರಾಜಮುಡಿ ಕಿರೀಟ ಧರಿಸಿ ರಾಜಮುಡಿ ಉತ್ಸವ ನೆರವೇರಿಸಲಾಗುತ್ತದೆ. ಇಡೀ ಭಾರತದ ದೇವಾಲಯಗಳ ಪೈಕಿ ಒಂದೇ ರಾತ್ರಿ ಅಪರೂಪದ ಎರಡು ವಜ್ರದ ಕಿರೀಟಗಳ ಐತಿಹಾಸಿಕ ಉತ್ಸವ ನಡೆಯುವುದು ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವದ ವಿಶೇಷವಾಗಿದೆ.ಮಾ.31ರಂದು ಮಹಾರಥೋತ್ಸವ:
ವೈರಮುಡಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.31 ರಂದು ಚೆಲುವನಾರಾಯಣಸ್ವಾಮಿಯವರ ಮಹಾರಥೋತ್ಸವ ಬೆಳಗ್ಗೆ 7.30ರಿಂದ ರಿಂದ 3ರವರೆಗೆ ನಡೆಯಲಿದೆ. ರಾಮಾನುಜರು ಪ್ರೀತಿಯಿಂದ ಹೆಸರಿಸಿದ ತಿರುಕುಲತ್ತಾರ್, ಹರಿಜನರ ಸೇವೆಯಾದ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವ ರಾತ್ರಿ ನೆರವೇರಲಿದೆ.ಇದಕ್ಕೂ ಮುನ್ನಾದಿನ ಮಾ.30ರ ಸಂಜೆ ಗಜೇಂದ್ರಮೋಕ್ಷ ಉತ್ಸವ, ಏ.1 ರಂದು ರಾತ್ರಿ ಕಲ್ಯಾಣಿಯಲ್ಲಿ ತೆಪ್ಪೋತ್ಸವ, ಏ.2 ರಂದು ಬೆಳಗ್ಗೆ ತೀರ್ಥಸ್ನಾನ, ಸಂಜೆ ಪಟ್ಟಾಭಿಷೇಕ, ಏ.3 ರಂದು ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ, ಏ.4 ರಂದು ಬೆಟ್ಟದೊಡೆಯ ಯೋಗನರಸಿಂಹಸ್ವಾಮಿ ಮತ್ತು ಮಹಾಲಕ್ಷ್ಮೀ ಯದುಗಿರಿ ನಾಯಕಿಗೆ ಮಹಾಭಿಷೇಕ ನೆರವೇರಲಿದೆ.
ವಾಹನೋತ್ಸವಗಳ ವೈಭವ:ವೈರಮುಡಿ ಜಾತ್ರಾಮಹೋತ್ಸವದಲ್ಲಿ ವೈಭವದ ವಾಹನೋತ್ಸವಗಳು ಸಹ ನೆರವೇರಲಿವೆ. ಮಾ.25ರ ಬೆಳಗ್ಗೆ ಮಂಟಪ ವಾಹನೋತ್ಸವ, ರಾತ್ರಿ ಹಂಸ ವಾಹನೋತ್ಸವ, ಮಾ.26 ರಂದು ರಾತ್ರಿ ಶೇಷವಾಹನೋತ್ಸವ, ಮಾ.27 ರಂದು ರಾತ್ರಿ ಚಂದ್ರಮಂಡಲ ವಾಹನೋತ್ಸವ, ಮಾ.29 ರಂದು ರಾತ್ರಿ ಗರುಡ ವಾಹನೋತ್ಸವ, ಮಾ.30ರಂದು ರಾತ್ರಿ ಗಜ ಮತ್ತು ಅಶ್ವವಾಹನೋತ್ಸವ, ಏ.1 ರಾತ್ರಿ ಕುದುರೆ ವಾಹನೋತ್ಸವ, ಏ.2 ರಂದು ಸಂಜೆ ಸಮರ ಭೂಪಾಲ ವಾಹನೋತ್ಸವ, ಏ.3 ರಂದು ರಾತ್ರಿ ಹನುಮಂತ ವಾಹನೋತ್ಸವಗಳು ನಡೆಯಲಿದೆ. ಎಲ್ಲಾ ವಿಶೇಷ ವಾಹನೋತ್ಸವಗಳು ರಾತ್ರಿ 7ಗಂಟೆ ನಂತರ ವಾಹನೋತ್ಸವ ಮಂಟಪದಿಂದ ಆರಂಭವಾಗಲಿದೆ.