ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟದಲ್ಲಿ ಎಲ್ಲ ಸ್ತರಗಳಲ್ಲಿಯೂ ಅರ್ಹತೆಗಳಿದ್ದರೂ ಸಹ ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ನೀಡದಕ್ಕೆ ಎಲ್ಲೆಡೆ ಬೆಟ್ಟದಷ್ಟು ಜನಾಕ್ರೋಶ ಮನೆಮಾಡಿರುವುದನ್ನು ಲೆಕ್ಕಿಸದ ಸರ್ಕಾರ ಹಾಗೂ ಪಕ್ಷದ ಹೈಕಮಾಂಡ್‌ ಸಚಿವ ಡಾ.ಅಜಯ್‌ ಧರ್ಮಸಿಂಗ್‌ ಅವರಿಗೆ ಜಿಲ್ಲಾ ಉಸ್ತುವಾರಿ ಹೊಣೆ ಹೊರೆಸಿದ್ದು, ಈ ಮುಖಾಂತರ 22 ವರ್ಷಗಳ ಹಿಂದೆ ಅಪ್ಪ ನಿಭಾಯಿಸಿದ್ದ ರಾಯಚೂರು ಜಿಲ್ಲಾ ಉಸ್ತುವಾರಿ ಹುದ್ದೆಯ ಜವಾಬ್ದಾರಿ ಮಗನ ಹೆಗಲಿಗೆ ವಾಲಿದಂತಾಗಿದೆ.

* ಜನ ವಿರೋಧವಿದ್ದರೂ ಡಾ.ಅಜಯ ಧರ್ಮಸಿಂಗ್ ಗೆ ಜಿಲ್ಲಾ ಉಸ್ತುವಾರಿ । ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಎಲ್ಲೆಡೆ ಆಕ್ರೋಶ

-----

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟದಲ್ಲಿ ಎಲ್ಲ ಸ್ತರಗಳಲ್ಲಿಯೂ ಅರ್ಹತೆಗಳಿದ್ದರೂ ಸಹ ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ನೀಡದಕ್ಕೆ ಎಲ್ಲೆಡೆ ಬೆಟ್ಟದಷ್ಟು ಜನಾಕ್ರೋಶ ಮನೆಮಾಡಿರುವುದನ್ನು ಲೆಕ್ಕಿಸದ ಸರ್ಕಾರ ಹಾಗೂ ಪಕ್ಷದ ಹೈಕಮಾಂಡ್‌ ಸಚಿವ ಡಾ.ಅಜಯ್‌ ಧರ್ಮಸಿಂಗ್‌ ಅವರಿಗೆ ಜಿಲ್ಲಾ ಉಸ್ತುವಾರಿ ಹೊಣೆ ಹೊರೆಸಿದ್ದು, ಈ ಮುಖಾಂತರ 22 ವರ್ಷಗಳ ಹಿಂದೆ ಅಪ್ಪ ನಿಭಾಯಿಸಿದ್ದ ರಾಯಚೂರು ಜಿಲ್ಲಾ ಉಸ್ತುವಾರಿ ಹುದ್ದೆಯ ಜವಾಬ್ದಾರಿ ಮಗನ ಹೆಗಲಿಗೆ ವಾಲಿದಂತಾಗಿದೆ.

ಕರ್ನಾಟಕ ರಾಜ್ಯದಲ್ಲಿ 1999 ರಿಂದ 2004 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ.ಕೃಷ್ಣ ಅವರ ಸಚಿವ ಸಂಪುಟದಲ್ಲಿ ಧರ್ಮಸಿಂಗ್‌ ಅವರು ಲೋಕೋಪಯೋಗಿ ಸಚಿವರಾಗಿದ್ದರು. ಅದರ ಜತೆಗೆ ರಾಯಚೂರು ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 22 ವರ್ಷಗಳ ನಂತರ ಅವರ ಮಗ ಡಾ.ಅಜಯ್ ಧರ್ಮಸಿಂಗ್‌ ಅವರು ಡಿಕೆಶಿ ಸಚಿವ ಸಂಪುಟದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗುವುದರ ಜತೆಗೆ ರಾಯಚೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

ಜಿಲ್ಲೆ ಜನಪ್ರತಿನಿಧಿಗಳ ವೈಫಲ್ಯ: ಸಚಿವ ಸಂಪುಟ ರಚನೆಯಲ್ಲಿ ಪರಿಗಣನೆಗೆ ಬರುವ ಅನುಭವ, ಜಾತಿ ಹಾಗೂ ಹೈಕಮಾಂಡ್‌ ನಾಯಕರೊಂದಿಗೆ ಉತ್ತಮ ಬಾಂಧವ್ಯ ಸಹಿತ ಎಲ್ಲ ರೀತಿಯಿಂದಲೂ ಅರ್ಹತೆಗಳಿದ್ದರೂ ಜಿಲ್ಲೆಯ ಶಾಸಕರುಗಳು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಇದಕ್ಕೆ ಎಲ್ಲೆಡೆ ತೀವ್ರ ಜನಾಕ್ರೋಶ ವ್ಯಕ್ತವಾಗುತ್ತಿದೆ. ಅದರ ಭಾಗವಾಗಿಯೇ ಸ್ವಾತಂತ್ರ್ಯೋತ್ಸವಕ್ಕೆ ಆಗಮಿಸಿದ್ದ ಉಸ್ತುವಾರಿ ಸಚಿವರ ವಿರುದ್ಧ ಪ್ರಗತಿಪರ ಸಂಘಟನೆಗಳ ಗೋಬ್ಯಾಕ್‌ ಹೋರಾಟ ನಡೆಸಿ ಸರ್ಕಾರ ವಿರುದ್ಧ ಸಿಡಿದೆದ್ದಿದ್ದಾರೆ.

-----ಕೋಟ್---------

ಹಿಂದೆ ತಮ್ಮ ತಂದೆಯ ದಿ.ಧರ್ಮಸಿಂಗ್ 1999 ರಿಂದ 2004ರ ತನಕ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಈಗ ಅದೇ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯವ. ಟೀಕೆಗಳನ್ನು ಸ್ವೀಕರಿಸಿ ಎಲ್ಲರು ಸೇರಿಕೊಂಡು ಒಗ್ಗಟ್ಟಿನಿಂದ ಜಿಲ್ಲೆ ಅಭಿವೃದ್ಧಿಗೆ ಕೆಲಸ ಮಾಡಲಾಗುವುದು.

-ಡಾ.ಅಜಯ್‌ ಧರ್ಮಸಿಂಗ್, ಜಿಲ್ಲಾ ಉಸ್ತುವಾರಿ ಸಚಿವ,

---- ಓಪನ್‌--------

ಸೆ.17 ಕ್ಕೆ ಉಸ್ತುವಾರಿ ಸಚಿವರಿಗೆ ಘೆರಾವ್

ರಾಯಚೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಜಿಲ್ಲೆಗೆ ಸಚಿವ ಸ್ಥಾನ ನೀಡದೇ ವಂಚಿಸಿದೆ. ಇಷ್ಟಾದರು ಚುನಾಯಿತ ಪ್ರತಿನಿಧಿಗಳು ಸ್ವಾಭಿಮಾನ ಕಳೆದುಕೊಂಡು ಮೌನಕ್ಕೆ ಜಾರಿದ್ದು, ಅನ್ಯ ಜಿಲ್ಲೆಯ ಉಸ್ತುವಾರಿ ಸಚಿವರು ನಮಗೆ ಬೇಡವೇ ಬೇಡ. ಇದನ್ನು ಖಂಡಿಸಿ ಸೆ.17 ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಗೆ ಆಗಮಿಸುವ ಉಸ್ತುವಾರಿ ಸಚಿವರಿಗೆ ಘೆರಾವ್ ಹಾಕಲು ತೀರ್ಮಾನಿಸಲಾಗಿದೆ ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ಎಸ್‌.ಮಾರೆಪ್ಪ ಎಚ್ಚರಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಸ್ಥಾನ ಕೈತಪ್ಪಿರುವುದನ್ನು ಖಂಡಿಸಿ, ಬೇರೆ ಜಿಲ್ಲೆಯ ಸಚಿವರು ರಾಷ್ಟ್ರಧ್ವಜಾರೋಹಣ ಮಾಡುವುದನ್ನು ವಿರೋಧಿಸಿ ಸ್ವಾತಂತ್ರೋತ್ಸವಕ್ಕೆ ಆಗಮಿಸಿದ್ದ ಸಚಿವರಿಗೆ ಘೆರಾವ್‌ ಹಾಕಲು ಯತ್ನಿಸಿದ್ದು, ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿರುವುದು ಶೋಚನೀಯ ಸಂಗತಿ ಎಂದು ಅಸಮಾಧಾನ ಹೊರಹಾಕಿದರು.

ಜಿಲ್ಲೆಯ ಯಾವ ಜನಪ್ರತಿನಿಧಿಯೂ ಜಿಲ್ಲೆಗೆ ಆಗಿರುವ ಅನ್ಯಾಯದ ವಿರುದ್ದ ಧ್ವನಿಯೆತ್ತುತ್ತಿಲ್ಲ. ಕಲಬುರಗಿ ದೊರೆಗೆ ಜಿಲ್ಲೆ ಗುಲಾಮಗಿರಿ ರಾಜಕೀಯ ಧ್ವನಿ ಕೇಳಿಸದಂತೆ ತಡೆಯಲಾಗುತ್ತಿದೆ. ಜಿಲ್ಲೆ ಜನಪ್ರತಿನಿಧಿಗಳು ಕೈ ಚಾಚುವ ಮನಸ್ಥಿತಿಯಿಂದ ಹೊರಬರುತ್ತಿಲ್ಲ. ಸಚಿವ ದೊರಕುವವರಗೆ ಹೋರಾಟ ನಿಲ್ಲುವದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರವೀಂದ್ರನಾಥ ಪಟ್ಟಿ, ಎಂ.ಆರ್.ಭೇರಿ, ಅಶೋಕಕುಮಾರ ಜೈನ್ ಬಸವರಾಜ ಭಂಡಾರಿ, ಜೈಭೀಮ, ಶ್ರೀನಿವಾಸ ಕಲವಲದೊಡ್ಡಿ, ಹೇಮರಾಜ ಅಸ್ಕಿಹಾಳ, ಶ್ರೀನಿವಾಸ ಕೊಪ್ಪರ, ನರಸಿಂಹಲು ಇತರರು ಇದ್ದರು.

------------------------------------------

16ಕೆಪಿಆರ್‌ಸಿಆರ್‌ 01: ಧರ್ಮಸಿಂಗ್‌ ಮತ್ತು ಡಾ.ಅಜಯ್‌ ಧರ್ಮಸಿಂಗ್

-------------

16ಕೆಪಿಆರ್‌ಸಿಆರ್ 02: ಎಸ್‌.ಮಾರೆಪ್ಪ