ಕನ್ನಡಪ್ರಭ ವಾರ್ತೆ ಆಲೂರು ಜಗದ ಸಕಲ ಚರಾಚರ ಜೀವಿಗಳು ನೆಮ್ಮದಿಯಿಂದ ಜೀವಿಸಲು ಮುಖ್ಯ ಕಾರಣ ಪ್ರಕೃತಿ. ಮನುಷ್ಯನ ದುರಾಸೆಯಿಂದ ಇಂದು ಪ್ರಕೃತಿ ನಾಶವಾಗುತ್ತಿರುವುದು ದುರಂತ. ಪ್ರಕೃತಿಯ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಆಲೂರು ತಾಲ್ಲೂಕು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ. ಎಂ. ವರದರಾಜು ಅಭಿಪ್ರಾಯಪಟ್ಟರು.ಅವರು ತಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ‘ಇಕೋ ಕ್ಲಬ್’ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಪ್ರಕೃತಿ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತಲೂ ನಾವು ಪ್ರಕೃತಿಗಾಗಿ ಏನು ಕೊಟ್ಟಿದ್ದೇವೆ ಎನ್ನುವುದು ಬಹಳ ಮುಖ್ಯ. ಪರಿಸರ ದಿನಾಚರಣೆ ಕೇವಲ ಶಾಲೆ ಕಾಲೇಜುಗಳಿಗೆ ಮಾತ್ರ ಸೀಮಿತವಾಗದೇ ಪ್ರತಿಯೊಬ್ಬ ನಾಗರೀಕನ ಕರ್ತವ್ಯವೂ ಆಗಬೇಕು. ಪರಿಸರ ದಿನಾಚರಣೆ ಕೇವಲ ವೇದಿಕೆಯ ಭಾಷಣಕ್ಕೆ ಸೀಮಿತವಾಗದೇ ಕೃತಿಯಲ್ಲಿ ತರಬೇಕು ಅಂದಾಗ ಮಾತ್ರ ಪರಿಸರ ಕಾಳಜಿ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಕೊಟ್ರೇಶ್ ಎಸ್. ಉಪ್ಪಾರ್‌, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ವಿ. ರವಿತ, ಶಿಕ್ಷಕಿ ಎ. ಎಸ್. ರೇಖಾ ಸೇರಿದಂತೆ ಮಕ್ಕಳು ಹಾಜರಿದ್ದರು.