ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು ; ರಾಜಧಾನಿ ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದ ಪ್ರಕರಣಗಳ ಪೈಕಿ ಶೇಕಡ 80ರಷ್ಟು ಇಂದಿಗೂ ಸಹ ಸರ್ವೇ ಹಂತದಲ್ಲಿಯೇ ಉಳಿದಿವೆ.
ನಗರದಲ್ಲಿ ಮಳೆ ಬಂದು ರಾಜಕಾಲುವೆ ನೀರು ಉಕ್ಕಿ ಬಡಾವಣೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿ ಜನರ ಬದುಕನ್ನು ಮೂರಾಬಟ್ಟೆ ಮಾಡಿದಾಗ ಬಿಬಿಎಂಪಿಯ ಅಧಿಕಾರಿಗಳು ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಬಹುತೇಕ ಪ್ರಕರಣಗಳು ನ್ಯಾಯಾಲಯದ ಹಂತದಲ್ಲಿ ಇವೆ. ಹೀಗಾಗಿ, ರಾಜಕಾಲುವೆ ಒತ್ತುವರಿ ತೆರವುಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಸಮಸ್ಯೆ ಉಂಟಾಗುತ್ತಿದೆ ಎನ್ನುವ ಸಿದ್ಧ ಉತ್ತರವನ್ನು ಹಲವಾರು ವರ್ಷದಿಂದ ಹೇಳಿಕೊಂಡು ಬರುತ್ತಿದ್ದಾರೆ.
ಬಿಬಿಎಂಪಿಯ ದಾಖಲೆಗಳ ಪ್ರಕಾರವೇ ನಗರದಲ್ಲಿ ಈವರೆಗೆ ಒಟ್ಟು 1,712 ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಗುರುತಿಸಲಾಗಿದೆ. ಈ ಪೈಕಿ ಬರೋಬ್ಬರಿ 1,348 ಪ್ರಕರಣಗಳು ಸರ್ವೇ ಹಾಗೂ ವಿಚಾರಣೆ ಹಂತದಲ್ಲಿಯೇ ಉಳಿದುಕೊಂಡಿವೆ.
ಕೇವಲ 196 ಪ್ರಕರಣದಲ್ಲಿ ವ್ಯಾಜ್ಯ:
ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆಗೆ ಸಂಬಂಧಿಸಿದಂತೆ ಗುರುತಿಸಲಾದ ಪ್ರಕರಣಗಳಲ್ಲಿ ಕೇವಲ 196 ಪ್ರಕರಣಗಳು ನ್ಯಾಯಾಲಯದಲ್ಲಿ ಇವೆ. ಈ ಪೈಕಿ 161 ಪ್ರಕರಣಗಳಿಗೆ ಮಾತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಉಳಿದ 36 ಪ್ರಕರಣಗಳು ಭೂ ಕಬಳಿಕೆಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯದಲ್ಲಿ ಇವೆ.
167 ತೆರವಿಗೆ ಆದೇಶ:
ಉಳಿದಂತೆ ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಂಡು ವಿಚಾರಣೆ ಅಂತಿಮಗೊಂಡು, ರಾಜಕಾಲುವೆ ಒತ್ತುವರಿ ಆಗಿರುವುದು 167 ಪ್ರಕರಣಗಳಲ್ಲಿ ದೃಢಪಟ್ಟಿವೆ. ಈ ಕುರಿತು ಈಗಾಗಲೇ ತೆರವುಗೊಳಿಸುವುದಕ್ಕೆ ಆದೇಶ ನೀಡಲಾಗಿದೆ. ಆದರೆ, ಇನ್ನೂ ತೆರವು ಕಾರ್ಯ ಮಾಡಿಲ್ಲ.ವರ್ಷದಲ್ಲಿ 234 ಕಡೆ ಒತ್ತುವರಿ
ಬಿಬಿಎಂಪಿಯು ಕಳೆದ 2023ರ ಆಗಸ್ಟ್ವರೆಗೆ 1,134 ಕಡೆ ಹೊಸದಾಗಿ ಒತ್ತುವರಿ ಆಗಿದೆ ಎಂದು ಗುರುತಿಳಿಸಿತ್ತು. ಆ ನಂತರ ಕಳೆದ ಒಂದು ವರ್ಷದ ಅವಧಿಯಲ್ಲಿ ಮತ್ತೆ 234 ಕಡೆ ರಾಜಕಾಲುವೆ ಒತ್ತುವರಿ ಮಾಡಲಾಗಿದೆ ಎಂದು ಇದೀಗ ಗುರುತಿಸಲಾಗಿದೆ. ಈ ಪೈಕಿ ಅತೀ ಹೆಚ್ಚು ದಾಸರಹಳ್ಳಿಯಲ್ಲಿ 159 ಕಡೆ ಒತ್ತುವರಿ ಮಾಡಲಾಗಿದೆ. ಪಶ್ಚಿಮ ವಲಯದಲ್ಲಿ 53 ಕಡೆ, ಯಲಹಂಕದಲ್ಲಿ 10 ಕಡೆ, ಕೋರಮಂಗಲದಲ್ಲಿ 9 ಕಡೆ ಹಾಗೂ ಪೂರ್ವ ವಲಯದಲ್ಲಿ 3 ಕಡೆ ಒತ್ತುವರಿ ಆಗಿದೆ.
ಶೇ.50 ಕಡೆ ಖಾಸಗಿ ಜಾಗದಲ್ಲಿ ರಾಜಕಾಲುವೆ
ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದ್ದಂತೆ ಗುರುತಿಸಲಾದ ಪ್ರಕರಣಗಳಲ್ಲಿ ಶೇ.50 ರಷ್ಟು ರಾಜಕಾಲುವೆ ಒತ್ತುವರಿ ಆಗಿಲ್ಲ ಎಂದು ತಹಸೀಲ್ದಾರ್ಗಳು ಹೇಳುತ್ತಿದ್ದಾರೆ. ಜತೆಗೆ, ಪ್ರಸ್ತುತ ಹರಿಯುತ್ತಿರುವ ರಾಜಕಾಲುವೆಯು ಕಂದಾಯ ಇಲಾಖೆಯ ದಾಖಲೆಗಳು ಇರುವಂತೆ ಹರಿಯುತ್ತಿಲ್ಲ. ಖಾಸಗಿ ಜಾಗದಲ್ಲಿ ಹರಿಯುತ್ತಿದೆ.
ಕಂದಾಯ ಇಲಾಖೆಯ ದಾಖಲೆಗಳಲ್ಲಿ ಇರುವ ರಾಜಕಾಲುವೆ ಮಾರ್ಗದಲ್ಲಿ ಕಟ್ಟಡ, ನಿವೇಶಗಳ ಸೃಷ್ಟಿಯಾಗಿವೆ ಎಂದು ತಹಸೀಲ್ದಾರ್ ಹೇಳುತ್ತಿದ್ದಾರೆ. ಈ ಕುರಿತು ವರದಿ ನೀಡುವಂತೆ ನಗರ ಜಿಲ್ಲಾಡಳಿತ ವಿಶೇಷ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಬಿಬಿಎಂಪಿ ತುಷಾರ್ ಗಿರಿನಾಥ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಗುರುತಿಸಲಾದ 1,712 ಪ್ರಕರಣಗಳಲ್ಲಿ 200ರಿಂದ 300 ಕಡೆ ಖಾಲಿ ನಿವೇಶನ ಇದ್ದ ಕಾರಣ ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದ ಶೇ.50ರಷ್ಟು ಪ್ರಕರಣದಲ್ಲಿ ಒತ್ತುವರಿಯೇ ಇಲ್ಲ ಎಂದು ತಹಸೀಲ್ದಾರ್ ಹೇಳುತ್ತಿದ್ದು, ಉಳಿದಂತೆ ಸುಮಾರು 800 ಕಡೆ ಒತ್ತುವರಿ ತೆರವುಗೊಳಿಸಬೇಕಾಗಿದೆ.
-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿ.ರಾಜಕಾಲುವೆ ಒತ್ತುವರಿ ವಿವರ
ವಲಯಒತ್ತುವರಿ ಸಂಖ್ಯೆತೆರವು ಆದೇಶ ಸಂಖ್ಯೆ
ಪೂರ್ವ12313
ಪಶ್ಚಿಮ460
ದಕ್ಷಿಣ460
ಕೋರಮಂಗಲ ಕಣಿವೆ1040
ಯಲಹಂಕ35955
ಮಹದೇವಪುರ49216
ಬೊಮ್ಮನಹಳ್ಳಿ20125
ಆರ್.ಆರ್.ನಗರ10413
ದಾಸರಹಳ್ಳಿ20745
ಒಟ್ಟು1,712167