ಶಿವಮೊಗ್ಗದ ನಗರದ ಶಿವಪ್ಪ ನಾಯಕ ಪ್ರತಿಮೆ ಬಳಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಎಸ್‌ಆರ್‌ಐ ಜಾಗೃತಿ ಕುರಿತು ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಮಧು ಬಂಗಾರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದೇಶದ ಪ್ರತಿಯೊಬ್ಬ ಪ್ರಜೆಯೂ ಇಲ್ಲಿ ಮತದಾನದ ಹಕ್ಕು ಪಡೆದಿರುವುದು ಬಿಜೆಪಿ ಸರ್ಕಾರದಿಂದ ಅಲ್ಲ, ಅದು ಸಿಕ್ಕಿದ್ದು ಸಂವಿಧಾನದ ಮೂಲಕ ಎಂದು ಮಾಜಿ ಸಚಿವ ಹಾಗೂ ಶಾಸಕ ಮಧು ಬಂಗಾರಪ್ಪ ಕಿಡಿಕಾರಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಶಿವಪ್ಪ ನಾಯಕ ಪ್ರತಿಮೆ ಬಳಿ ಸೋಮವಾರ ಎಸ್‌ಆರ್‌ಐ ಜಾಗೃತಿ ಕುರಿತು ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ನಮಗೆ ಸಂವಿಧಾನವೇ ದೇವರು .ಆಮೂಲಕ ವೇ ನಾವು ನಮ್ಮ ಹಕ್ಕನ್ನು ಉಳಿಸಿಕೊಳ್ಳಬೇಕಿದೆ. ಕೇಂದ್ರದ ಬಿಜೆಪಿ ಸರ್ಕಾರದ ದುರುದ್ದೇಶವನ್ನು ಆ ಮೂಲಕವೇ ತಡೆಯಬೇಕಿದೆ ಎಂದರು.

ನಾಳೆಯಿಂದಲೇ ನಾವು ನಮ್ಮ ಕರ್ತವ್ಯಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಸಂವಿಧಾನ ಪ್ರಕಾರ ನಾವು ಏನ್ ಮಾಡಬೇಕೋ ಅದನ್ನು ಮಾಡೋಣ, ಎಲ್ಲದ್ದಕ್ಕೂ ಉತ್ತರ ಇರುತ್ತದೆ. ನಿವಾಸಿ ದೃಢೀಕರಣ ಸಮಸ್ಯೆಇದ್ದಲ್ಲಿ ನಾವೇ ಮುಂದೆ ನಿಂತು ಮಾಡಿಸೋಣ, ಒಟ್ಟಾರೆ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಇರುವಂತೆ ನೋಡಿ ಕೊಳ್ಳೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಗೆ ಕೇಂದ್ರ ಸರ್ಕಾರವು ಒಂದು ತಿಂಗಳ ಕಾಲ ಮಿತಿ ನಿಗದಿ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಎಸ್‌ಆರ್‌ಐ ಎನ್ನುವುದು ಪ್ರಜಾ ಪ್ರಭುತ್ವದ ವಿರೋಧಿ. ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಎಸ್‌ಐಆರ್ ಪ್ರಕ್ರಿಯೆಯನ್ನು ತಾರಾತುರಿಯಲ್ಲಿ ಮಾಡಲು ಹೊರಟಿದ್ದಾರೆ. ಹಾಗಾಗಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಇನ್ನಷ್ಟು ದಿನಗಳ ಕಾಲ ವಿಸ್ತರಣೆ ಮಾಡಬೇಕೆನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ಕೇಂದ್ರ ಸರ್ಕಾರವು ಸಂವಿಧಾನದ ಹಕ್ಕನ್ನು ಕಿತ್ತುಕೊಳ್ಳುವ ಸಂಚು ನಡೆಸಿದೆ. ಪ್ರತಿಯೊಬ್ಬ ಪ್ರಜೆಗೂ ಈ ಸಂಚು ಗೊತ್ತಾಗಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಎಸ್‌ಐಆರ್ ಬಗ್ಗೆ ಜಾಗೃತಿ ಮೂಡಿಸಿ ಮಾಹಿತಿ ನೀಡಬೇಕಿದೆ. ಯಾವುದೇ ಕಾರಣಕ್ಕೂ ಯಾರ ಮತವೂ ಕಡಿತವಾಗದಂತೆ, ಅರ್ಹರಾದ ಯಾರು ಕೂಡ ಮತದಾರರ ಪಟ್ಟಿಯಿಂದ ಹೊರ ಗುಳಿಯದಂತೆ ನೋಡಿಕೊಳ್ಳಬೇಕಿದೆ ಎಂದರು.

ಎಸ್‌ಐಆರ್‌ಗೆ ಪಾಸ್ ಪೋರ್ಟ್ ಕಡ್ಡಾಯ ಎಂದು ಹೇಳಿಕೆ ನೀಡಿದ್ದ ಕೇಂದ್ತ ಸಚಿವರೊಬ್ಬರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಅವರು, ಆದಾರ್ ಕಾರ್ಡ್ ಕಡ್ಡಾಯ ಎಂದು ಹೇಳಿ ಈಗ ಆದಾರ್ ಗುರುತಿನ ಚೀಟಿ ಅಲ್ಲ ಎಂದು ಹೇಳುತ್ತಿರುವ ವ್ಯವಸ್ಥೆಯೊಳಗೆ ದಾಖಲಾತಿಗಳನ್ನು ಹುಡುಕುವುದು ಹೇಗೆ ಎಂದು ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಮುಖಂಡರಾದ ಆಯನೂರು ಮಂಜುನಾಥ್, ಎನ್. ರಮೇಶ್, ಹೆಚ್. ಎಸ್ ಸುಂದರೇಶ್, ಎಚ್.ಸಿ. ಯೋಗೇಶ್, ಕಲಗೋಡು ರತ್ನಾಕರ್, ಬಿ.ಎಸ್. ಗಣೇಶ್, ಇಸ್ಮಾಯಿಲ್ ಖಾನ್, ಜಿ. ಪಲ್ಲವಿ, ಎಂ. ಶ್ರೀಕಾಂತ್, ಜವಳಿ ನಿಗಮದ ಅಧ್ಯಕ್ಷ ಚೇತನ್ ಕೆ.ಗೌಡಮಾತನಾಡಿ, ಕೇಂದ್ರದ ದುರುದ್ದೇಶ ಪೂರ್ವಕ ಎಸ್‌ಐಆರ್ ಬಗ್ಗೆ ಜಾಗೃತಿ ಅಗತ್ಯವಿದೆ. ಆ ನಿಟ್ಟಿನಲ್ಲಿಯೇ ಪಕ್ಷದ ಕಾರ್ಯಕರ್ತರು ಮತದಾರರಿಗೆ ಸರಿಯಾದ ಮಾಹಿತಿನೀಡಿ ಮತದಾನದ ಹಕ್ಕು ಪಡೆಯುವಂತೆ ಮಾಡಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಟಿ. ಚಂದ್ರಶೇಖರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ವೇತಾ ಬಂಡಿ, ಮುಖಂಡರಾದ ಎಸ್.ಪಿ. ಶೇಷಾದ್ರಿ, ಎಸ್.ರವಿಕುಮಾರ್, ಕೆಂಚೇನಹಳ್ಳಿ ಕುಮಾರ್, ವೇದಾ ವಿಜಯ್ ಕುಮಾರ್, ನಯಾಜ್ ಅಹಮದ್, ಶ್ರೀನಿವಾಸ್ ಕರಿಯಣ್ಣ, ಶರತ್ ಮರಿಯಪ್ಪ, ಆರ್.ರಾಜಶೇಖರ್ ಮತ್ತಿತರರು ಇದ್ದರು.