ಸಾರಾಂಶ
ಗುಂಡ್ಲುಪೇಟೆ ಪಟ್ಟಣದ ಶ್ವೇತಾದ್ರೀ ಬಡಾವಣೆ ಸುತ್ತಲೂ ಕಬಿನಿ ಕುಡಿಯುವ ನೀರಿನ ಎಕ್ಸ್ಪ್ರೆಸ್ ಲೈನ್ ಹೂಳಲು ರಸ್ತೆ ಅಗೆದು ಅಲ್ಲಿಯೆ ಮಣ್ಣು ಬಿಟ್ಟು ಹೋದ ಕಾರಣ ಮಳೆಗೆ ಬಡಾವಣೆ ಕೆಸರು ಮಯವಾಗಿ ನಿವಾಸಿಗಳಿಗೆ ತೊಂದರೆಯಾಗಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಶ್ವೇತಾದ್ರೀ ಬಡಾವಣೆ ಸುತ್ತಲೂ ಕಬಿನಿ ಕುಡಿಯುವ ನೀರಿನ ಎಕ್ಸ್ಪ್ರೆಸ್ ಲೈನ್ ಹೂಳಲು ರಸ್ತೆ ಅಗೆದು ಅಲ್ಲಿಯೆ ಮಣ್ಣು ಬಿಟ್ಟು ಹೋದ ಕಾರಣ ಮಳೆಗೆ ಬಡಾವಣೆ ಕೆಸರು ಮಯವಾಗಿ ನಿವಾಸಿಗಳಿಗೆ ತೊಂದರೆಯಾಗಿದೆ.ಪೈಪ್ ಹೂಳಲು ರಸ್ತೆ ಅಗೆದು ಬಳಿಕ ರಸ್ತೆಯ ಮೇಲೆಲ್ಲ ಮಣ್ಣು ಬಿದ್ದಿದೆ. ಮಳೆಗೆ ಬಡಾವಣೆ ಕೆಸರು ಮಯವಾದ ಕಾರಣದಿಂದ ಕಾರು, ಬೈಕ್, ಸೈಕಲ್ ಹಾಗೂ ಪಾದಚಾರಿಗಳ ಪಾಡು ಹೇಳತೀರದಾಗಿದೆ. ಶಾಲೆ ಹೋಗುವ ಮಕ್ಕಳಿಗೆ ತೀರ ತೊಂದರೆಯಾಗಿದೆ. ಅಲ್ಲದೆ ವೃದ್ಧರು, ರೋಗಿಗಳು ರಸ್ತೆಯಲ್ಲಿ ಸಂಚರಿಸಲು ಆಗುತ್ತಿಲ್ಲ. ಪುರಸಭೆ ಇತ್ತ ಗಮನಹರಿಸದೆ ಜಾಣ ಮೌನ ವಹಿಸಿದೆ ಎಂದು ಬಡಾವಣೆಯ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ.ಶ್ವೇತಾದ್ರಿ ಗಿರಿ ಬಡಾವಣೆಯ ನಿವಾಸಿಯೊಬ್ಬರು ಕನ್ನಡಪ್ರಭದೊಂದಿಗೆ ಮಾತನಾಡಿ, ಕಬಿನಿ ಕುಡಿಯುವ ನೀರಿನ ಪೈಪ್ ಲೈನ್ಗಾಗಿ ರಸ್ತೆ ಅಗೆದು ಬಿಟ್ಟು ಹೋಗಿದ್ದಾರೆ. ರಸ್ತೆಯ ಅಭಿವೃದ್ಧಿ ಪಡಿಸಿಲ್ಲ. ಮಳೆಯ ಕಾರಣ ರಸ್ತೆಯೆಲ್ಲ ಕೆಸರಾಗಿದೆ ಎಂದರು.
ಶಾಸಕರು ಹಾಗೂ ಪುರಸಭೆ ಅಧಿಕಾರಿಗಳು ಬಡಾವಣೆಯಲ್ಲಿ ಆದ ಈ ಸಮಸ್ಯೆಗೆ ಪರಿಹಾರ ನೀಡುವ ಮೂಲಕ ಜನರು ನೆಮ್ಮದಿಯಾಗಿ ಸಂಚರಿಸಲು ಹೋಗಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದ್ದಾರೆ. ಶ್ವೇತಾದ್ರಿ ಗಿರಿ ಬಡಾವಣೆ, ಜಾಕೀರ್ ಹುಸೇನ್ ನಗರ, ಆಸ್ಪತ್ರೆ ಬಡಾವಣೆಯಲ್ಲಿ ಕಬಿನಿ ಕುಡಿಯುವ ನೀರಿನ ಎಕ್ಸ್ಪ್ರೆಸ್ ಲೈನ್ ಕಾಮಗಾರಿಗಾಗಿ ರಸ್ತೆ ಅಗೆದು ಬಿಟ್ಟಿದ್ದಾರೆ. ಆದರೆ ಮಣ್ಣು ಹೊರ ಹಾಕಿಲ್ಲ. ರಸ್ತೆಯನ್ನೆಲ್ಲ ಕೆಸರು ಮಯ ಮಾಡಿ ಬಿಟ್ಟು ಹೋಗಿದ್ದಾರೆ.-ಹೀನಾ ಕೌಶರ್, ಪುರಸಭೆ ಸದಸ್ಯೆ