ಸಾರಾಂಶ
ಕನಕಪುರ: ಗ್ರಾಮ ಪಂಚಾಯಿತಿ ಪ್ರಗತಿಯಲ್ಲಿ ಗಣಕಯಂತ್ರ ನಿರ್ವಾಹಕರ(ಕಂಪ್ಯೂಟರ್ ಆಪರೇಟರ್) ಪಾತ್ರ ಮಹತ್ವದ್ದು ಎಂದು ತಾಪಂ ಸಹಾಯಕ ನಿರ್ದೇಶಕ ಮೋಹನ್ ಬಾಬು ತಿಳಿಸಿದರು. ನಗರದ ರೋಟರಿ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಪ್ರಥಮ ಬಾರಿಗೆ ಆಚರಿಸಿದ ಗಣಕಯಂತ್ರ ನಿರ್ವಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಬೇಕಾದರೆ ಹೆಚ್ಚಿನ ಜ್ಞಾನ ಮತ್ತು ಸಾಮರ್ಥ್ಯ ಹೊಂದಿರಬೇಕು. ಆಗಾಗ ಆಗುವ ಬದಲಾವಣೆಗೆ ತಕ್ಕಂತೆ ಹೆಚ್ಚಿನ ಕೌಶಲ್ಯದ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಪಂಚಾಯಿತಿ ಕೇಂದ್ರ ಬಿಂದು ಆಗಿರುವ ಕಂಪ್ಯೂಟರ್ ಆಪರೇಟರ್ಗಳಿಗೆ ಹೆಚ್ಚಿನ ಕೆಲಸದ ಒತ್ತಡವಿದೆ. ಒತ್ತಡದ ನಡುವೆಯೇ ನೀವು ಉತ್ತಮವಾಗಿ ಕೆಲಸ ಮಾಡುತ್ತಿದ್ದೀರಿ. ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದರು.ತಾಲೂಕಿನ ಎಲ್ಲಾ ಗ್ರಾಪಂಗಳ ಕಂಪ್ಯೂಟರ್ ಆಪರೇಟರ್ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆಲಸಕ್ಕೆ ಸಮಾನವಾದ ವೇತನ ಸಿಗುತ್ತಿಲ್ಲ, ಹತ್ತಾರು ವರ್ಷಗಳಿಂದ ಇದೇ ಕೆಲಸವನ್ನು ನಂಬಿ ಜೀವನ ದೂಡುತ್ತಿದ್ದೇವೆ, ಸೇವಾ ಭದ್ರತೆ ಒಲ್ಲ ಎಂದು ತಮಗಿರುವ ಸಮಸ್ಯೆಗಳನ್ನು ಸಭೆಯಲ್ಲಿ ಹೇಳಿಕೊಂಡರು.
ಕಂಪ್ಯೂಟರ್ ಆಪರಚ್ರ್ರ್ ಗಳಿಗೆ ಸೇವಾ ಭದ್ರತೆ ಜೊತೆಗೆ ವಿಮಾ ಸೌಲಭ್ಯವಿಲ್ಲ, ಖಾಸಗಿ ಕಂಪನಿಗಳಲ್ಲಿ ಪಿಎಫ್, ಇಎಸ್ಐ ವ್ಯವಸ್ಥೆ ಇರುತ್ತದೆ. ಆದರೆ ಪಂಚಾಯಿತಿಗಳಲ್ಲಿ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಕಂಪ್ಯೂಟರ್ ಆಪರೇಟರ್ಗಳಿಗೆ ಇಂತಹ ವ್ಯವಸ್ಥೆ ಇಲ್ಲ. ಸರ್ಕಾರ ತಮ್ಮನ್ನು ಕಾಯಂ ನೌಕರರಾಗಿ ಪರಿಗಣಿಸಿ ಎಲ್ಲಾ ಸವಲತ್ತುಗಳನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.ಕನಕಪುರ ತಾಲೂಕು ಗಣಕಯಂತ್ರ ನಿರ್ವಾಹಕರ ಸಂಘದ ಅಧ್ಯಕ್ಷೆ ಮೈತ್ರಿ, ಉಪಾಧ್ಯಕ್ಷ ತಿಮ್ಮಪ್ಪ, ಖಜಾಂಚಿ ಯಶಸ್ವಿನಿ ಕಾರ್ಯದರ್ಶಿ ಸ್ವಾಮಿ, ಮುತ್ತುರಾಜು, ಗೀತಾ, ಶೋಭಾ, ನಂದಿನಿ ಇತರರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 01:ಕನಕಪುರದಲ್ಲಿ ಗಣಕಯಂತ್ರ ನಿರ್ವಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗಣಕಯಂತ್ರ ನಿರ್ವಾಹಕರನ್ನು ಸನ್ಮಾನಿಸಲಾಯಿತು.