ಕನ್ನಡಪ್ರಭ ವಾರ್ತೆ ಬೆಳಗಾವಿ ಪೊಲೀಸ್ ಮತ್ತು ರಕ್ಷಣಾ ಪಡೆಗಳಲ್ಲಿ ಶ್ವಾನದಳ ಹಾಗೂ ವಿಧ್ವಂಸಕ ಕೃತ್ಯ ತಪಾಸಣಾ ತಂಡ ಮತ್ತು ವಿಲೇವಾರಿ ದಳ ಅತ್ಯಂತ ಪ್ರಮುಖ ಘಟಕಗಳಾಗಿವೆ. ಇವುಗಳ ಕಾರ್ಯದಿಂದ ಅನೇಕ ಆಪತ್ತುಗಳನ್ನು ತಪ್ಪಿಸಲು ಸಾಧ್ಯವಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯದ ಉಪ ಮೀಸಲು ಪೊಲೀಸ್ ನಿರೀಕ್ಷಕರಾದ ವಿಠ್ಠಲ ಗೊರಬಾಲ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಪೊಲೀಸ್ ಮತ್ತು ರಕ್ಷಣಾ ಪಡೆಗಳಲ್ಲಿ ಶ್ವಾನದಳ ಹಾಗೂ ವಿಧ್ವಂಸಕ ಕೃತ್ಯ ತಪಾಸಣಾ ತಂಡ ಮತ್ತು ವಿಲೇವಾರಿ ದಳ ಅತ್ಯಂತ ಪ್ರಮುಖ ಘಟಕಗಳಾಗಿವೆ. ಇವುಗಳ ಕಾರ್ಯದಿಂದ ಅನೇಕ ಆಪತ್ತುಗಳನ್ನು ತಪ್ಪಿಸಲು ಸಾಧ್ಯವಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯದ ಉಪ ಮೀಸಲು ಪೊಲೀಸ್ ನಿರೀಕ್ಷಕರಾದ ವಿಠ್ಠಲ ಗೊರಬಾಲ ಹೇಳಿದರು.ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ವಿಭಾಗದಿಂದ ಡಾಗ್ ಸ್ಕ್ವಾಡ್ ಮತ್ತು ಬಾಂಬ್ ಸ್ಕ್ವಾಡ್ ಕಾರ್ಯವಿಧಾನದ ಕುರಿತು ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶ್ವಾನದಳದಲ್ಲಿ ಸಾಮಾನ್ಯವಾಗಿ ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್, ಬೆಲ್ಜಿಯಂ ಮಾಲಿನೋಯಿಸ್ ಮತ್ತು ಮುಧೋಳ ಹೌಂಡ್ ತಳಿಯ ಶ್ವಾನಗಳನ್ನು ಬಳಸಲಾಗುತ್ತದೆ. ಇವುಗಳು ವಾಸನೆ ಗ್ರಹಿಸುವ ಅದ್ಭುತ ಸಾಮರ್ಥ್ಯ ಹೊಂದಿರುವುದರಿಂದ ವಿಶೇಷ ತರಬೇತಿ ನೀಡಿ ಅಪರಾಧ ತನಿಖೆಗಳಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.ಪೊಲೀಸ್ ಆಯುಕ್ತರ ಕಚೇರಿಯ ನಗರ ಮೀಸಲು ಪಡೆಯಿಂದ ಬಂದ ಡಾಗ್ ಸ್ಕ್ವಾಡ್ ತಂಡದಲ್ಲಿ ಹವಾಲ್ದಾರರಾದ ಸಂಜು ಅರಗಂಜಿ, ಲಕ್ಷ್ಮಣ ಕಟಬುಗೊಳ ಮತ್ತು ವೆಂಕಟೇಶ್ ಯಡಹಳ್ಳಿ ಹಾಗೂ ಆರಕ್ಷಕರಾದ ಸಂತೋಷ್ ಪಾಟೀಲ್ ಮತ್ತು ಮಂಜುನಾಥ ಹಂಚಿನಮನಿ ಇದ್ದರು. ಪ್ರದರ್ಶನದಲ್ಲಿ ಲುಸಿ ಮತ್ತು ರೋಸಿ ಎಂಬ ಎರಡು ಶ್ವಾನಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಡಾಗ್ ಸ್ಕ್ವಾಡ್ ತಂಡ ಅಪರಾಧಿಗಳನ್ನು ಪತ್ತೆಹಚ್ಚುವುದು, ನಿಷೇಧಿತ ವಸ್ತುಗಳನ್ನು ಹುಡುಕುವುದು, ಸ್ಫೋಟಕ ವಸ್ತುಗಳನ್ನು ಗುರುತಿಸುವುದು ಹಾಗೂ ಅಪರಾಧ ಸ್ಥಳದಲ್ಲಿ ಸಾಕ್ಷ್ಯಗಳನ್ನು ಪತ್ತೆ ಮಾಡುವುದು ಮುಂತಾದ ಕಾರ್ಯಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶಿಸಿದರು.
ಕಾಲೇಜಿನ ಉಪ ಪ್ರಾಚಾರ್ಯ ಪ್ರೊ.ಅರ್ಜುನ ಜಂಬಗಿ ಮಾತನಾಡಿ, ಇಂದಿನ ಕಾಲದಲ್ಲಿ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದ್ದರೂ ಅಪರಾಧ ತನಿಖೆಯಲ್ಲಿ ಡಾಗ್ ಸ್ಕ್ವಾಡ್ ಮತ್ತು ಬಾಂಬ್ ಸ್ಕ್ವಾಡ್ ಪ್ರಮುಖ ಪಾತ್ರ ವಹಿಸುತ್ತಿವೆ. ಸಮಾಜದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡಲು ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದ್ದು, ಶ್ವಾನದಳವು ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಮತ್ತು ಸಾಕ್ಷ್ಯ ಸಂಗ್ರಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಶ್ಲಾಘಿಸಿದರು.ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಚಿದಾನಂದ ಹಾರೂಗೇರಿ ಮಾತನಾಡಿ, ಡಾಗ್ ಸ್ಕ್ವಾಡ್ ಮತ್ತು ಬಾಂಬ್ ಸ್ಕ್ವಾಡ್ ತಂಡದ ಈ ಭೇಟಿ ವಿದ್ಯಾರ್ಥಿಗಳಿಗೆ ಅಪರಾಧ ತನಿಖೆಯ ಪ್ರಾಯೋಗಿಕ ಅರಿವು ಹಾಗೂ ಪ್ರೇರಣೆ ನೀಡಲಿದೆ ಎಂದು ಹೇಳಿದರು.ಉಪನ್ಯಾಸಕ ಯೋಗೇಶ್ ಕಾಂಬ್ಳೆ ವಂದಿಸಿದರು. ಉಪನ್ಯಾಸಕಿ ಸಹಾನಾ ನರಗುಂದ ನಿರೂಪಿಸಿದರು. ವಾಣಿಜ್ಯಶಾಸ್ತ್ರದ ವಿಭಾಗದ ಮುಖ್ಯಸ್ಥ ಡಾ.ಮುಕುಂದ ಮುಂಡರಗಿ, ವಿಭಾಗದ ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.