ಹಾವೇರಿ:ಕಲಿಕೆಗೆ ಅಂತ್ಯವಿಲ್ಲ, ಅದು ನಿರಂತರವಾಗಿರುತ್ತದೆ. ಜೀವನದ ಸಾರ್ಥಕತೆಗೆ ಶಿಕ್ಷಣ ಬಹಳ ಮಹತ್ವದ ಪಾತ್ರವಹಿಸುತ್ತದೆ ಎಂದು ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ಚಂದ್ ಗೆಹಲೋತ್ ಹೇಳಿದರು.ನಗರದ ಜಿಎಚ್ ಕಾಲೇಜು ಸಭಾಂಗಣದಲ್ಲಿ ಸೋಮವಾರ ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ಗೌರವ ಡಾಕ್ಟರೆಟ್, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.ನಿಮ್ಮ ಪರಿಶ್ರಮದ ಫಲವಾಗಿ ಇಂದು ನೀವು ಪದಕ ಪಡೆದಿದ್ದೀರಿ. ಜ್ಞಾನಮಂದಿರದಿಂದ ಕರ್ಮ ಕ್ಷೇತ್ರ ಪ್ರವೇಶ ಮಾಡುತ್ತೀದ್ದೀರಿ. ನಿಮ್ಮ ಕನಸು ಹಾಗೂ ಗುರಿ ದೊಡ್ಡದಿರಲಿ. ನಿರಂತರ ಶ್ರಮದಿಂದ ಗುರಿ ತಲುಪಲು ಸಾಧ್ಯ. ಶಿಕ್ಷಣ ಉದ್ಯೋಗ ಹುಡುಕಲು ಅಲ್ಲ, ಉದ್ಯೋಗ ಸೃಷ್ಟಿಯಾಗಲಿ. ನೀವು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಯ, ವಿಧೇಯತೇ ಇರಲಿ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಕ್ರಾಂತಿ ನಮ್ಮ ಜೀವನ ಶೈಲಿ ಬದಲು ಮಾಡಿದೆ. ವಿಕಸಿತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಹೇಳಿದರು.ಕರ್ನಾಟಕದ ಭೂಮಿ ಪರಂಪರೆ ಮತ್ತು ಜ್ಞಾನದ ಸಮೃದ್ಧಿಯಾಗಿದೆ. ಈ ನಾಡಿನಲ್ಲಿ ಅನೇಕ ಸಂತರು, ವಿದ್ವಾಂಸರು, ವಿಚಾರವಾದಿಗಳು ಜನಿಸಿ ಮಾರ್ಗದರ್ಶನ ನೀಡಿದ್ದಾರೆ. ಹಾವೇರಿ ವಿವಿ ಸ್ಥಾಪನೆಯಿಂದ ಶಿಕ್ಷಣದ ಜೊತೆಗೆ ಗ್ರಾಮೀಣ ಭಾಗದ ವಿಕಾಸವಾಗುತ್ತಿದೆ. ಬರುವ ದಿನಗಳಲ್ಲಿ ಈ ವಿವಿ ಇನ್ನಷ್ಟು ಉತ್ಕೃಷ್ಟವಾಗಿ ಬೆಳೆಯಲಿ. ಗೌರವ ಡಾಕ್ಟರೇಟ್ ಪಡೆದ ಸದಾಶಿವ ಸ್ವಾಮೀಜಿ ಹಾಗೂ ಸಾಹಿತಿ ಸತೀಶ ಕುಲಕರ್ಣಿ ಅವರು ಸಮಾಜದ ಏಳ್ಗೆಗೆ ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಸಮಾಜದ ಒಳಿತಿಗಾಗಿ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದರು.ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಾಗೂ ಕಾನೂನು ಆಯೋಗದ ಅಧ್ಯಕ್ಷ ಡಾ. ಅಶೋಕ ಹಿಂಚಿಗೇರಿ ಅವರು ಘಟಿಕೋತ್ಸವ ಭಾಷಣ ಮಾಡಿ, ಸಾಧಕರು ತೋರಿದ ಅತ್ಯುನ್ನತ ಪ್ರದರ್ಶನವನ್ನು ಗುರುತಿಸಿ ಗೌರವ ಡಾಕ್ಟರೆಟ್ ನೀಡಲಾಗುತ್ತದೆ. ಇಂದಿನ ಪುರಸ್ಕೃತರು ಎಲ್ಲರಿಗೂ ಮಾದರಿಯಾಗಿದ್ದಾರೆ. ಸದಾಶಿವ ಸ್ವಾಮಿಗಳು ಶಿಕ್ಷಣ ದಾಸೋಹಿ ಮತ್ತು ಅನ್ನ ದಾಸೋಹಿಯಾಗಿದ್ದಾರೆ. ಮದ್ಯಪಾನದಂತಹ ವ್ಯಸನದಿಂದ ಜನರನ್ನು ಮುಕ್ತಗೊಳಿಸಲು ಪಾದಯಾತ್ರೆ ಮಾಡಿದ್ದಾರೆ. ಇವರು ಸಮನ್ವಯ ಯೋಗಿ ಮತ್ತು ತಪೋನಿಧಿಯಾಗಿದ್ದಾರೆ ಹಾಗೂ ಸಾಹಿತಿ ಸತೀಶ್ ಕುಲಕರ್ಣಿ ಅವರು ಈ ಭಾಗದ ಖ್ಯಾತ ಸಾಹಿತಿಗಳು ಎಂದು ಹೇಳಿದರು. ಘಟಿಕೋತ್ಸವವು ಕೇವಲ ಒಂದು ಸಮಾರಂಭವಲ್ಲ, ಇದು ವಿದ್ಯಾರ್ಥಿಗಳು ಜೀವನದ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೀರಿ ಎಂಬ ಘೋಷಣೆಯಾಗಿದೆ. ನಿಮ್ಮ ವ್ಯಕ್ತಿತ್ವ ರೂಪಿಸಿದ ಶಿಕ್ಷಕರಿಗೆ ನೀವು ಸದಾ ಋಣಿಯಾಗಿರಬೇಕು. ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎಂಬ ತತ್ವವನ್ನು ಪಾಲಿಸಿ. ಪದವಿ ಪಡೆದ ಮೇಲೆ ಅಹಂಕಾರ ಬೆಳೆಸಿಕೊಳ್ಳಬೇಡಿ. ನಿಮ್ಮ ಮಾತು ಮೃದುವಾಗಿರಲಿ, ಕಟುವಾದ ಮಾತುಗಳು ಗುಂಡುಗಳಿಗಿಂತ ಹೆಚ್ಚು ನೋವುಂಟು ಮಾಡುತ್ತವೆ. ಸಾಕ್ರಟೀಸರ ಕಥೆಯಂತೆ, ಹಲ್ಲುಗಳು ಗಟ್ಟಿಯಾಗಿದ್ದರೂ ಬೇಗ ಉದುರುತ್ತವೆ, ಆದರೆ ನಾಲಿಗೆ ಮೃದುವಾಗಿದ್ದರಿಂದ ಹುಟ್ಟಿನಿಂದ ಸಾವಿನವರೆಗೆ ಇರುತ್ತದೆ. ಜೀವನದಲ್ಲಿ ಮೃದುತ್ವ ಮತ್ತು ಹೊಂದಾಣಿಕೆ ಗುಣ ನಿಮ್ಮನ್ನು ಯಶಸ್ಸಿನ ಶಿಖರಕ್ಕೇರಿಸುತ್ತದೆ ಎಂದು ಕಿವಿಮಾತು ಹೇಳಿದರು.ಇತರರ ಕಣ್ಣೀರು ಒರೆಸಿದಾಗ ನೀವು ಮನುಷ್ಯರಾಗುತ್ತೀರಿ. ನಿಮ್ಮ ಆಲೋಚನೆ ಅಥವಾ ಕಾರ್ಯಗಳಿಂದ ಯಾರಿಗೂ ನೋವಾಗದಂತೆ ನೋಡಿಕೊಂಡಾಗ ನಿಮ್ಮ ಆಧ್ಯಾತ್ಮಿಕ ಪ್ರಯಾಣ ಆರಂಭವಾಗುತ್ತದೆ. ಪಶುತ್ವದಿಂದ ಮನುಷ್ಯತ್ವದ ಕಡೆಗೆ ಮತ್ತು ಮನುಷ್ಯತ್ವದಿಂದ ದೈವತ್ವದ ಕಡೆಗೆ ವಿಕಾಸಗೊಳ್ಳಿರಿ. ಕತ್ತಲೆಯನ್ನು ದೂಷಿಸುವ ಬದಲು ಒಂದು ಮೇಣದಬತ್ತಿ ಹಚ್ಚಿ ಕತ್ತಲೆ ಹೋಗಲಾಡಿಸಿ. ಭಾರತದಲ್ಲಿ ಜನಿಸಿರುವುದಕ್ಕೆ ಹೆಮ್ಮೆ ಪಡಿ. ನಮ್ಮ ದೇಶವು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಸಂಪತ್ತನ್ನು ಹೊಂದಿದೆ ಎಂದು ಬಣ್ಣಿಸಿದರು.ಪದಕ ಪ್ರದಾನ: ಹಾವೇರಿ ವಿವಿಯ ವಿವಿಧ ಅಧ್ಯಯನ ವಿಭಾಗಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಓವರ್ ಆಲ್ ಟಾಪರ್ ಎಂ.ಎ. ಸಮಾಜಶಾಸ್ತ್ರ ವಿಭಾಗದ ನೇತ್ರಾ ಹರಿಜನ, ಎಂ.ಎ. ಅರ್ಥಶಾಸ್ತ್ರ ವಿಭಾಗದಲ್ಲಿ ಉಸ್ಮಾನಸಾಬ್ ಮುಲ್ಲಾ, ಎಂ.ಎ. ಇಂಗ್ಲಿಷ್ ವಿಭಾಗದಲ್ಲಿ ಕಾವ್ಯಾ ಪ್ರಸಾದಿಮಠ, ಕನ್ನಡ ವಿಭಾಗದಲ್ಲಿ ಪ್ರಿಯಾಂಕಾ ಈಳಿಗೇರ, ವಾಣಿಜ್ಯ ಶಾಸ್ತ್ರದಲ್ಲಿ ಐಶ್ವರ್ಯ ಮುದಿಗೌಡ್ರ, ಸಮಾಜ ಕಾರ್ಯ ವಿಭಾಗದಲ್ಲಿ ಧನಲಕ್ಷ್ಮಿ ಪಾಟೀಲ, ಬಿ.ಎ. ಶಿಕ್ಷಣ ಶಾಸ್ತ್ರದಲ್ಲಿ ನಾಗಲಕ್ಷ್ಮಿ ಬೇವಿನಮರದ ಅವರಿಗೆ ಬಂಗಾರದ ಪದಕ ಪ್ರದಾನ ಮಾಡಲಾಯಿತು.ಗೌರವ ಡಾಕ್ಟರೇಟ್ ಪ್ರದಾನ: ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹಾಗೂ ಸಾಹಿತಿ ಸತೀಶ ಕುಲಕರ್ಣಿ ಅವರಿಗೆ ಗೌರವ ಡಾಕ್ಟರೆಟ್ ಪ್ರದಾನ ಮಾಡಲಾಯಿತು. ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವೆ ರೇಣುಕಾ ಮೇಟಿ, ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು. ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಸ್ವಾಗತಿಸಿ, ವರದಿ ವಾಚನ ಮಾಡಿದರು. ಕುಲಸಚಿವ ಪ್ರೊ.ಸಿದ್ದಪ್ಪ ಟಿ.ಬಾಗಲಕೋಟ ಅವರು ವಂದಿಸಿದರು. \
ಜೀವನದ ಸಾರ್ಥಕತೆಗೆ ಶಿಕ್ಷಣದ ಪಾತ್ರ ಮಹತ್ವದ್ದು-ರಾಜ್ಯಪಾಲ ಗೆಹಲೋತ್
ಕಲಿಕೆಗೆ ಅಂತ್ಯವಿಲ್ಲ, ಅದು ನಿರಂತರವಾಗಿರುತ್ತದೆ. ಜೀವನದ ಸಾರ್ಥಕತೆಗೆ ಶಿಕ್ಷಣ ಬಹಳ ಮಹತ್ವದ ಪಾತ್ರವಹಿಸುತ್ತದೆ ಎಂದು ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ಚಂದ್ ಗೆಹಲೋತ್ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.