ಹಿಂದೂ ಧರ್ಮವನ್ನು ಪೋಷಿಸಿ ಬೆಳೆಸುವಲ್ಲಿ ದೇವಸ್ಥಾನಗಳ ಪಾತ್ರ ಅಪಾರವಾಗಿದ್ದು, ದೇವಸ್ಥಾನಗಳು ಸಮಾಜವನ್ನು ಒಂದಾಗಿ ಕಟ್ಟುವ ಶಕ್ತಿಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಜಪಾನಂದ ಜೀ ಮಹಾರಾಜರು ನುಡಿದರು.

ಕನ್ನಡಪ್ರಭ ವಾರ್ತೆ ಶಿರಾ

ಹಿಂದೂ ಧರ್ಮವನ್ನು ಪೋಷಿಸಿ ಬೆಳೆಸುವಲ್ಲಿ ದೇವಸ್ಥಾನಗಳ ಪಾತ್ರ ಅಪಾರವಾಗಿದ್ದು, ದೇವಸ್ಥಾನಗಳು ಸಮಾಜವನ್ನು ಒಂದಾಗಿ ಕಟ್ಟುವ ಶಕ್ತಿಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಜಪಾನಂದ ಜೀ ಮಹಾರಾಜರು ನುಡಿದರು.

ಶುಕ್ರವಾರ ಶಿರಾ ಭವಾನಿ ನಗರದಲ್ಲಿರುವ ದೇವಿ ಶ್ರೀ ಭವಾನೇಶ್ವರಿ (ಅಂಭಾಭವಾನಿ) ಅಮ್ಮನವರ ಪುನರ್ ಪ್ರತಿಷ್ಠಾಪನೆ, ನೂತನ ದೇವಾಲಯ ಉದ್ಘಾಟನೆ ಹಾಗೂ ಶ್ರೀ ವೀರಾಂಜನೇಯ ಸ್ವಾಮಿ, ಸೀತಾರಾಮಲಕ್ಷ್ಮಣ ದೇವರ ಪುನರ್ ಪ್ರತಿಷ್ಠಾಪನೆ, ವಿಮಾನಗೋಪುರ ಲೋಕಾರ್ಪಣೆ ಮತ್ತು ೨೯ನೇ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಇಂದಿನ ವೇಗದ ಜೀವನಶೈಲಿಯಲ್ಲಿ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ, ಯುವ ಪೀಳಿಗೆಗೆ ಧರ್ಮದ ಅರ್ಥ, ಜೀವನದ ತತ್ವಗಳು ಮತ್ತು ಸಂಸ್ಕೃತಿಯ ಮಹತ್ವವನ್ನು ತಂದೆ ತಾಯಿಗಳು ತಿಳಿಸಬೇಕು. ಹಿಂದೂ ಧರ್ಮದ ರಕ್ಷಣೆ ಎಲ್ಲರಿಂದ ಆಗಬೇಕು ಎಂದರು. ತಾಯಂದಿರು ಹಿಂದೂ ಧರ್ಮ ಉಳಿಸಲು ಪಣ ತೊಡಿ. ದೇವಸ್ಥಾನಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ, ಹಿಂದೂ ಧರ್ಮದ ಬಗ್ಗೆ ತಾತ್ಸಾರ ಬೇಡ. ಹಿಂದೂ ಧರ್ಮವನ್ನು ಬೆಳೆಸಿ ಉಳಿಸಿ ಬಳಸಿ ಎಂದರು.

ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ನಮ್ಮ ಋಷಿ ಮುನಿಗಳು ತಪಸ್ಸು ಮಾಡಿ ಹಿಂದೂ ಧರ್ಮ ಉಳಿಸಿದ್ದಾರೆ. ನಾವು ನಮ್ಮ ಪರಂಪರೆ ಉಳಿಸಬೇಕು. ದೇವಸ್ಥಾನ ಉಳಿಯಬೇಕು. ಧರ್ಮದ ಉಳಿವಿಗೆ ನಾವು ಕೈ ಜೋಡಿಸೋಣ ಅದಕ್ಕೆ ರಾಜಮನೆತನದ ಸಹಾಯ ಎಂದಿಗೂ ಇರುತ್ತದೆ. ನಮ್ಮ ಪೂರ್ವಜರು ನಾಡಿನ ಜನರ ಹಿತಕ್ಕಾಗಿ ನೀರಾವರಿ, ಧಾರ್ಮಿಕತೆ ಸೇರಿದಂತೆ ಹಲವು ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ ಅಭಿವೃದ್ಧಿ ಪಡಿಸಿದ್ದಾರೆ. ಹಿರಿಯೂರು ತಾಲೂಕಿನ ಗಾಯಿತ್ರಿ ಜಲಾಶಯ, ವಾಣಿವಿಲಾಸ ಜಲಾಶಯ ಸೇರಿದಂತೆ ಹಲವಾರು ಜಲಾಶಯಗಳನ್ನು ನಿರ್ಮಿಸಿ ರಾಜರು ನೀರಾವರಿ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಅದೇ ರೀತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಸಹ ದೇಶವನ್ನು ಸಬ್ ಕಾ ಸಾತ್ ಸಬ್ಕಾ ವಿಕಾಸ್ ಮಾಡಲು ಹೊರಟಿದ್ದಾರೆ. ಭಾರತದ ಪ್ರಜೆಗಳೆಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ದೇವಿ ಶ್ರೀ ಭವಾನೇಶ್ವರಿ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಾಲಯಗಳ ನಿರ್ವಹಣಾ ಸಮಿತಿಯ ಟ್ರಸ್ಟಿಗಳಾದ ರೂಪೇಶ್ ಕೃಷ್ಣಯ್ಯ ಮಾತನಾಡಿದರು.

ಸಮಾರಂಭದಲ್ಲಿ ದೇವಿ ಶ್ರೀ ಭವಾನೇಶ್ವರಿ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಾಲಯಗಳ ನಿರ್ವಹಣಾ ಸಮಿತಿಯ ಟ್ರಸ್ಟಿಗಳಾದ ಬಿ.ವಿ.ವೆಂಕಟೇಶ್ ಲಾಡ್, ಜ್ಯೋತಿಷಿಗಳಾದ ಗೋಪಾಲ ಕೃಷ್ಣ ಶರ್ಮ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್ ಆರ್ ಗೌಡ, ತಹಸೀಲ್ದಾರ್ ಆನಂದ್ ಕುಮಾರ್, ಬಿಕೆ ಮಂಜುನಾಥ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಜಯ್ ಕುಮಾರ್, ಪೌರಯುಕ್ತ ರುದ್ರೇಶ್, ಜೆಡಿಎಸ್ ಮುಖಂಡರಾದ ಆರ್ ಉಗ್ರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಮುದಿಮಡು ರಂಗಸ್ವಾಮಯ್ಯ, ಪ್ರತ್ಯಂಗಿರಾ ದೇವಸ್ಥಾನ ಅಧ್ಯಕ್ಷರಾದ ಬಸವರಾಜ ಶಾಸ್ತ್ರೀ, ಟ್ರಸ್ಟಿಗಳಾದ ಆರ್.ಉದಯ್ ಕುಮಾರ್, ಬಿ.ಎಸ್. ವಿಜಯ್ ಕುಮಾರ್, ರೂಪೇಶ್ ಕೃಷ್ಣಯ್ಯ, ಲಾಡರ ಸಂಘದ ಉಪಾಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ, ಸಂಘಟನಾ ಕಾರ್ಯದರ್ಶಿ ರಂಗನಾಥ್ ಲಾಡ್, ಖಜಾಂಚಿ ಎನ್.ನರಸಿಂಹಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.