ಕನ್ನಡಪ್ರಭ ವಾರ್ತೆ ತುಮಕೂರುಕುಟುಂಬ, ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯ ಪಾತ್ರ ಅದ್ವಿತೀಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೆಂಗಳೂರು ದಕ್ಷಿಣ ಚುನಾಯಿತ ಪ್ರತಿನಿಧಿ ಅಂಬಿಕಾ ರಾಮಚಂದ್ರ ಬಣ್ಣಿಸಿದರು. ಅವರು ತುಮಕೂರಿನ ಶಂಕರಮಠ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಹಾಗೂ ತುಮಕೂರು ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರಿನ ಶ್ರೀಮಾತಾ ಮಹಿಳಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷೆ ಡಾ. ಎಂ.ವಿ.ನಾಗಮಣಿ ಅವರು ಮಾತನಾಡಿ, ಶತಮಾನದಿಂದ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟದ ವಿಜಯ, ಅವರ ಸಾಧನೆಗಳ ಸಂಭ್ರಮ ಹಾಗೂ ಸಮಾಜದಲ್ಲಿ ಅವರಿಗೆ ಇರಬೇಕಾದ ಸಮಾನ ಗೌರವದ ದ್ಯೋತಕವೇ ಮಹಿಳಾ ದಿನಾಚರಣೆಯಾಗಿದ್ದು, ಇದು ಪ್ರತಿದಿನವೂ ನಡೆಯಬೇಕಿದೆ ಎಂದು ಆಶಿಸಿದರು.ಮಹಿಳಾ ದಿನಾಚರಣೆ ಅಂಗವಾಗಿ ತುಮಕೂರು ಜಿಲ್ಲೆಯ ಎಲ್ಲ ತಾಲೂ ಕುಗಳಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಇಪ್ಪತ್ತಕ್ಕೂ ಹೆಚ್ಚಿನ ವಿಪ್ರ ಮಹಿಳೆಯರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಬ್ರಾಹ್ಮಣ ಸಭಾ ಉಪಾಧ್ಯಕ್ಷ ಎಂ.ಕೆ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬ್ರಾಹ್ಮಣ ಸಭಾ ಉಪಾಧ್ಯಕ್ಷೆ ಸುಭಾಷಿಣಿ ರವೀಶ್ ಸ್ವಾಗತಿಸಿದರು. ಜಿಲ್ಲಾ ಪ್ರತಿನಿಧಿ ಡಾ. ಹೆಚ್.ಹರೀಶ್ ವಂದಿಸಿದರು. ಉಪನ್ಯಾಸಕಿ ಡಾ. ಚೈತಾಲಿ ನಿರೂಪಿಸಿದರು. ಶಂಕರ ಸೇವಾಸಮಿತಿ ಅಧ್ಯಕ್ಷ ಕೆ. ಹಿರಿಯಣ್ಣ ಸೇರಿದಂತೆ ಅನೇಕ ವಿಪ್ರ ಮುಖಂಡರು ಉಪಸ್ಥಿತರಿದ್ದರು. ಜಿಲ್ಲೆಯಾದ್ಯಂತ ನೂರಾರು ಸಂಖ್ಯೆಯಲ್ಲಿ ವಿಪ್ರರು ಪಾಲ್ಗೊಂಡಿದ್ದರು.