ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಡಿ.ರವಿಶಂಕರ್

| Published : Oct 11 2025, 12:02 AM IST

ಸಾರಾಂಶ

ಮುಂದಿನ ವರ್ಷಗಳಲ್ಲಿ ರಾಜ್ಯದ ಪುರಸಭೆಗಳಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಬಂದರೆ ಪುರಸ್ಕೃತ ಸಮಾರಂಭಕ್ಕೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಯೊಂದಿಗೆ ಓರ್ವ ಮಹಿಳಾ ಮತ್ತು ಪುರುಷ ಪೌರ ಕಾರ್ಮಿಕರನ್ನು ಪ್ರಶಸ್ತಿ ಪಡೆಯುವ ಕಾರ್ಯಕ್ರಮಕ್ಕೆ ದೆಹಲಿಗೆ ಕರೆದೊಯ್ಯಲು ಸರ್ಕಾರಿ ಆದೇಶ ಹೊರಡಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ದಿನನಿತ್ಯ ಪಟ್ಟಣದ ಸ್ವಚ್ಛತೆಗೆ ಕೆಲಸ ಮಾಡಲು ತಮ್ಮ ಜೀವನವನ್ನು ಮುಡುಪಾಗಿಡುವ ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೈಯುಕ್ತಿಕ ಜೀವನವನ್ನು ತ್ಯಜಿಸಿ ಸ್ವಚ್ಛತೆಗೆ ಆದ್ಯತೆ ನೀಡುವ ನಮ್ಮ ಪಟ್ಟಣದ ಪೌರ ಕಾರ್ಮಿಕ ಬಂಧುಗಳು ಶ್ರಮದಿಂದ ಮೂರು ಬಾರಿ ಕೆ.ಆರ್.ನಗರದ ಪುರಸಭೆ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಬರಲು ಸಾಧ್ಯವಾಗಿದೆ ಎಂದರು.

ಮುಂದಿನ ವರ್ಷಗಳಲ್ಲಿ ರಾಜ್ಯದ ಪುರಸಭೆಗಳಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಬಂದರೆ ಪುರಸ್ಕೃತ ಸಮಾರಂಭಕ್ಕೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಯೊಂದಿಗೆ ಓರ್ವ ಮಹಿಳಾ ಮತ್ತು ಪುರುಷ ಪೌರ ಕಾರ್ಮಿಕರನ್ನು ಪ್ರಶಸ್ತಿ ಪಡೆಯುವ ಕಾರ್ಯಕ್ರಮಕ್ಕೆ ದೆಹಲಿಗೆ ಕರೆದೊಯ್ಯಲು ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿ ಹಾಗೂ ಪೌರಾಡಳಿತ ಸಚಿವರಿಗೆ ಲಿಖಿತ ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಪ್ರತಿಯೊಬ್ಬ ಪೌರ ಕಾರ್ಮಿಕರು ತಮ್ಮ ಮಕ್ಕಳನ್ನು ಮೂಲ ವೃತ್ತಿಗೆ ಸೇರಿಸುವ ತಪ್ಪು ಮಾಡದೆ ಅವರಿಗೆ ಉನ್ನತ ಮತ್ತು ಉತ್ತಮ ಶಿಕ್ಷಣ ಕೊಡಿಸಿ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷ ಡಿ. ಶಿವುನಾಯಕ್ ಮಾತನಾಡಿ, ಪಟ್ಟಣದ ಸ್ವಚ್ಛತೆ ಮಾಡುವ ವಿಚಾರದಲ್ಲಿ ಪೌರ ಕಾರ್ಮಿಕರನ್ನೆ ಅವಲಂಭಿಸದೆ ಅವರೊಂದಿಗೆ ನಾವು ಸಹ ಕೈ ಜೋಡಿಸಿ ಕೃಷ್ಣರಾಜ ಒಡೆಯರ್ ಅವರು ವ್ಯವಸ್ಥಿತವಾಗಿ ನಿರ್ಮಾಣ ಮಾಡಿದ ನಮ್ಮ ನಗರವನ್ನು ಶುಚಿತ್ವದಿಂದ ಇಟ್ಟುಕೊಳ್ಳಬೇಕು ಎಂಬ ಬಯಕೆ ವ್ಯಕ್ತಪಡಿಸಿದರು.

ಪಟ್ಟಣ ಪುರಸಭೆ ಕಚೇರಿಯ ಆವರಣದಲ್ಲಿ ನೂತನವಾಗಿ ಕಾರ್ಯಾರಂಭ ಮಾಡಿದ ಶಾಸಕರ ಕಚೇರಿಯನ್ನುಉದ್ಘಾಟಿಸುವುದರ ಜತೆಗೆ ಸ್ವಚ್ಚತಾ ವಾಹನಗಳನ್ನು ಸೇವೆಗೆ ಲೋಕಾರ್ಪಣೆ ಮಾಡಲಾಯಿತು.

ಸಫಾಯಿಕರ್ಮಾಚಾರಿ ಆಯೋಗದ ಶಾಶ್ವತ ಸದಸ್ಯ ಕೆ. ನಂಜಪ್ಪ, ಪುರಸಭೆ ಸದಸ್ಯರಾದ ಶಂಕರ್, ನಟರಾಜು, ಉಮೇಶ್, ಕೆ.ಎಲ್. ಜಗದೀಶ್, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಜಿ.ಎಸ್. ರಮೇಶ್ ಮಾತನಾಡಿದರು.

ಸದಸ್ಯರಾದ ಪ್ರಕಾಶ್, ಸಂತೋಷ್ ಗೌಡ, ಸರೋಜ ಮಹದೇವ್, ಸಿ. ಶಂಕರ್, ಸೈಯದ್ ಸಿದ್ದಿಕ್, ಮಂಜುಳ ಚಿಕ್ಕವೀರು, ಮುಖಂಡರಾದ ಪುಟ್ಟರಾಜು, ಕಾಮಧೇನುಧರ್ಮ, ಕೆ. ವಿನಯ್, ನವೀದ್ ಇದ್ದರು.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ತಾಲೂಕಿನ ಯರಹಳ್ಳಿ ಗ್ರಾಮದದಲ್ಲಿ ಆರೋಗ್ಯಾಧಿಕಾರಿ ಕಚೇರಿ, ಮ್ಯಾಜಿಕ್ ಬಸ್ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ತಾಲೂಕು ಮಟ್ಟದ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಪ್ರತಿವರ್ಷ ಅ. 10 ರಂದು ಆಚರಿಸಲಾಗುತ್ತದೆ. ಈ ದಿನವು ಜಾಗತಿಕವಾಗಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಬೆಂಬಲ ನೀಡಲು ಮತ್ತು ಈ ವಿಷಯದಲ್ಲಿನ ಕಳಂಕವನ್ನು ಕಡಿಮೆ ಮಾಡಲು ಮೀಸಲಾಗಿದೆ ಎಂದರು.

ಯೋಗ ಶಿಕ್ಷಕ ಶ್ರೀಶೈಲ ಕುಂಬಾರ ಮಾತನಾಡಿ, ಮಾಸಿಕ ಒತ್ತಡ ಕಡಿಮೆಯಾಗಬೇಕಾದರೆ ಯೋಗ ಮತ್ತು ಧ್ಯಾನ ಮಾಡಿದರೆ ಮನಸ್ಸು ಹಗುರವಾಗುತ್ತದೆ, ಮನಸ್ಸು ಏಕಾಗ್ರತೆಗೊಳ್ಳುತ್ತದೆ ಹಾಗೂ ಮಾನಸಿಕವಾಗಿ ಮನಸ್ಸು ಸದೃಢಗೊಳ್ಳುತ್ತದೆ, ಆದ್ದರಿಂದ ಎಲ್ಲರೂ ಯೋಗ ಮತ್ತು ಧ್ಯಾನವನ್ನು ಪ್ರತಿನಿತ್ಯ ಮಾಡಿ ಎಂದು ತಿಳಿಸಿದರು.

ಮ್ಯಾಜಿಕ್ ಬಸ್ ಸೇವಾ ಸಂಸ್ಥೆಯ ವ್ಯವಸ್ಥಾಪಕ ವೆಂಕಟೇಶ್ ಮಾತನಾಡಿದರು.

ಆಶಾ ಕಾರ್ಯಕರ್ತೆರಿಗೆ ವಿವಿಧ ಆಟಗಳನ್ನು ಆಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

ತಾಲೂಕು ಆರೋಗ್ಯಾಧಿಕಾರಿಗಳ ಸಿಬ್ಬಂದಿ ವರ್ಗ, ಮ್ಯಾಜಿಕ್ ಸೇವಾ ಬಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರುಇದ್ದರು.