ಸಿರಿಧಾನ್ಯಗಳಿಗೂ ತಟ್ಟಿದ ಬರದ ಛಾಯೆ

| Published : Jan 26 2024, 01:49 AM IST

ಸಾರಾಂಶ

ರೈತರು ವಾಣಿಜ್ಯ ಬೆಳೆಗಳತ್ತ ಹೆಚ್ಚು ಆಸ್ಥೆ ವಹಿಸುತ್ತಿರುವ ಜತೆಗೆ ಮಳೆಯ ತೀವ್ರ ಅಭಾವದಿಂದ ಸಿರಿಧಾನ್ಯ ಬೆಳೆಗೆ ಹಿನ್ನಡೆ ಕಂಡಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಆರೋಗೃ ವೃದ್ಧಿಗೆ ಪೂರಕವಾಗಿರುವ "ಸಿರಿಧಾನ್ಯ "ಗಳಿಗೂ ಬರದ ಛಾಯೆ ಮೂಡಿದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಏರಿಕೆಯ ಪ್ರಮಾಣದಲ್ಲಿ ಕಂಡುಬಂದಿದ್ದ ಸಿರಿಧಾನ್ಯಗಳ ಕೃಷಿ ಭಾಗಶಃ ಇಳಿಕೆ ಕಂಡಿದೆ.

ಮಳೆಯ ಅಭಾವದಿಂದಾಗಿ ಈ ಬಾರಿಯ ಮುಂಗಾರಿನ ಹಂಗಾಮಿನಲ್ಲಿ ಸಿರಿಧಾನ್ಯಗಳ ಕೃಷಿಯಿಂದ ರೈತರು ವಿಮುಖವಾಗಿದ್ದು, ಕೃಷಿ ಇಲಾಖೆಯ ವಾರ್ಷಿಕ ನಿಗದಿತ ಗುರಿಯ ಅರ್ಧದಷ್ಟು ಸಹ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ನಿತ್ಯ ಆಹಾರಕ್ಕೆ ಸಿರಿಧಾನ್ಯಗಳನ್ನೇ ಆಶ್ರಯಿಸಿದವರು ತೀವ್ರ ಬೆಲೆ ಏರಿಕೆಯ ಬರೆಯನ್ನು ಅನುಭವಿಸುವಂತಾಗಿದೆ. ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಹೆಚ್ಚಿನ ಪ್ರಮಾಣದ ಬಿತ್ತನೆಯಾಗಿದ್ದ ಜೋಳದ ಬೆಳೆ ಮಳೆಯಿಲ್ಲದೆ ಬಹುತೇಕ ನಷ್ಟವಾಗಿರುವುದು ರೈತರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.

ಹೊರಜಿಲ್ಲೆಯಿಂದ ಆಮದು: ತೃಣಧಾನ್ಯಗಳು ಎಂದೂ ಕರೆಯುವ ನವಣೆ, ಸಜ್ಜೆ, ಸಾಮೆ, ಹಾರಕ(ಅರ್ಕ), ಕೊರಲೆ, ಬರಗು, ರಾಗಿ ಹಾಗೂ ಜೋಳ ಬೆಳೆಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಸಿರಿಧಾನ್ಯಗಳ ಪೈಕಿ ನವಣೆ, ಸಜ್ಜೆ, ರಾಗಿ ಹಾಗೂ ಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಮನೆ ಬಳಕೆ ಹಾಗೂ ಮಾರಾಟ ಮಾಡಲಾಗುತ್ತದೆ. ಸಿರಿಧಾನ್ಯಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುವುದೇ ಹೆಚ್ಚು. ಆದರೆ, ಈ ಬಾರಿ ಮಳೆಯ ಅಭಾವದಿಂದಾಗಿ ಬರ ಎದುರಾಗಿದ್ದರಿಂದ ಮುಂಗಾರು ಹಂಗಾಮಿನಲ್ಲಿ ಸಿರಿಧಾನ್ಯಗಳತ್ತ ಮನಸ್ಸು ಹಾಯಿಸಲಿಲ್ಲ. ಹೀಗಾಗಿ ಉತ್ಪನ್ನದ ಪ್ರಮಾಣ ತೀವ್ರ ಕುಸಿತವಾಗಿದ್ದು, ನಿತ್ಯ ಆಹಾರಕ್ಕೆ ಬಳಕೆಗೆ ಹೊರ ರಾಜ್ಯ, ಜಿಲ್ಲೆಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ರಾಜ್ಯದ ಎಲ್ಲ ಕಡೆಗಳಲ್ಲೂ ಇದೇ ರೀತಿಯ ವಾತಾವರಣ ಇರುವುದರಿಂದ ಬೆಳೆದ ಬೆಳೆಗೆ ಭಾರೀ ಪ್ರಮಾಣದ ಬೇಡಿಕೆ ಬಂದಿದ್ದು, ದರ ಏರಿಕೆಯ ಬಿಸಿ ತಟ್ಟಿದೆ.

ಸಿರಿಧಾನ್ಯಗಳಿಗೆ ಹೆಚ್ಚಿದ ಬೇಡಿಕೆ: ಸಿರಿಧಾನ್ಯಗಳನ್ನು ಕಡಿಮೆ ನೀರು ಹಾಗೂ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾಗಿದೆ. ಆದರೆ, ರೈತರು ವಾಣಿಜ್ಯ ಬೆಳೆಗಳತ್ತ ಹೆಚ್ಚು ಆಸ್ಥೆ ವಹಿಸುತ್ತಿರುವ ಜತೆಗೆ ಮಳೆಯ ತೀವ್ರ ಅಭಾವದಿಂದ ಸಿರಿಧಾನ್ಯ ಬೆಳೆಗೆ ಹಿನ್ನಡೆ ಕಂಡಿದೆ. ಬೆಳೆಯ ಪ್ರಮಾಣ ಕುಸಿತದಿಂದ ಸಹಜವಾಗಿ ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿದೆ.

ಅಪಾರ ಪ್ರಮಾಣದ ಪೌಷ್ಟಿಕಾಂಶ ಹೊಂದಿರುವ ಸಿರಿಧಾನ್ಯಗಳ ಬೆಳೆಯನ್ನು ಉತ್ತೇಜಿಸಲು ಸರ್ಕಾರ ರೈತರನ್ನು ಉತ್ತೇಜಿಸುತ್ತದೆ. ಮಾರುಕಟ್ಟೆ ಸೃಜನೆ, ಕಡಿಮೆ ಖರ್ಚಿನಲ್ಲಿ ಬೆಳೆ ಬೆಳೆಯುವ ವಿಧಾನ ಕುರಿತು ಕೃಷಿ ಇಲಾಖೆಯಿಂದ ರೈತರಿಗೆ ತರಬೇತಿ ನೀಡಲಾಗುತ್ತದೆ.ಜಾಗೃತಿ: ಸಿರಿಧಾನ್ಯಗಳನ್ನು ಉತ್ತೇಜಿಸಲು ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಪ್ರೋತ್ಸಾಹಧನ ನೀಡಲಾಗುವುದು. ಎರಡು ಹೆಕ್ಟೇರ್‌ವರೆಗೆ ಪ್ರೋತ್ಸಾಹಧನ ಪಡೆಯಲು ಅವಕಾಶವಿದೆ. ರೈತರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ನಡೆದಿದೆ ಎಂದು ಕೃಷಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದರು.ದರ ಏರಿಕೆ: ಮುಂಗಾರಿನಲ್ಲಿ ಮಳೆಯಿಲ್ಲದೆ ರೈತರು ಸಿರಿಧಾನ್ಯಗಳನ್ನು ಬೆಳೆಯಲು ಸಾಧ್ಯವಾಗಿಲ್ಲ. ಜಿಲ್ಲೆಯ ನಾನಾ ಕಡೆ ಬಿತ್ತನೆಯಾದಷ್ಟು ಬೆಳೆ ಬಂದಿಲ್ಲ. ಸಿರಿಧಾನ್ಯ ಉತ್ಪನ್ನಗಳ ಕುಸಿತದಿಂದ ದರ ಏರಿಕೆಯಾಗಿದೆ ಎಂದು ಸಿರಿಧಾನ್ಯ ಕೃಷಿಕರಾದ ಸಿರುಗುಪ್ಪ ತಾಲೂಕಿನ ಭೈರಾಪುರದ ಈರಪಯ್ಯ ತಿಳಿಸಿದರು.ಇಳುವರಿ ಕುಸಿತ

ಜಿಲ್ಲೆಯಲ್ಲಿ 2022- 2023ರಲ್ಲಿ ಜೋಳ, ರಾಗಿ, ಸಜ್ಜೆ ಸೇರಿದಂತೆ ಒಟ್ಟು ವಿವಿಧ ಸಿರಿಧಾನ್ಯಗಳು 9314 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಉತ್ತಮ ಇಳುವರಿಯಿಂದ ರೈತರು ನೆಮ್ಮದಿ ಕಂಡುಕೊಂಡಿದ್ದರು. 2023- 2024ರಲ್ಲಿ ಜೋಳ 15,927 ಹೆಕ್ಟೇರ್, ರಾಗಿ 90 ಹೆಕ್ಟೇರ್, ಸಜ್ಜೆ 91 ಹೆಕ್ಟೇರ್ ಸೇರಿದಂತೆ ಇತರೆ ಸಿರಿಧಾನ್ಯಗಳು 175 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದರೂ ಭಾಗಶಃ ಇಳುವರಿ ಕುಸಿತ ಕಂಡಿದೆ. ರೈತರೇ ಹೇಳುವ ಪ್ರಕಾರ ಮುಂಗಾರು ಹಂಗಾಮಿನ ಸಿರಿಧಾನ್ಯಗಳು ಶೇ. 20ರಷ್ಟು ಸಹ ಬೆಳೆ ಬಂದಿಲ್ಲ.