ಆಟ ಆಡೋ ಮಕ್ಕಳು ತಾಯಿಯಾಗುವ ಪರಿಸ್ಥಿತಿ ಕಳವಳಕಾರಿ: ಜಸ್ಟೀಸ್‌

| Published : Feb 09 2024, 01:46 AM IST

ಆಟ ಆಡೋ ಮಕ್ಕಳು ತಾಯಿಯಾಗುವ ಪರಿಸ್ಥಿತಿ ಕಳವಳಕಾರಿ: ಜಸ್ಟೀಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೌಢಶಾಲಾ ಹಂತದಲ್ಲಿಯೇ ಟಿವಿಗಳು, ಮೊಬೈಲ್‌ಗಳ ವಿವಿಧ ಜಾಲತಾಣದಲ್ಲಿ ಲೈಂಗಿಕ ದೃಶ್ಯಗಳನ್ನು ವೀಕ್ಷಿಸಿ ಲೈಂಗಿಕ ಆಕರ್ಷಣೆಗೆ ಒಳಗಾಗಿ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಇಂತಹ ಪ್ರಕರಣಗಳಿಂದ ದೂರ ಮಾಡಿ ಉತ್ತಮ ಮಾರ್ಗದಲ್ಲಿ ಕೊಂಡೊಯ್ಯಲು ಶಿಕ್ಷಕರಿಂದ ಮಾತ್ರ ಸಾಧ್ಯ

ಕನ್ನಡಪ್ರಭ ವಾರ್ತೆ ಕೋಲಾರ

ಆಟವಾಡುವ ಬಾಲಕಿಯರು ಇಂದು ತಾಯಿಯಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಕಳವಳಕಾರಿ, ೧೮ ವರ್ಷದೊಳಗಿನ ಮಕ್ಕಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಅಪರಾಧ, ಇಂತಹ ಪ್ರಕರಣಗಳನ್ನು ದಾಖಲಿಸಿ ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಹಾಗೂ ಕಾರಣರಾದವರು ಅಪ್ರಾಪ್ತರಾಗಿದ್ದರೆ ರಿಮ್ಯಾಂಡ್ ಹೋಂಗೆ ಅಥವಾ ವಯಸ್ಕರಾಗಿದ್ದಾರೆ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರದ ಅಧ್ಯಕ ಮಂಜುನಾಥ್ ಜಿ.ಎ. ಎಚ್ಚರಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಬಾಲನ್ಯಾಯ ಕಾಯ್ದೆ-೧-೧೫, ಪೋಕ್ಸೋ ಕಾಯ್ದೆ-೨೦೧೨, ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬, ದತ್ತು ಕಾರ್ಯಕ್ರಮ, ಮಕ್ಕಳ ಸಹಾಯವಾಣಿ ೧೦೯೮,ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಕಾಯ್ದೆಗಳ ಕುರಿತು ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಿನೆಮಾ, ಮೊಬೈಲ್‌ ಕಾರಣ

೮ ಮತ್ತು ೯ನೇ ತರಗತಿಯ ವಿದ್ಯಾರ್ಥಿ ದೆಸೆಯಲ್ಲಿ ವೈಯುಕ್ತಿಕ ಹಂಬಲಗಳಿಗೆ ಬಲಿಯಾಗುತ್ತಿದ್ದಾರೆ ಇದಕ್ಕೆ ಸಿನಿಮಾಗಳು, ಮೊಬೈಲ್‌ಗಳು ಪ್ರಚೋಧನಾಕಾರಿಯಾಗಿದ್ದು ಇದರಿಂದ ಹಾದಿ ತಪ್ಪುವಂತಾಗುತ್ತಿದೆ, ಪೋಕ್ಸೋ ಪ್ರಕರಣ ಒಂದರಲ್ಲಿ ೮ನೇ ತರಗತಿಯ ಬಾಲಕಿ ತನ್ನ ಪ್ರಿಯಕರನಿಗೆ ತನ್ನನ್ನು ಕರೆದುಕೊಂಡು ಹೋಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಪತ್ರ ಬರೆದಿದ್ದಾಳೆ. ಅವಳ ಪ್ರಿಯಕರ ಪ್ರಾಣ ರಕ್ಷಣೆಗಾಗಿ ಆಕೆಯನ್ನು ಕರೆದುಕೊಂಡು ಹೋದನೆಂದು ವಕೀಲರು ನ್ಯಾಯಾಲಯದ ಮುಂದೆ ವಿವರಿಸಿದ್ದನ್ನು ನೆನಪಿಸಿಕೊಂಡರು.

ಪ್ರೌಢಶಾಲಾ ಹಂತದಲ್ಲಿಯೇ ಟಿವಿಗಳು, ಮೊಬೈಲ್‌ಗಳ ವಿವಿಧ ಜಾಲತಾಣದಲ್ಲಿ ಲೈಂಗಿಕ ದೃಶ್ಯಗಳನ್ನು ವೀಕ್ಷಿಸಿ ಲೈಂಗಿಕ ಆಕರ್ಷಣೆಗೆ ಒಳಗಾಗಿ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಇಂತಹ ಪ್ರಕರಣಗಳಿಂದ ದೂರ ಮಾಡಿ ಉತ್ತಮ ಮಾರ್ಗದಲ್ಲಿ ಕೊಂಡೊಯ್ಯಲು ಶಿಕ್ಷಕರಿಂದ ಮಾತ್ರ ಸಾಧ್ಯ, ಮಕ್ಕಳಿಗೆ ಕಾಯ್ದೆಗಳ ಅರಿವು ಮೂಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಂತಾಗ ಬೇಕೆಂದು ತಿಳಿಸಿದರು.

ಬಾಲ್ಯ ವಿವಾಹ ತಡೆಗಟ್ಟಿ

ಜಿಪಂ ಸಿಇಒ ಪದ್ಮಬಸವಂತಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಣ್ಣ ವಯಸ್ಸಿನ ಮಕ್ಕಳು ೯೮ ಮಂದಿ ಗರ್ಭಿಣಿಯರಾಗಿದ್ದು, ಈ ಪೈಕಿ ೬೫ ಮಂದಿ ವಿರುದ್ಧ ಎಫ್.ಐ.ಆರ್ ಪ್ರಕರಣ ದಾಖಲು ಮಾಡಿದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲ್ಯ ವಿವಾಹಗಳ ಪ್ರಕರಣದಲ್ಲಿ ಪೋಷಕರ ಮೇಲೂ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಎಸ್.ಮಂಜು, ಲಕ್ಷ್ಮೀ ಪ್ರಸನ್ನಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್ ಹೊಸಮನಿ, ಮಕ್ಕಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ನಾರಾಯಣಸ್ವಾಮಿ.ಎನ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಮಂಜು, ಎಸ್. ಗೀತಾ, ವಂಶಿಕೃಷ್ಣ ಇದ್ದರು.