ಕನ್ನಡಪ್ರಭ ವಾರ್ತೆ ಹಾಸನ

ನಗರದ ವಲ್ಲಭಾಯಿ ರಸ್ತೆ 5ನೇ ಕ್ರಾಸ್‌ನಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ 54ನೇ ಜಾತ್ರಾ ಮಹೋತ್ಸವವನ್ನು ಅತ್ಯಂತ ವೈಭವ ಮತ್ತು ಭಕ್ತಿಭಾವದಿಂದ ಆಚರಿಸಲಾಯಿತು. ಈ ಅಂಗವಾಗಿ ಅಮ್ಮನವರನ್ನು ವಿದ್ಯುತ್ ಅಲಂಕೃತ ಬೆಳ್ಳಿ ಮಂಟಪದಲ್ಲಿ ಪ್ರತಿಷ್ಠಾಪಿಸಿ ವಿವಿಧ ಕಲಾತಂಡದೊಂಡನೆ ಆಕರ್ಷಕ ಭವ್ಯ ಉತ್ಸವ ಮೆರವಣಿಗೆ ನಡೆಸಲಾಯಿತು.ಮೂಲಸ್ಥಳದಿಂದ ಪ್ರಾರಂಭವಾದ ಮೆರವಣಿಗೆ ಗಂಗಾಪರಮೇಶ್ವರಿ ಸರ್ಕಲ್, ಅಮೀರ್‌ ಮೊಹಲ್ಲ ಸರ್ಕಲ್, ವಲ್ಲಭಾಯಿ ರಸ್ತೆ, ಶಂಕರ್‌ನಾಗ್ ಆಟೋ ಸ್ಟ್ಯಾಂಡ್, ಹೊಸ ಲೈನ್ ರಸ್ತೆ, ಸೊಸೈಟಿ ರಸ್ತೆ, ಚನ್ನಕೇಶವ ದೇವಸ್ಥಾನ ರಸ್ತೆ, ಗಣಪತಿ ದೇವಸ್ಥಾನ, ಹಾಸನಾಂಭ ಸರ್ಕಲ್, ಹುಣಸಿನಕೆರೆ ರಸ್ತೆ ಹಾಗೂ ಕಾಶಿ ವಿಶ್ವನಾಥ ದೇವಸ್ಥಾನ ರಸ್ತೆ ಮಾರ್ಗವಾಗಿ ಸಾಗಿತು. ಮೆರವಣಿಗೆ ಸಾಗಿದ ಎಲ್ಲೆಡೆ ಭಕ್ತರು ಅಮ್ಮನವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ನಾದಸ್ವರದ ಮಧುರ ನಾದ, ಮಂಗಳೂರಿನ ಚಂಡವಾದ್ಯದ ಗರ್ಜನೆ, ವೀರಗಾಸೆ ನೃತ್ಯದ ಉತ್ಸಾಹಭರಿತ ಪ್ರದರ್ಶನ, ತಮಟೆಯ ಸದ್ದು ಹಾಗೂ ಕೇರಳದ ಗೊಂಬೆ ಕಲಾ ತಂಡಗಳ ವೈವಿಧ್ಯಮಯ ಪ್ರದರ್ಶನಗಳು ಜನರ ಮನಸೆಳೆಯುವಂತಾಗಿದ್ದವು. ವಿವಿಧ ಕಲಾ ತಂಡಗಳ ಭಾಗವಹಿಸುವಿಕೆಯಿಂದ ಮೆರವಣಿಗೆಗೆ ವಿಶೇಷ ಕಳೆ ಸೇರಿತು. ಮೆರವಣಿಗೆಯ ಸಮಯದಲ್ಲಿ ಪೊಲೀಸ್ ಇಲಾಖೆ ಭದ್ರತಾ ವ್ಯವಸ್ಥೆ ಕೈಗೊಂಡಿದ್ದು, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಾಯಿತು. ದೇವಸ್ಥಾನ ಸಮಿತಿ ವತಿಯಿಂದ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ಬಿ.ಎನ್. ಮಹಂತೇಶ್ ಹಾಗೂ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಭಕ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಿದರು. ಒಟ್ಟಾರೆ, ಜಾತ್ರಾ ಮಹೋತ್ಸವವು ನಗರದ ಸಾಂಸ್ಕೃತಿಕ ಹಾಗೂ ಧಾರ್ಮಿಕ ವೈಭವವನ್ನು ಪ್ರತಿಬಿಂಬಿಸುವಂತೆ ನೆರವೇರಿತು.