ಹಾವೇರಿ: ರಾಜ್ಯ ಕಾಂಗ್ರೆಸ್‌ ಸರ್ಕಾರ ಹಾವೇರಿಯಲ್ಲಿ ನಡೆಸಿದ್ದು, ಒಂದು ಸಾವಿರ ದಿನಗಳ ಸಂಭ್ರಮ ಅಲ್ಲ. ಅದು ಸುಳ್ಳುಗಳ ಸರಮಾಲೆಯ ಸಂಭ್ರಮ. ಒಂದು ಸಾವಿರ ದಿನದಲ್ಲಿ ಮಾಡಿರುವ ಭ್ರಷ್ಟಾಚಾರವನ್ನು ವೈಭವೀಕರಿಸುವ ಸಂಭ್ರಮ. ಅಭಿವೃದ್ಧಿ ಶೂನ್ಯ ಸಂಭ್ರಮ, ಆರ್ಥಿಕ ದಿವಾಳಿಯ ಸಂಭ್ರಮದ ಕಾರ್ಯಕ್ರಮ ಎಂದರೆ ತಪ್ಪಾಗಲಾರದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಕ್ರಮ ಸಕ್ರಮ ಮನೆ ಕಟ್ಟಿಕೊಂಡವರಿಗೆ, ಸರ್ಕಾರಿ ಜಮೀನು ಉಳುಮೆ ಮಾಡಿದರೆ, ಬಗರ್ ಹುಕುಂ ಮಾಡಿಕೊಂಡರಿಗೆ ಹಕ್ಕು ಪತ್ರ ಕೊಡಲಿ. ಆದರೆ ಪೌತಿ ಖಾತೆಗಳಿಗೆ ಹಕ್ಕು ಪತ್ರ ಕೊಟ್ಟಿದ್ದಾರೆ. ಹಿರೇಕೆರೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ಸತ್ತವರ ಹೆಸರಲ್ಲಿ ಪಟ್ಟಾ, ಇ ಸ್ವತ್ತು ಪತ್ರಗಳನ್ನು ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆಯಾಗಲಿ. ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಶಾಸಕರು ಮಾಡಬೇಕಾದ ಕೆಲಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಡೀ ಸರ್ಕಾರ ಬಂದಿರುವುದು ಹಾಸ್ಯಾಸ್ಪದ ಎಂದು ಹೇಳಿದರು.

ಇ ಸ್ವತ್ತು, ಹಕ್ಕು ಪತ್ರಗಳನ್ನು ಕೊಡುವಲ್ಲಿ ಅಧಿಕಾರಿಗಳು ಫಲಾನುಭವಿಗಳಿಂದ ಹಣ ಪಡೆದಿದ್ದಾರೆ. ಕನಿಷ್ಠ 5ರಿಂದ 10 ಸಾವಿರ ರು. ವಸೂಲಿ ಮಾಡಿದ್ದಾರೆ. ಹಾನಗಲ್ಲ ತಾಲೂಕು ಹಾವಣಗಿ ಗ್ರಾಪಂ ವ್ಯಾಪ್ತಿಯೊಂದರಲ್ಲಿ 40 ಜನ ಕರೆದುಕೊಂಡು ಬರಲಿಕ್ಕೆ 5 ಬಸ್‌ಗಳು ಹೋಗಿವೆ. ಜತೆಗೆ ಶಾಲೆ ಬಸ್‌ಗಳನ್ನೂ ತಗೊಂಡಿದ್ದಾರೆ. ಶಾಲಾ ಬಸ್ ಪಡೆದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಶಾಲಾ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಸರ್ಕಾರಿ ಅಧಿಕಾರಿ, ಸ್ಥಳೀಯ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಂಡು ಸಮಾವೇಶ ಮಾಡಿದ್ದಾರೆಂದು ಆರೋಪಿಸಿದರು.ಅಮಾನತ್ತಿಗೆ ಆಗ್ರಹ: ರಟ್ಟೀಹಳ್ಳಿ ಪ್ರವಾಸಿ ಮಂದಿರ ಕಾಮಗಾರಿ ಅಪೂರ್ಣವಾಗಿದೆ. ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಮುಗಿದಿಲ್ಲ. ಪ್ಲೋರಿಂಗ್, ಸೀಲಿಂಗ್, ಕಿಟಕಿ ಬಾಗಿಲು, ಪೇಂಟಿಂಗ್ ಏನೂ ಆಗಿಲ್ಲ. ಶೇ.75ರಷ್ಟು ಕೆಲಸ ಹಾಗೆಯೇ ಇದೆ. ಈಗಾಗಲೇ ಶನಿವಾರದ ಸಮಾವೇಶದಲ್ಲಿ ಸರ್ಕಾರ ಬಿದ್ದು ಹೋಗುವ ಆತಂಕದಲ್ಲಿ ಸಿಎಂ ಸಿದ್ದರಾಮಯ್ಯ ತರಾತುರಿಯಲ್ಲಿ ಉದ್ಘಾಟನೆ ಮಾಡಿರುವ ಅನುಮಾನವಿದೆ. ಜಿಲ್ಲಾಧಿಕಾರಿ, ಪಿಡಬ್ಲೂಡಿ ಅಧಿಕಾರಿಗಳ ವೈಫಲ್ಯ ಎದ್ದುಕಾಣುತ್ತಿದೆ. ಅಧಿಕಾರಿಗಳು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು, ಪಿಡಬ್ಲೂಡಿ ಎಂಜಿನಿಯರ್‌ನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.ಸರ್ಕಾರದ ಸಮಾವೇಶಕ್ಕೆ ಸುಮಾರು 20 ಕೋಟಿ ಖರ್ಚು ಮಾಡಿದ್ದಾರೆ. ಮೆಕ್ಕೆಜೋಳ ಬೆಳೆದ ರೈತರು ಬೆಂಬಲ ಬೆಲೆ ಸಿಗದೆ ಒದ್ದಾಡುತ್ತಿದ್ದಾರೆ. ಅತಿವೃಷ್ಟಿ, ವಿಮಾ ಪರಿಹಾರ ಬಾರದೆ ನರಳಾಡುತ್ತಿದ್ದಾರೆ. ಸಾಲದ ಸುಳಿಯಲ್ಲಿ ಸಿಕ್ಕು ರೈತರು ಸಾಲುಸಾಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರ ರೈತರ ನೆರವಿಗೆ ಬಾರದೆ, ಆತ್ಮಹತ್ಯೆ ಮಾಡಿಕೊಂಡ ರೈತರ ತಿಥಿ ಮಾಡಿದ್ರಾ ಎನ್ನುವಂಥ ಅನುಮಾನ ಬರುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಗವಿಸಿದ್ದಪ್ಪ ದ್ಯಾಮಣ್ಣನವರ, ಸಂತೋಷ ಆಲದಕಟ್ಟಿ, ಸಿದ್ದಣ್ಣ ಚಿಕ್ಕಬಿದರಿ, ನಿರಂಜನ್ ಹೇರೂರ, ವಿಜಯಕುಮಾರ ಚಿನ್ನಿಕಟ್ಟಿ ಇದ್ದರು.ಪರಿಹಾರಕ್ಕೆ ಒತ್ತಾಯ: ಹಾವೇರಿಯಲ್ಲಿ ನಡೆದ ಸಮಾವೇಶದಲ್ಲಿ ವರದಿಗಾಗಿ ತೆರಳಿದ್ದ ಖಾಸಗಿ ವಾಹಿನಿಯ ಕ್ಯಾಮೆರಾಮೆನ್ ಮಲ್ಲೇಶ ಕಬ್ಬೂರ ಮೇಲೆ ಪೆಂಡಾಲ್ ಬಿದ್ದು, ಗಾಯ ಆಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಘಟನೆಯಾಗಿದೆ. ಕಾಂಗ್ರೆಸ್ ಸರ್ಕಾರ ಮಾಧ್ಯಮದವರಿಗೂ ಕಾಳಜಿ ತೋರಿಸಿಲ್ಲ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಗಾಯಗೊಂಡ ಕ್ಯಾಮರಾಮೆನ್‌ಗೆ ಪರಿಹಾರ ಕೊಡಬೇಕೆಂದು ಮಾಜಿ ಸಚಿವ ಬಿ.ಸಿ. ಪಾಟೀಲ ಒತ್ತಾಯಿಸಿದರು.ರಾಣಿಬೆನ್ನೂರು ತಾಲೂಕಿನಲ್ಲಿ ದುಡ್ಡು ಕೊಟ್ಟಿದ್ದನ್ನು ಎಲ್ಲಾದರೂ ಹೇಳಿದರೆ ನಿನಗೆ ಪಟ್ಟಾ ಕೊಡಲ್ಲ ಎಂದು ಫಲಾನುಭವಿಗಳಿಗೆ ಬೆದರಿಕೆ ಹಾಕಿ ಕಾರ್ಯಕ್ರಮಕ್ಕೆ ಕರೆತಂದಿದ್ದಾರೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ದಾಖಲೆ ಸಮೇತ ಮಾಹಿತಿ ಕೊಡುತ್ತೇನೆ. ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಲೋಕಸಭೆ ಚುನಾವಣೆ ಪರಾಜಿತ ಅಭ್ಯರ್ಥಿ, ಮುಖಂಡರು ಇದ್ದಾರೆ. ಹಾಗಾಗಿ ಅದು ಸರ್ಕಾರಿ ಕಾರ್ಯಕ್ರಮ ಅಲ್ಲ, ಕಾಂಗ್ರೆಸ್ ಪಕ್ಷದ ಸಮಾವೇಶ ಆಗಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಕೆಲವು ಪಟ್ಟಾಗಳ ಆಸ್ತಿ ಕೋರ್ಟಿನಲ್ಲಿ ಸ್ಟೇ ಇವೆ. ಇವರು ಕುಟುಂಬಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡಿದ್ದಾರೆ. ಜನರ ತೆರಿಗೆ ಹಣ ಲೂಟಿ ಹೊಡೆಯುತ್ತಿದ್ದಾರೆ. ಸಿಎಂಗೆ ನಾಚಿಕೆ ಮಾನ ಮರ್ಯಾದೆ ಇದ್ದರೆ ಉತ್ತರ ಕೊಡಬೇಕು. ಎಷ್ಟು ಫಲಾನುಭವಿಗಳು ಇದ್ದರು, ಎಷ್ಟು ಬಸ್ ಬಿಟ್ಟಿದ್ದೀರಿ ಎಂಬ ಬಗ್ಗೆ ಮಾಹಿತಿ ಕೊಡಬೇಕು. ಸರ್ಕಾರ ಖರ್ಚು ಮಾಡಿರುವುದು ಜನರ ತೆರಿಗೆ ಹಣ. ನಾವು ಲೆಕ್ಕ ಕೇಳುತ್ತೇವೆ. ಜನರನ್ನು ಕರೆತರಲೆಂದು ಹೋದ ಬಸ್‌ ಖಾಲಿ ಬಂದಿವೆ. ಇದಕ್ಕೆಲ್ಲ ಯಾರ ದುದ್ದು ಖರ್ಚು ಮಾಡಿದ್ದೀರಿ ಎಂಬುದನ್ನು ತಿಳಿಸಬೇಕು ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.