ಸಾರಾಂಶ
ದಾಬಸ್ಪೇಟೆ: ಗ್ಯಾರಂಟಿಗಳಿಗಾಗಿ ಹಾಲು, ಮದ್ಯ, ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡಿ ಜನರಿಗೆ ಸಂಕಷ್ಟವನ್ನುಂಟು ಮಾಡಿರುವ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.
ಬಾವಿಕೆರೆ ಗ್ರಾಮದ ಸಮೀಪ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನೂತನ ಸಂಸದ ಡಾ.ಕೆ.ಸುಧಾಕರ್ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಬಿಸಿ ತುಪ್ಪವಾಗಿದ್ದು, ಗ್ಯಾರಂಟಿ ಫಲಾನುಭವಿಗಳಲ್ಲಿ ಶೇ.50ರಷ್ಟು ಕಡಿಮೆ ಮಾಡಲು ಸಿದ್ದರಾಗಿದ್ದಾರೆ. 900 ಕೋಟಿ ಹಾಲಿನ ಪ್ರೋತ್ಸಾಹ ಧನ ರೈತರಿಗೆ ನೀಡಿಲ್ಲ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 143 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಹುಮತ ಬಂದಿದೆ. ಈಗಲೂ ವಿಧಾನಸಭಾ ಚುನಾವಣೆ ನಡೆದರೆ ನಾವು 143 ಸ್ಥಾನ ಗೆಲ್ಲುತ್ತೇವೆ. ಕಾಂಗ್ರೇಸ್ನವರು ಬೆನ್ನಿಗೆ ಚೂರಿ ಹಾಕಿದ ನಂತರ ದೇವೇಗೌಡರು ಮೈತ್ರಿಗೆ ಜೈ ಎಂದರೂ ಆದರೆ ಮೊದಲೇ ತೀರ್ಮಾನ ಮಾಡಿದ್ದರೆ ಎನ್ಡಿಎ ಸರ್ಕಾರ ಅಧಿಕಾರದಲ್ಲಿ ಇರುತ್ತಿತ್ತು ಎಂದರು.
ನೂತನ ಸಂಸದ ಡಾ.ಕೆ. ಸುಧಾಕರ್ ಮಾತನಾಡಿ, ನನ್ನ ರಾಜಕೀಯ ಜೀವನಕ್ಕೆ ಪುನರ್ಜನ್ಮ ನೀಡಿದ ಜನರಿಗೆ ನಾನು ಅಭಿನಂದನೆ ಸಲ್ಲಿಸಬೇಕಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಜೀವನದ ಜೊತೆ ಆಟವಾಡುತ್ತಿದೆ. ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದೇನೆ. ದೇಶದಲ್ಲಿ ಪುಷ್ಪ ಮಂಡಳಿ ಇಲ್ಲ ಅದನ್ನು ರಚನೆ ಮಾಡಲು ಮನವಿ ಮಾಡಿದ್ದು, ರಾಜ್ಯದಲ್ಲಿ ಆರಂಭವಾಗಲಿದೆ. ತಾಲೂಕಿನಲ್ಲಿ ಬಿಜೆಪಿ-ಜೆಡಿಎಸ್ ಹಾಲುಜೇನಿನಂತೆ ಬೆರತು ನನ್ನ ಗೆಲುವಿಗೆ ಕಾರಣವಾಗಿದ್ದಾರೆ. ತಮಗೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದು ಹೇಳಿದರು.ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌದರಿ ಮಾತನಾಡಿ, ಕ್ಷೇತ್ರದೆಲ್ಲೆಡೆ ಅತ್ಯಧಿಕ ಮತ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರಂತೆ ಸಂಸದರು ಕ್ಷೇತ್ರದ ಜನರನ್ನು ಭೇಟಿ ಮಾಡಿದ್ದಾರೆ. ಜೆಡಿಎಸ್ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಸರಿ ಸಮನಾಗಿ ಕೊಂಡೊಯ್ದಲ್ಲಿ ಮುಂದಿನ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಖಚಿತ. ಸಂಸದರು ಮಾದರಿ ಲೋಕಸಭಾ ಕ್ಷೇತ್ರವನ್ನಾಗಿ ಮಾಡಬೇಕಿದೆ ಎಂದರು.
ಸಂಸದರಿಗೆ ಬೆಳ್ಳಿಗದೆ:ಕಾರ್ಯಕ್ರಮದಲ್ಲಿ ಜಕ್ಕನಹಳ್ಳಿ ರಂಗನಾಥ್ ಬಾಬು ಹಾಗೂ ಪತ್ನಿ ಬಿಂದು ರಂಗನಾಥ್ ನೂತನ ಸಂಸದ ಡಾ.ಕೆಸುಧಾಕರ್ ಅವರಿಗೆ ಬೆಳ್ಳಿಗದೆಯನ್ನು ನೀಡಿ ಅಭಿನಂದಿಸಿದರು.
ಸಂಸದರಿಗೆ ಮನವಿ: ನಗರಕ್ಕೆ ಮೆಟ್ರೋ ವಿಸ್ತರಣೆ, ವಾಹನ ದಟ್ಟಣೆ ನಿವಾರಣೆಗೆ ಹೆದ್ದಾರಿಅಗಲೀಕರಣ, ಶಿವಗಂಗೆ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ, ಮಾಗಡಿ ತಾಲೂಕು ರಾಮನಗರ ಜಿಲ್ಲೆ ವ್ಯಾಪ್ತಿಯ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕು ವ್ಯಾಪ್ತಿಗೆ ಸೇರಿಸುವುದು, ಕ್ಷೇತ್ರದ ರೈತರಿಗೆ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡುವಂತೆ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಸಂಸದರಿಗೆ ಮನವಿ ಮಾಡಿದರು.ಬೈಕ್ ರ್ಯಾಲಿ: ನೆಲಮಂಗಲ ಕಾಲೋನಿಯಿಂದ ಕುಣಿಗಲ್ ಬೈಪಾಸ್ ಮೂಲಕ ಬಾವಿಕೆರೆಯ ಸಮಾರಂಭದ ವೇದಿಕೆಯವರೆಗೂ 150ಕ್ಕೂ ಹೆಚ್ಚು ಬೈಕ್ಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕಾರ್ಯಕರ್ತರು ರ್ಯಾಲಿ ಮಾಡಿದರು. ರ್ಯಾಲಿಯಲ್ಲಿ ಆರ್.ಅಶೋಕ್, ಸಂಸದ ಡಾ.ಕೆ.ಸುಧಾಕರ್, ಮಾಜಿ ಶಾಸಕರಾದ ಎಂ.ವಿ ನಾಗರಾಜು, ಡಾ.ಕೆ.ಶ್ರೀನಿವಾಸಮೂರ್ತಿ, ಮುಖಂಡ ಸಪ್ತಗಿರಿ ಶಂಕರ್ನಾಯಕ್, ಹೊಂಬಯ್ಯ, ಜಕ್ಕನಹಳ್ಳಿಬಾಬು ಮತ್ತಿತರರಿದ್ದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕರಾದ ಎಂ.ವಿ.ನಾಗರಾಜು, ಡಾ.ಕೆ.ಶ್ರೀನಿವಾಸಮೂರ್ತಿ, ಇ.ಕೃಷ್ಣಪ್ಪ, ಮುಖಂಡರಾದ ಸಪ್ತಗಿರಿ ಶಂಕರ್ ನಾಯಕ್, ಭವಾನಿಶಂಕರ್, ಬೈರೇಗೌಡ, ವೇಣುಗೋಪಾಲ್, ನಗರ ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌದರಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಜಕ್ಕನಹಳ್ಳಿಬಾಬು, ಸತೀಶ್, ಸುರೇಶ್, ಮಹಿಳಾ ಅಧ್ಯಕ್ಷೆ ಮಂಜುಳಾ ಸುರೇಶ್, ಲೀಲಾಕುಮಾರ್ ಭಾಗವಹಿಸಿದ್ದರು.ಪೋಟೋ 11 :
ನೆಲಮಂಗಲ ಸಮೀಪದ ಬಾವಿಕೆರೆ ಗ್ರಾಮದ ಸಮೀಪ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ನೂತನ ಸಂಸದ ಡಾ.ಕೆ.ಸುಧಾಕರ್ ಅವರಿಗೆ ಜಕ್ಕನಹಳ್ಳಿ ರಂಗನಾಥ್ ಬಾಬು ಹಾಗೂ ಮುಖಂಡರು ಬೆಳ್ಳಿಗದೆ ನೀಡಿ ಅಭಿನಂದಿಸಿದರು.