ಸಾರಾಂಶ
ಹುಬ್ಬಳ್ಳಿ: ಭ್ರಷ್ಟಾಚಾರ ಎಲ್ಲ ಸಮಾಜ ಮತ್ತು ದೇಶಕ್ಕೆ ಅಂಟಿದ ರೋಗವಾಗಿದ್ದು, ಅದರ ನಿರ್ಮೂಲನೆ ಆಗಬೇಕು ಎಂದರೆ ಯಾರು ಜಾತಿ ಲೇಪನ ಮಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರಕ್ಕೆ ಯಾವುದೇ ಜಾತಿ ಎಂಬುದಿಲ್ಲ. ಇದು ಎಲ್ಲ ಸಮಾಜ ಮತ್ತು ದೇಶಕ್ಕೆ ಅಂಟಿದ ಪಿಡುಗಾಗಿದೆ. ಹಾಗಾಗಿ, ಇದರ ವಿರುದ್ಧ ಹೋರಾಟಕ್ಕಿಳಿದರೆ ಯಾರೂ ಜಾತಿಯ ನೆಪವನ್ನು ಮುಂದಿಡಬಾರದು ಎಂದು ಕಾಂಗ್ರೆಸಿಗರಿಗೆ ಕಿವಿಮಾತು ಹೇಳಿದರು.ಮುಡಾ ಹಗರಣದಲ್ಲಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಹಿಂದ ವರ್ಗವರು ಜಾತಿ ಲೇಪನ ಹಚ್ಚಿ ಬೀದಿಗಿಳಿದು ಹೋರಾಡುವುದು ಸರಿಯಲ್ಲ. ರಾಜ್ಯಪಾಲರು ಅತ್ಯಂತ ಹಿಂದುಳಿದ, ಎಸ್ಸಿ ಸಮಾಜಕ್ಕೆ ಸೇರಿದವರು. ಅಂಥವರ ವಿರುದ್ಧ ಬೀದಿಗಿಳಿಯುವುದು ಕಾಂಗ್ರೆಸಿಗೆ ಶೋಭೆ ತರದು ಎಂದರು.
ಕಾಂಗ್ರೆಸ್ ಭ್ರಷ್ಟಾಚಾರದ ಜನಕದೇಶದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಜನಕ. ನೆಹರು ಕಾಲದಿಂದ ಮನಮೋಹನ್ ಸಿಂಗ್ ಕಾಲದ ವರೆಗೂ ಕಾಂಗ್ರೆಸ್ ಭ್ರಷ್ಟಾಚಾರವನ್ನು ಪೋಷಿಸಿಕೊಂಡು ಬಂದಿದೆ. ಹಾಗಾಗಿ, ಈಗ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ, ಬೆಂಬಲಕ್ಕೆ ನಿಂತಿದ್ದು, ಇದರಲ್ಲಿ ಆಶ್ಚರ್ಯ ಏನಿಲ್ಲ ಎಂದರು.
ರಾಜೀನಾಮೆ ನೀಡಲಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ. ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಸ್ವತಃ ನೀವೇ ಸಿಎಂ ಆಗಿರುವಾಗ ಸ್ಥಳೀಯ ಅಧಿಕಾರಿಗಳು ತನಿಖೆ ಹೇಗೆ ಮಾಡಿಯಾರು? ಎಂದು ಪ್ರಶ್ನಿಸಿದ ಜೋಶಿ, ಮುಖ್ಯಮಂತ್ರಿ ಆರೋಪ ಮುಕ್ತರಾಗುವ ತನಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಜೋಶಿ ಒತ್ತಾಯಿಸಿದರು.