ರಾಮನಗರ: ಉಪಚುನಾವಣೆಯಲ್ಲಿ ಎಲ್ಲಿ ವ್ಯತ್ಯಾಸವಾಗಿದೆ ಎಂಬುದನ್ನು ಕಾಂಗ್ರೆಸ್ ವರಿಷ್ಠರು ಪರಿಶೀಲನೆ ಮಾಡುತ್ತಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ. ಅದರ ಬಗ್ಗೆ ವರಿಷ್ಠರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಾಲಕೃಷ್ಣ, ಉಪಚುನಾವಣೆಯಲ್ಲಿ ಕೆಲವರಿಗೆ ನೋವಾಗಿದೆ. ಹಾಗಾಗಿ ಅವರ ಅಭಿಪ್ರಾಯ ಹೇಳಿಕೊಳ್ಳುತ್ತಿದ್ದಾರೆ ಅಷ್ಟೆ. ವರಿಷ್ಠರು ಅಂತಿಮವಾಗಿ ತೀರ್ಮಾನಿಸುತ್ತಾರೆ. ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತರ ಶಕ್ತಿ ಇದೆ ಎಂಬುದನ್ನ ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಸಾರಾಸಗಟಾಗಿ ಅಲ್ಪಸಂಖ್ಯಾತರು ನಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ. ಅಲ್ಪಸಂಖ್ಯಾತರ ಜೊತೆಗೆ ಅಹಿಂದ, ಒಕ್ಕಲಿಗ, ಲಿಂಗಾಯತರು ಕೂಡ ಬೆಂಬಲಿಸಿದ್ದಾರೆ. ಆದರೆ, ಮೇಜರ್ ಆಗಿ ಅಲ್ಪಸಂಖ್ಯಾತರ ಬೆಂಬಲ ಇದೆ ಎಂದು ಹೇಳಿದರು.ಮುಖ್ಯಮಂತ್ರಿಗಳು ಅಸಹಾಯಕರಾಗಿದ್ದಾರೆ ಎಂಬ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣರವರು, ಈ ವಿಚಾರವಾಗಿ ರಾಜಣ್ಣ ಅವರನ್ನೇ ಕೇಳಬೇಕು. ನಮಗಂತೂ ಹಾಗನಿಸಿಲ್ಲ. ಮುಖ್ಯಮಂತ್ರಿಗಳಿಗೆ ಶಕ್ತಿ ಇದೆ. ಅವರು ಕೆಲಸ ಮಾಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿಗಳ ವಿರುದ್ಧ ಮಾಟಮಂತ್ರದ ಪ್ರಯೋಗ ಮಾಡಿದ್ದಾರಂತಲ್ಲ ಎಂಬ ಪ್ರಶ್ನೆಗೆ ಇದನ್ನು ರಾಜಣ್ಣನವರು ಸಿಬಿಐ ತನಿಖೆಗೆ ಕೊಡಿಸಿದರೆ ಗೊತ್ತಾಗುತ್ತದೆ. ಯಾರ್ಯಾರು ಮಾಟಮಂತ್ರ ಮಾಡಿಸಿದ್ದಾರೆ ಅಂತ ತನಿಖೆ ಆಗಲಿ. ಸಿಬಿಐ ತನಿಖೆಗೆ ರಾಜಣ್ಣನವರು ಕೇಂದ್ರ ಸರ್ಕಾರಕ್ಕೆ ಅರ್ಜಿ ಕೊಡಲಿ. ನನಗಂತು ಮಾಟ-ಮಂತ್ರದ ಬಗ್ಗೆ ನಂಬಿಕೆನೂ ಇಲ್ಲ, ಆ ವ್ಯವಸ್ಥೆ ಬಗ್ಗೆ ನಮಗೆ ಗೊತ್ತೂ ಇಲ್ಲ ಎಂದು ಬಾಲಕೃಷ್ಣ ಹೇಳಿದರು.23ಕೆಆರ್ ಎಂಎನ್ 2.ಜೆಪಿಜಿ
ಶಾಸಕ ಬಾಲಕೃಷ್ಣ.