ಶಿಕ್ಷಕ ಸಂಘಟನೆ ಸರ್ವಾಧಿಕಾರಿ ಧೋರಣೆಯ ತತ್ವಗಳಿಂದ ಮುಕ್ತ

| Published : Jan 20 2024, 02:01 AM IST

ಸಾರಾಂಶ

ಆಲಮಟ್ಟಿ ಎಚ್‌ಪಿಎಸ್ ಶಾಲೆಯಲ್ಲಿ ನಡೆದ ಬೆಳಗಾವಿ ವಿಭಾಗಮಟ್ಟದ ವಿವಿಧ ಹಂತದ ನೂತನ ಪದಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಪ್ರಮಾಣಪತ್ರ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಇನ್ನುಳಿದ ಸಂಘಟನೆಗಳಿಗಿಂತ ಶಿಕ್ಷಕ ಸಂಘಟನೆ ಸಂಪೂರ್ಣ ಭಿನ್ನವಾಗಿದ್ದು, ಸರ್ವಾಧಿಕಾರಿ ಧೋರಣೆಯ ತತ್ವಗಳಿಂದ ಮುಕ್ತವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅಭಿಪ್ರಾಯಪಟ್ಟರು.

ಇಲ್ಲಿಯ ಎಚ್‌ಪಿಎಸ್ ಶಾಲೆಯಲ್ಲಿ ನಡೆದ ಬೆಳಗಾವಿ ವಿಭಾಗಮಟ್ಟದ ವಿವಿಧ ಹಂತದ ನೂತನ ಪದಾಧಿಕಾರಿಗಳಿಗೆ ಪ್ರಮಾಣಪತ್ರ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯ ಶಿಕ್ಷಕ ಸಂಘಟನೆ ಸದಾ ಶಿಕ್ಷಕರ ಏಳಿಗೆಗೆ ಕಾರ್ಯನಿರ್ವಹಿಸುತ್ತದೆ. ನಿಡಗುಂದಿ ತಾಲೂಕಿನಲ್ಲಿಯೂ ಶಿಕ್ಷಕ ಸಂಘಟನೆ ಹೊಸ ಹೊಸ ಕಾರ್ಯಚಟುವಟಿಕೆಗಳಿಂದ ಶಿಕ್ಷಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ಶಿಕ್ಷಕ ಸಂಘಟನೆಯ ನಿರಂತರ ಪ್ರಯತ್ನದ ಫಲವಾಗಿ 2005ರಲ್ಲಿ ಅಧಿಸೂಚಿತಗೊಂಡು 2007ರಲ್ಲಿ ನೌಕರಿಗೆ ಸೇರಿದ 11,000 ಕ್ಕೂ ಅಧಿಕ ನೌಕರರಿಗೆ ಎನ್‌ಪಿಎಸ್ ನಿಂದ ಹಳೆ ಪಿಂಚಣಿ ವ್ಯವಸ್ಥೆಗೆ ರಾಜ್ಯ ಸರ್ಕಾರ ಒಪ್ಪಿದೆ. ಅದಕ್ಕಾಗಿ ನಡೆಸಿದ ಪ್ರಯತ್ನ ಹಾಗೂ ಹೋರಾಟವನ್ನು ವಿವರಿಸಿದರು. ಎಲ್ಲ ನೌಕರರಿಗೂ ಹಳೆ ಪಿಂಚಣಿ ವ್ಯವಸ್ಥೆ ಕೊಡಿಸುವುದು, 7ನೇ ವೇತನ ಆಯೋಗದಲ್ಲಿ ಶಿಕ್ಷಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವುದು, ಪಿಎಸ್‌ಟಿ ಶಿಕ್ಷಕರ ಪದೋನ್ನತಿ ಸಮಸ್ಯೆ ಬಗೆಹರಿಸುವುದು ನಮ್ಮ ಸಂಘದ ಮುಂದಿರುವ ಗುರಿ. ಈಗ ನಾಮನಿರ್ದೇಶನಗೊಂಡ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಿಕ್ಷಕರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ತಿಳಿಸಿದರು.

ಸಂಘಟನೆಯ ನಿಡಗುಂದಿ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್.ಮುಕಾರ್ತಿಹಾಳ, ಪ್ರಧಾನ ಕಾರ್ಯದರ್ಶಿ ಸಲಿಂ ದಡೆದ ಮಾತನಾಡಿ, ತಾಲೂಕು ಘಟಕದ ವತಿಯಿಂದ ತಾಲೂಕಿನ ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆದಾಯ ತೆರಿಗೆಯ ಪ್ರತಿ ವರ್ಷ ನೀಡಲಾಗುತ್ತಿದೆ. ಗುರುತಿನ ಕಾರ್ಡ್‌ ನೀಡಲಾಗಿದೆ. ಕುಟುಂಬದ ಪ್ರತಿಯೊಬ್ಬರ ಮಾಹಿತಿಯನ್ನು ಎಚ್‌ಆರ್‌ಎಂಎಸ್ ತತ್ರಾಂಶದಲ್ಲಿ ಸೇರಿಸಿ ಪ್ರತಿಯೊಬ್ಬ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿಯ ಸ್ಮಾರ್ಟ್‌ಕಾರ್ಡ್‌ ನೀಡಲಾಗುತ್ತದೆ ಎಂದರು.

ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಕಮತ, ಆರ್.ಬಿ.ಗೌಡರ, ಬಿ.ಎಸ್.ಯರವಿನತೆಲಿಮಠ, ಎಂ.ಆರ್. ಮಕಾನದಾರ್, ಎಂ.ಜಿ.ಪೂಜಾರ, ಎಂ.ಎಂ.ಮುಲ್ಲಾ, ಬಿ.ಸಿ.ನದಾಫ್, ಎಸ್.ಎಂ.ಪಾಟೀಲ, ನಾಗರಾಜ ಬಸರಕೋಡ, ಮುತ್ತು ಯಳಮೇಲಿ, ಮುತ್ತುರಾಜ ಹೆಬ್ಬಾಳ, ಪ್ರಕಾಶ ಇಜೇರಿ, ಭಾಷಾಸಾಬ್ ಮನಗೂಳಿ, ಸುರೇಶ ಹುರಕಡ್ಲಿ, ಎಚ್.ಡಿ.ನದಾಫ್, ಎಸ್.ಎಂ.ಪಾಟೀಲ, ಪ್ರಭಾಕರ ಹೆಬ್ಬಾಳ, ರಾಜು ಹಲಗಿ, ಮಲ್ಲಿಕಾರ್ಜುನ ವಾಲಿ ಇತರರು ಇದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ವಿಭಾಗದ ವಿವಿಧ ಪದಾಧಿಕಾರಿಗಳ ನೇಮಕ ಆದೇಶ ನೀಡಿ ಗೌರವಿಸಲಾಯಿತು.

ನೇಮಕ:

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ವಿಭಾಗೀಯ ಉಪಾಧ್ಯಕ್ಷ ಎಂ.ಆರ್.ಮಕಾನದಾರ್, ವಿ.ಕೆ.ಮಸೂತಿ, ಲಲಿತಾ ಸಂಖ, ಎಚ್.ಡಿ.ಮಾದರ, ಪವಾಡೆಪ್ಪ ಚಲವಾದಿ.

ಬೆಳಗಾವಿ ವಿಭಾಗೀಯ ಸಹಕಾರ್ಯದರ್ಶಿ ಬಸಮ್ಮ ಪೂಜಾರಿ, ಬಸವರಾಜ ಚಿಂಚೋಳಿ, ಕೆ.ಎಂ. ಗುಡದಿನ್ನಿ.

ಬೆಳಗಾವಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ವಾಸುದೇವ ಸುಲಾಖೆ, ಸಿ.ಎಸ್.ಬಾವಿಕಟ್ಟಿ.

ಬೆಳಗಾವಿ ವಿಭಾಗದ ಮಾಧ್ಯಮ ಸಂಚಾಲಕ ಆನಂದ ಗೌಡರ.

ನಿಡಗುಂದಿ ತಾಲೂಕು ಘಟಕದ ಗೌರವ ಅಧ್ಯಕ್ಷ ಬಿ.ಎಸ್.ಯರವಿನತೆಲಿಮಠ