ಸಾರಾಂಶ
ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ - ರಕ್ಷಕ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಬಸ್ರೂರು ನಿವೇದಿತಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ದಿನಕರ ಆರ್. ಶೆಟ್ಟಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉದ್ಯಾವರ
ಕಾಲುಸಂಕವನ್ನು ದಾಟಲು ಹೆದರಿದ ಮಗುವಿನ ತಂದೆ ಅದರ ಕೈಯನ್ನು ಹಿಡಿದಾಗ ಅದು ಧೈರ್ಯದಿಂದ ದಾಟುತ್ತದೆ. ಹೀಗೆ ಮಕ್ಕಳ ಪ್ರತಿ ನಡೆಯಲ್ಲೂ ಹೆತ್ತವರ ಬಿಗಿ ಹಿಡಿತ ಅವರ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಬಸ್ರೂರು ನಿವೇದಿತಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ದಿನಕರ ಆರ್. ಶೆಟ್ಟಿ ಅಭಿಪ್ರಾಯಪಟ್ಟರು.ಅವರು ಇಲ್ಲಿನ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ - ರಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಶಾಲಾ ವಿದ್ಯಾರ್ಥಿಗಳ ಹೆತ್ತವರನ್ನು ಉದ್ದೇಶಿಸಿ ಈ ಮಾತನ್ನಾಡಿದರು.
ಶಾಲಾ ಆಡಳಿತ ಮಂಡಳಿಯ ಸಂಚಾಲಕ ಸುರೇಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ಕಾರಂತ, ಸದಸ್ಯರಾದ ಕೃಷ್ಣಕುಮಾರ್ ರಾವ್ ಮಟ್ಟು, ಉದ್ಯಾವರ ನಾಗೇಶ್ ಕುಮಾರ್, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ಸಂಧ್ಯಾ ವಾಸು, ಉಪಾಧ್ಯಕ್ಷೆ ಜ್ಯೋತಿ ರವೀಂದ್ರ ಶೆಟ್ಟಿ, ಕಾರ್ಯದರ್ಶಿ ಹೇಮಲತಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.ಶಾಲಾ ಶಿಶು ವಿಕಾಸ ಕೇಂದ್ರದ ಮಕ್ಕಳ ಉಪಯೋಗಕ್ಕಾಗಿ ನವೀನ್ ಅಮೀನ್ ಉದ್ಯಾವರ ನೀಡಿದ ಕುರ್ಚಿಗಳನ್ನು ಸ್ವೀಕರಿಸಿ ಅವರನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮುಖ್ಯಶಿಕ್ಷಕಿ ರತಿ ಸ್ವಾಗತಿಸಿದರು. ಸಹಶಿಕ್ಷಕಿ ಅನುರಾಧಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಸುಜಾತ ಶೆಟ್ಟಿ ವಂದಿಸಿದರು.