ಸಾರಾಂಶ
ಶಿಡ್ಲಘಟ್ಟ: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಜನವರಿ ೨೨ ರಂದು ನಡೆಯಲಿದೆ ಆ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಲ್ಲೂ ಮನೆ ಮನೆಗೆ ಮಂತ್ರಾಕ್ಷತೆ ಹಾಗೂ ಶ್ರೀರಾಮಚಂದ್ರನ ಪೊಟೋ ಕ್ಯಾಲೆಂಡರ್ ನೀಡಿ ಮನೆಗಳ ಮುಂದೆ ರಂಗೋಲಿ ಬಿಡಿಸಿ ಉತ್ತರದ ಕಡೆ ದೀಪ ಬೆಳಗಿ ಶ್ರೀ ರಾಮ ಚಂದ್ರನನ್ನು ಮನೆಗಳಿಗೆ ಬರಮಾಡಿಕೊಳ್ಳಬೇಕೆಂದು ಮಾಜಿ ಸಚಿವ ಡಾ ಕೆ. ಸುಧಾಕರ್ ಹೇಳಿದರು. ನಗರದ ಬಿಜೆಪಿಯ ಸೇವಾ ಸೌಧ ಕಛೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯನ್ನು ದೀಪಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಮರಾಜ್ಯದ ಕನಸು ನನಸಾಗುವ ಸಮಯ ಬಂದಿದೆ. ನಮ್ಮ ಕಾಲಘಟ್ಟದಲ್ಲಿ ದೇವಾಲಯ ನಿರ್ಮಾಣವಾಗಿ ಪ್ರಾಣ ಪ್ರತಿಷ್ಟಾಪನೆ ನೋಡಲಿರುವ ನಾವೆಲ್ಲರೂ ಪುಣ್ಯವಂತರು ಎಂದರು.
ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ ಮಾತನಾಡಿ ಹಿಂದೂ ಧರ್ಮವನ್ನು ನಾವೆಲ್ಲರೂ ಉಳಿಸುವ ಕೆಲಸ ಮಾಡಬೇಕು. ಮೋದಿಜಿಯವರ ದೇಶ ಪ್ರೇಮ ಹಾಗೂ ಅವರ ಅವಧಿಯಲ್ಲಾಗಿರುವ ಅಭಿವೃದ್ದಿ, ಜನಪರ ಕಾರ್ಯಕ್ರಮಗಳು, ಯೋಜನೆಗಳ ಬಗ್ಗೆ ತಿಳಿಸಲು ಸಮಯ ಸಾಕಾಗುವುದಿಲ್ಲ. ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ನೋಡಲು ದೇಶ ಕಾಯುತ್ತಿದೆ ಎಂದರು.ಮೋದಿಯವರು ಈಗಾಗಲೇ ದೇವಾಲಯಗಳ ಸ್ವಚ್ಛಗೊಳಿಸಲು ಕರೆ ನೀಡಿದ್ದಾರೆ ಜ. ೨೨ ರ ದಿನವನ್ನು ಹಬ್ಬದಂತೆ ವಿಜೃಂಭಣೆಯಿಂದ ಆಚರಿಸಬೇಕು ಶ್ರೀರಾಮನ ಪ್ಲೆಕ್ಸ್ ಹಾಗೂ ಬಂಟಿಂಗ್ ಎಲ್ಲಾ ವ್ಯವಸ್ಥೆಯನ್ನು ನಮ್ಮ ಟ್ರಸ್ಟಿನಿಂದ ಮಾಡಿಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಜಿಲ್ಲಾ ಬಿಜೆಪಿ ವಕ್ತಾರ ರಮೇಶ್ ಬಾಯರಿ, ಮಾಜಿ ಶಾಸಕ ಎಂ ರಾಜಣ್ಣ, ತಾಲ್ಲೂಕು ಮಂಡಲ ಅಧ್ಯಕ್ಷ ಸುರೇಂದ್ರ ಗೌಡ ಮುಖಂಡರಾದ ಆನಂದ ಗೌಡ , ಪಟಾಕಿ ಕೇಶವ , ಪುರುಷೋತ್ತಮ್ ಸೇರಿದಂತೆ ಬಿಜೆಪಿ ಮುಖಂಡರು ಭಾಗವಹಿಸಿದ್ದರು.ಸುದ್ದಿ ಚಿತ್ರ ೧...ಶಿಡ್ಲಘಟ್ಟ ನಗರದ ಬಿಜೆಪಿಯ ಸೇವಾ ಸೌಧದಲ್ಲಿ ಶ್ರೀರಾಮಚಂದ್ರನ ಪೊಟೋ ಕ್ಯಾಲೆಂಡರ್ ಅನ್ನು ಮಾಜಿ ಸಚಿವ ಡಾ.ಸುಧಾಕರ್ ವಿತರಿಸಿದ ರು.