ಕನ್ನಡಪ್ರಭ ವಾರ್ತೆ ಮೂಡಲಗಿ
ವಿದ್ಯಾರ್ಥಿಗಳ ಯಶಸ್ಸು ಮತ್ತು ಸಮಾಜದಲ್ಲಿ ಗಳಿಸುವ ಸತ್ಕೀರ್ತಿಯೇ ಶಿಕ್ಷಕರಿಗೆ ಸಿಗುವ ಅತೀ ದೊಡ್ಡ ಗುರುದಕ್ಷಿಣೆ ಎಂದು ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಸುರೇಶ ಹನಗಂಡಿ ಹೇಳಿದರು.ಕಲ್ಲೋಳಿ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ 2006-07ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ವರ್ಷಗಳು ಉರುಳಿದರೂ ಶಿಕ್ಷಕರ ಮೇಲಿನ ಗೌರವವನ್ನು ಹಾಗೇ ಉಳಿಸಿಕೊಂಡು ಬಂದು ಇವತ್ತು ಗುರುವಂದನೆ ಸಲ್ಲಿಸಿರುವುದು ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವಿದ್ಯಾರ್ಥಿ ಜೀವನದಲ್ಲಿ ಪ್ರೌಢಶಾಲೆಯ ದಿನಗಳು ಅತ್ಯಂತ ಪ್ರಮುಖವಾದ ಘಟ್ಟ. ಅಂದು ಗುರುಗಳು ಬಿತ್ತಿದ ಜ್ಞಾನದ ಬೀಜ ಇಂದು ಸಮಾಜದಲ್ಲಿ ದೊಡ್ಡ ವೃಕ್ಷವಾಗಿ ಬೆಳೆದು ನಿಂತಿದೆ. ಹಳೆಯ ವಿದ್ಯಾರ್ಥಿಗಳು ತಾವು ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ ತಮಗೆ ಅಕ್ಷರ ಕಲಿಸಿದ ಶಾಲೆ ಮತ್ತು ಊರನ್ನು ಮರೆಯದೆ ಇಂತಹ ಸಮ್ಮಿಲನ ಆಯೋಜಿಸಿರುವುದು ಅವರ ಕೃತಜ್ಞತಾ ಭಾವವನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದರು.ಶಿಕ್ಷಕ ಆರ್.ಪಿ.ಬಾಗೋಜಿ ಮಾತನಾಡಿ, ನಮ್ಮನ್ನು ನೆನಪಿಟ್ಟುಕೊಂಡು ಈ ರೀತಿ ಸತ್ಕರಿಸಿದ ನಿಮ್ಮೆಲ್ಲರ ಪ್ರೀತಿ ಮನಸ್ಸಿಗೆ ತುಂಬ ಖುಷಿ ನೀಡಿದೆ. ನಿಮ್ಮೆಲ್ಲರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.ಶಿಕ್ಷಕಿ ಎಂ.ಎ.ಹೂಗಾರ ಮಾತನಾಡಿ, ಅಂದು ತರಗತಿಯಲ್ಲಿ ನಿಮ್ಮನ್ನು ಗದರಿದಾಗ, ಬೈದಾಗ ನಿಮ್ಮ ಒಳಿತಿಗಾಗಿಯೇ. ಆ ರೀತಿ ಮಾಡಿದ್ದೇವು ಎಂಬುವುದನ್ನು ನೀವು ಮರೆಯದೇ ಇವತ್ತು ಅದೇ ಗುರುಗಳನ್ನು ಪ್ರೀತಿಯಿಂದ ಕರೆದು ಸನ್ಮಾನಿಸಿ, ಗೌರವಿಸಿದ್ದೀರಿ. ನಿಮ್ಮ ಈ ಭಾವನೆ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.ಎಸ್.ಆರ್.ಇ ಸಂಸ್ಥೆಯ ಚೇರಮನ್ ಬಸಗೌಡ ಶಿ.ಪಾಟೀಲ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ಮತ್ತು ಸಂಸ್ಕಾರ ನೀಡಿದ ಗುರುಗಳನ್ನು ನೆನಪಿನಲ್ಲಿಟ್ಟುಕೊಂಡು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಹಳೆಯ ವಿದ್ಯಾರ್ಥಿಗಳ ಈ ಒಗ್ಗಟ್ಟು ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಸುಮಾರು ಎರಡು ದಶಕಗಳ ಬಳಿಕ ಒಂದೆಡೆ ಸೇರಿದ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು ಮತ್ತು ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಗೌರವಪೂರ್ವಕವಾಗಿ ನಮಿಸಿದರು.ಕಾರ್ಯಕ್ರಮದಲ್ಲಿ ಶಾಲೆಯ ಅಂದಿನ ಹಾಗೂ ಇಂದಿನ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರಾದ ಆರ್.ಪಿ.ಬಾಗೋಜಿ, ಎ.ಬಿ.ಉಪ್ಪಿನ, ಎಂ.ಎ.ಹೂಗಾರ, ಎಂ.ಎಂ.ಮಡಿವಾಳರ, ಆರ್.ಪಿ.ಕಂಬಾರ, ದೈಹಿಕ ಶಿಕ್ಷಕ ಬಿ.ಎಂ.ಡಬ್ಬನವರ ಮತ್ತು ಸಿಪಾಯಿ ಎಚ್.ಎಸ್.ನಿರ್ಲಿ ಅವರನ್ನು ಹಳೆಯ ವಿದ್ಯಾರ್ಥಿ ವೃಂದದವರು ಪ್ರೀತಿಪೂರ್ವಕವಾಗಿ ಸತ್ಕರಿಸಿ, ಆಶೀರ್ವಾದ ಪಡೆದರು.ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎ.ಆರ್.ಪಾಟೀಲ, ಹಳೆ ವಿದ್ಯಾರ್ಥಿಗಳಾದ ಶಿವಾನಂದ ಕಮತಿ, ಶ್ರೀಧರ ಪಾಲಬಾಂವಿ, ವಿಠ್ಠಲ ಹುದ್ದಾರ, ಮಂಜುನಾಥ ಗೊರಗುದ್ದಿ, ರುಕ್ಮಿಣಿ ಅಮ್ಮಣಗಿ, ಉಮಾ ಪೂಜಾರಿ, ಮಂಜುಳಾ ಅರಬಾಂವಿ ಮುಂತಾದವರು ಉಪಸ್ಥಿತರಿದ್ದರು.ಸಾವಿತ್ರಿ ಕೋಳಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ರಮೇಶ ಹೆಬ್ಬಾಳ ಸ್ವಾಗತಿಸಿದರು. ಶಿವಾನಂದ ಕಡಲಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ.ಡಿ.ಎಸ್.ಹುಗ್ಗಿ ನಿರೂಪಿಸಿದರು. ಮಾರುತಿ ಮರಡಿ ವಂದಿಸಿದರು.