ಪರಸ್ಪರ ಪ್ರೀತಿಸುತ್ತಿದ್ದ ದಾವಣಗೆರೆಯ ಅನ್ಯಕೋಮುಗಳ ಅಪ್ರಾಪ್ತ ಜೋಡಿಯೊಂದು ಪಟ್ಟಣದ ತುಂಗಭದ್ರಾ ಸೇತುವೆಯಿಂದ ನದಿಗೆ ಹಾರಿದ ಘಟನೆ ಮಂಗಳವಾರ ನಡೆದಿದೆ. ಅದೃಷ್ಟವಶಾತ್ ತರಚು ಗಾಯಗಳಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೊನ್ನಾಳಿ: ಪರಸ್ಪರ ಪ್ರೀತಿಸುತ್ತಿದ್ದ ದಾವಣಗೆರೆಯ ಅನ್ಯಕೋಮುಗಳ ಅಪ್ರಾಪ್ತ ಜೋಡಿಯೊಂದು ಪಟ್ಟಣದ ತುಂಗಭದ್ರಾ ಸೇತುವೆಯಿಂದ ನದಿಗೆ ಹಾರಿದ ಘಟನೆ ಮಂಗಳವಾರ ನಡೆದಿದೆ. ಅದೃಷ್ಟವಶಾತ್ ತರಚು ಗಾಯಗಳಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಾವಣಗೆರೆ ಬಾಡ ಕ್ರಾಸ್ ನಿವಾಸಿಗಳಾಗಿರುವ ಸಿಂಚನಾ ಹಾಗೂ ಸಮೀರ್ ಇಬ್ಬರೂ ಅಪ್ರಾಪ್ತರಾಗಿದ್ದು, ಪ್ರೀತಿಸುತ್ತಿದ್ದರು. ಇವರ ಪ್ರೇಮವಿವಾಹಕ್ಕೆ ಮನೆಯವರ ವಿರೋಧ ಇದ್ದುದರಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದರಂತೆ ತುಂಗಭದ್ರಾ ಸೇತುವೆಯಿಂದ ನದಿಗೆ ಹಾರಿದ್ದಾರೆ. ಇವರ ಗಮನಿಸಿದ ದಾರಿಹೋಕರು ತಕ್ಷಣವೇ ಪೊಲೀಸ್ ಠಾಣೆಗೆ ಪೋನ್ ಮಾಡಿದ್ದಾರೆ. ಹೊನ್ನಾಳಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ ನದಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಜೋಡಿಯನ್ನು ರಕ್ಷಿಸಿ, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಪ್ರೇಮಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. 2 ದಿನಗಳ ಹಿಂದೆ ಮೈಸೂರಿಗೆ ಹೋಗಿ, ನಂತರ ಶಿವಮೊಗ್ಗಕ್ಕೆ ವಾಪಸ್ ಬಂದಿರುವ ಇಬ್ಬರೂ, ಹೊನ್ನಾಳಿಗೆ ಆಗಮಿಸಿ ಸೇತುವೆ ಮೇಲಿಂದ ನದಿಗೆ ಹಾರಿದ್ದಾರೆ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಸಿಂಚನಾ ಪಾಲಕರು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಗಳ ಅಪಹರಣ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.
ಪೊಲೀಸ್ 112 ವಾಹನದ ಸಹಾಯಕ ಸಬ್ಇನ್ಸ್ಪೆಕ್ಟರ್ ಶಿವಾಜಿ ರಾವ್, ಹೊಯ್ಸಳ ಸಂಜೀವ್ ಕೊಟಗಿಮನಿ, ಚಂದ್ರಶೇಖರ್, ಗುಪ್ತಮಾಹಿತಿ ವರದಿಗಾರ ರಾಮಚಂದ್ರ ಅಪ್ರಾಪ್ತ ಪ್ರೇಮಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ಶ್ರಮಿಸಿದರು. ಅಗ್ನಿಶಾಮಕದಳ ಅಧಿಕಾರಿಗಳಾದ ಪರಶುರಾಮಪ್ಪ, ಬಸವರಾಜ್ ಅಕ್ಕಣನವರ, ನಿರಂಜನ, ವಿನಯ, ಗೌಡೇಶ್ ಪಾಟೇಲ್ ಜೋಡಿಗಳ ರಕ್ಷಣಾ ಕಾರ್ಯದಲ್ಲಿ ಶ್ರಮಿಸಿದರು ಎಂದು ಅಗ್ನಿಶಾಮಕದಳ ಅಧಿಕಾರಿ ಪರಶುರಾಮಪ್ಪ ತಿಳಿಸಿದ್ದಾರೆ.- - -