ಸಾರಾಂಶ
ಸೇತುವೆ ತಡೆಗೋಡೆಗಳಿಗೆ ವಾಹನಗಳು ಗುದ್ದಿ ಗೋಡೆಗಳು ವರ್ಷಗಳ ಹಿಂದೆಯೇ ಮುರಿದು ಹಳ್ಳ ಹಿಡಿದಿವೆ
ಕನ್ನಡಪ್ರಭ ವಾರ್ತೆ, ಕಡೂರುಶಿವಮೊಗ್ಗ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬರುವ ಕಡೂರು ಪಟ್ಟಣದ ವೇದಾ ಹಳ್ಳದ ಸೇತುವೆಗೆ ವಾಹನಗಳು ಬಿದ್ದು ಸಾವು, ನೋವುಗಳಂತ ನೂರಾರು ಗಂಭೀರ ಅಪಘಾತದ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಸಂಭಂದಿಸಿದ ಇಲಾಖೆ ಮಾತ್ರ ಕ್ರಮವಹಿಸದೇ ತನ್ನ ನಿರ್ಲಕ್ಷ್ಯತನ ಮುಂದುವರಿಸಿದ್ದು ಸಾರ್ವಜನಿಕರ ಕೋಪಕ್ಕೆ ಗುರಿಯಾಗಿದೆ.
ವೇದಾ ಹಳ್ಳದ ಸೇತುವೆ ಸರಣಿ ಅಪಘಾತದ ತಾಣವಾಗಿ ಸಾವಿಗೆ ಕೈ ಬೀಸಿ ಕರೆಯುತ್ತಿದೆ. ತಿಂಗಳಿಗೊಮ್ಮೆಯಾದರೂ ಬಸ್ಸು-ಲಾರಿಗಳ ಆದಿಯಾಗಿ ಲೆಕ್ಕವಿಲ್ಲದಷ್ಟು ಬೈಕು, ಸರಕು ಸಾಗಾಣಿಕೆ ಲಾರಿಗಳು ಮತ್ತು ಟ್ಯಾಂಕರ್ ಗಳ ನಡುವಿನ ಅಫಘಾತದಲ್ಲಿ ಜನರು ಬಲಿಯಾಗುತಿದ್ದರೂ ಕೂಡ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ನಿರ್ಲಕ್ಷ್ಯದ ಪರಮಾವಧಿ.ಈ ಸೇತುವೆ ಪಕ್ಕದಲ್ಲೇ ಇರುವ ಹಳೆಯ ಸೇತುವೆ ಇನ್ನು ಗಟ್ಟಿ ಮುಟ್ಟಾಗಿಯೇ ಇದೆ. ಆದರೆ ಹೊಸ ಸೇತುವೆಯಲ್ಲಿ ನಡೆಯುತ್ತಿರುವ ನಿರಂತರ ಅಫಘಾತದಿಂದ ಸೇತುವೆ ತಡೆಗೋಡೆಗಳಿಗೆ ವಾಹನಗಳು ಗುದ್ದಿ ಗೋಡೆಗಳು ವರ್ಷಗಳ ಹಿಂದೆಯೇ ಮುರಿದು ಹಳ್ಳ ಹಿಡಿದಿವೆ. ಅಫಘಾತ ನಡೆದಾಗ ಮಾತ್ರ ಪೊಲೀಸರು ಅಪಾಯದ ಟ್ಯಾಗನ್ನು ಕಟ್ಟುವುದು ಬಿಟ್ಟರೆ ಹೆದ್ದಾರಿ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗದೆ ಇರುವುದರಿಂದ ಅಪಘಾತಗಳು ನಡೆಯುತ್ತಲೇ ಇವೆ. ತಡೆಗೋಡೆ ದುರಸ್ತಿ ಮಾಡದೆ ತಾತ್ಕಾಲಿಕ ಸ್ಲಾಬ್ ಗಳನ್ನು ಹಾಕಿರುವುದರಿಂದ ಅವುಗಳನ್ನು ಮುಟ್ಟಿದರೆ ಹಳ್ಳಕ್ಕೆ ಬೀಳುತ್ತವೆ. ಹಾಗಾಗಿ ಜನರು ಜೀವ ಕೈಲಿ ಹಿಡಿದುಕೊಂಡೇ ಪ್ರಯಾಣಿಸುವಂತಾಗಿದೆ.ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ಸೊಂದು ತಡೆಗೋಡೆ ಇಲ್ಲದ ಕಾರಣ ಬೆಳಗಿನ ಜಾವ ಸೇತುವೆಯಿಂದ ಹಳ್ಳಕ್ಕೆ ಉರುಳಿ ಬಿದ್ದು ಸುಮಾರು 46 ಜನರು ಗಂಭೀರವಾಗಿ ಗಾಯಗೊಂಡಿದ್ದರೂ ಹೆದ್ದಾರಿ ಇಲಾಖೆ ಕ್ರಮ ಕೈಗೊಳ್ಳದೆ ಇಂದಿಗೂ ಅದೇ ಪರಿಸ್ಥಿತಿ ಮುಂದುವರಿದಿರುವುದು ಈ ಭಾಗದ ಜನರ ದೌರ್ಭಾಗ್ಯವೇ ಸರಿ.
ಹಳೆ ಮತ್ತು ಹೊಸ ಸೇತುವೆ ನಡುವೆಯೂ ಎರಡೂ ಕಡೆ ದೊಡ್ಡ ಕಂದಕ ಇರುವುದರಿಂದ ಎರಡೂ ಕಡೆ ತಡೆಗೋಡೆ ನಿರ್ಮಿಸಿ ರಾತ್ರಿ ವೇಳೆಯೂ ಗೋಚರಿಸುವಂತ ರೇಡಿಯಂ ಸ್ಟಿಕರ್ ಹಾಕಿ ಎಚ್ಚರಿಸದೇ ಇರುವುದರಿಂದ ರಾತ್ರಿ ವೇಳೆ ವಾಹನಗಳು ಬಿದ್ದು ಅನೇಕರು ಪ್ರಾಣ ಬಿಟ್ಟಿದ್ದಾರೆ.ಮೊನ್ನೆಯಷ್ಟೇ ಸೌದೆ ತುಂಬಿರುವ ಲಾರಿಯೊಂದು ರಾತ್ರಿ ವೇಳೆ ವೇದಾಹಳ್ಳದ ಸೇತುವೆ ಮೇಲೆ ಕಡೂರಿಗೆ ಬರುವಾಗ ಎದುರು ಬಂದ ಕ್ಯಾಂಟರ್ ಗಾಡಿಗೆ ಜಾಗ ಬಿಡಲು ಚಾಲಕ ಲಾರಿಯನ್ನು ಪಕ್ಕಕ್ಕೆ ತಿರುಗಿಸುವಾಗ ಕಂದಕಕ್ಕೆ ಬಿದ್ದು ನುಜ್ಜು ಗುಜ್ಜಾಯಿತು. ಇದನ್ನು ಜನರು, ಅಗ್ನಿಶಾಮಕದಳ ಸಿಬ್ಬಂದಿ ಬಂದು ರಕ್ಷಿಸಿದ ಫಲವಾಗಿಆಶ್ಚರ್ಯಕರ ರೀತಿಯಲ್ಲಿ ಚಾಲಕ ಪಾರಾಗಿದ್ದನು.ಈ ಸೇತುವೆ ಮೇಲೆಯೇ ಸರಣಿ ಅಪಘಾತಗಳು ನಡೆದು ಜನರು ಪ್ರಾಣ ಬಿಡುತ್ತಿದ್ದರೂ ಈ ವರೆಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ದುರಸ್ತಿಗೆ ಮುಂದಾಗಿಲ್ಲ. ಇನ್ನಾದರೂದಿಂತಹ ಅನಾಹುತಕ್ಕೆ ಅವಕಾಶಕ್ಕೆ ನೀಡದೆ ಹೆದ್ದಾರಿ ಇಲಾಖೆ ಕ್ರಮ ವಹಿಸಬೇಕು. ಸೇತುವೆ ದುರಸ್ತಿ ಮಾಡಿ ಹಳ್ಳಕ್ಕೆ ಬಿದ್ದು ಪ್ರಾಣ ಕಳೆದು ಕೊಲ್ಳುವವರನನ್ನು ರಕ್ಷಿಸಲು ಸೂಚನಾ, ಎಚ್ಚರಿಕೆ ಫಲಕ ಅಳವಡಿಸಿ ಅವ್ಯವಸ್ಥೆ ಸರಿಪಡಿಸಲು ಜನ ಆಗ್ರಹಿಸಿದ್ದಾರೆ.
14ಕೆಕೆಡಿಯು1.ಸಾವಿಗೆ ಆಹ್ವಾನಿಸುತ್ತಿರುವ ವೇದಾ ಹಳ್ಳದ ಸೇತುವೆ.